ಮನೆ ರಾಜಕೀಯ ರಾತ್ರೋರಾತ್ರಿ ಕಳಶ ಹೇಗೆ ಬಂತು ?: ಪ್ರತಾಪ್ ಸಿಂಹ ಪ್ರಶ್ನೆ

ರಾತ್ರೋರಾತ್ರಿ ಕಳಶ ಹೇಗೆ ಬಂತು ?: ಪ್ರತಾಪ್ ಸಿಂಹ ಪ್ರಶ್ನೆ

0

ಮೈಸೂರು(Mysuru): ನಾನು ಹೇಳಿಕೆ ಕೊಡುವ ಮುನ್ನ ಬಸ್‌ ನಿಲ್ದಾಣದ ಮೇಲೆ ಗುಂಬಜ್ ಮಾತ್ರ ಇತ್ತು. ರಾತ್ರೋರಾತ್ರಿ ಅದರ ಮೇಲೆ ಕಳಶ ಹೇಗೆ ಬಂತು? ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು.

ಇಲ್ಲಿನ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಶತಸಿದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿ, ಆ ಗುಂಬಜ್ ತೆರವಿಗೆ ನಾನು ನೀಡಿದ್ದ ಗಡುವಿನಲ್ಲಿ 2 ದಿನ ಬಾಕಿ ಇದೆ. ಅಷ್ಟರಲ್ಲಿ ತೆರವುಗೊಳಿಸದಿದ್ದರೆ, ಈಗಾಗಲೇ ಹೇಳಿದಂತೆ ನಾನೇ ತೆರವು ಮಾಡುತ್ತೇನೆ ಎಂದರು.

ತಮ್ಮ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗೆ–ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಅಂಬಾವಿಲಾಸ ಅರಮನೆಯ ಮೇಲಿನ ಗೋಪುರಕ್ಕೂ, ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ಲವೇ? ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿ ಎಂದು ಹೇಳಿದರು.

ಅರಮನೆಯ ಗೋಪುರ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ್ದು. ಬಸ್ ನಿಲ್ದಾಣದ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ? ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದಿದ್ದರೆ ಅಲ್ಲಿ ಅರ್ಧ ಚಂದ್ರ ಆಕೃತಿಯನ್ನೂ ಕಟ್ಟಿ ಬಿಡುತ್ತಿದ್ದರು ಎಂದು ಗುಡುಗಿದರು.

ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರ ಆತನ ಮನೆ ಮೇಲೆ ಗುಂಬಜ್, ಮಿನಾರ್ ಬೇಕಾದರೂ ಕಟ್ಟಿಕೊಳ್ಳಲಿ ಎಂದು ಆಕ್ರೋಶದಿಂದ ಹೇಳಿದರು.

ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಶಾಸಕ ಎಸ್.ಎ.ರಾಮದಾಸ್ ಮೌನ ವಹಿಸಿದ್ದಾರೆ ಎಂದರೆ ಸಹಮತ ಇದೆ ಎಂದೇ ಅರ್ಥ ಎಂದರು.

ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಕಿಲ್ಲ. ಆ ನಿಲ್ದಾಣ ನಿರ್ಮಾಣವಾಗಿರುವುದು ರಾಷ್ಟ್ರೀಯ ಹೆದ್ದಾರಿಯ ಜಾಗದಲ್ಲಿ. ಅನುಮತಿ ಪಡೆಯದೇ ಕಟ್ಟಲಾಗಿದೆ. ಜನರ ತೆರಿಗೆ ಹಣ ನಷ್ಟವಾಗದಿರಲೆಂದು ನಿಲ್ದಾಣ ಉಳಿಸಿ, ಗುಂಬಜ್ ಮಾತ್ರ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.

ಹಿಂದಿನ ಲೇಖನಸಾರಸ್ವತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನಿಂದ ರೈತ ಕುಟುಂಬಕ್ಕೆ ಅನ್ಯಾಯ:  ನ.ರಿಂದ ಬ್ಯಾಂಕ್ ಮುಂಭಾಗ ಅಮರಣಾಂತ ಉಪವಾಸ
ಮುಂದಿನ ಲೇಖನಪ್ರತಾಪ್ ಸಿಂಹ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು