ಮನೆ ರಾಜಕೀಯ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳುವ ವಿಶ್ವಾಸ: ಸಿಎಂ ಬೊಮ್ಮಾಯಿ

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳುವ ವಿಶ್ವಾಸ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಉಕ್ರೇನ್‌ ದೇಶದಲ್ಲಿ ಸಿಲುಕಿರುವ ಎಲ್ಲ ಭಾರತೀಯರೂ ಸುರಕ್ಷಿತವಾಗಿ ದೇಶಕ್ಕೆ ಮರಳುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಕೋರಿಕೆ ಸಲ್ಲಿಸಿದ್ದರು. ಅದನ್ನು ರಷ್ಯಾ ಕೂಡ ಒಪ್ಪಿಕೊಂಡಿದೆ. ಹೀಗಾಗಿ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬ ಭಾವನೆ ಇದೆ’ ಎಂದರು.

ಉಕ್ರೇನ್‌ನಲ್ಲಿರುವ ಕನ್ನಡಿಗರು ನೆರವು ಕೋರಿ ರಾಜ್ಯ ಸರ್ಕಾರವನ್ನು ಸಂಪರ್ಕಿಸುತ್ತಿದ್ದಾರೆ. ಅವರ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಹಂಚಿಕೊಳ್ಳಲಾಗಿದೆ. ರೊಮೇನಿಯಾ ಮತ್ತು ಇತರ ರಾಷ್ಟ್ರಗಳ ಗಡಿಭಾಗಳಲ್ಲಿ ಭಾರತೀಯರನ್ನು ಬರಮಾಡಿಕೊಂಡು ದೇಶಕ್ಕೆ ಕರೆತರಲಾಗುತ್ತಿದೆ. ಇದಕ್ಕಾಗಿ ಹಲವು ತಂಡಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಕೆಲವರ ಜತೆ ನಾನು ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲಿ ಸಿಲುಕಿರುವವರನ್ನು ಮೆಟ್ರೊ ಸುರಂಗ ಮಾರ್ಗಗಳಲ್ಲಿ ಇರಿಸಲಾಗಿದೆ. ಪಶ್ಚಿಮ ಭಾಗದಲ್ಲಿರುವವರು ಬೇಗ ದೇಶಕ್ಕೆ ಮರಳಲು ಸಾಧ್ಯ. ಪೂರ್ವ ಭಾಗದಲ್ಲಿರುವವರಿಗೆ ಸ್ವಲ್ಪ ಸಮಸ್ಯೆಗಳಿವೆ’ ಎಂದರು.

ರಷ್ಯನ್‌ ಭಾಷೆ ತಿಳಿದಿರುವ ರಾಜತಾಂತ್ರಿಕ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಉಕ್ರೇನ್‌ಗೆ ಕಳುಹಿಸಿದೆ. ಅವರು ಭಾರತೀಯರು ಸುರಕ್ಷಿತವಾಗಿ ಉಕ್ರೇನ್‌ನಿಂದ ಹೊರಬರಲು ನೆರವು ನೀಡಲಿದ್ದಾರೆ ಎಂದು ಹೇಳಿದರು.

ಹಿಂದಿನ ಲೇಖನದಸರಾ ಮಾದರಿಯಲ್ಲಿ ನಂದಿ ಗಿರಿಧಾಮದಲ್ಲಿ ಶಿವೋತ್ಸವ: ಸಚಿವ ಡಾ.ಕೆ.ಸುಧಾಕರ್
ಮುಂದಿನ ಲೇಖನನ್ಯಾಷನಲ್ ಕಾಲೇಜು ಮೈದಾನಕ್ಕೆ ಡಿ.ಕೆ. ಶಿವಕುಮಾರ್ ಮತ್ತಿತರ ಮುಖಂಡರ ಭೇಟಿ