ಮನೆ ಸುದ್ದಿ ಜಾಲ ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆ ಮರುನಾಮಕರಣದೊಂದಿಗೆ ಫೆ.22ಕ್ಕೆ ಪುನರಾರಂಭ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌

ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆ ಮರುನಾಮಕರಣದೊಂದಿಗೆ ಫೆ.22ಕ್ಕೆ ಪುನರಾರಂಭ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌

0

ಮೈಸೂರು(Mysuru): ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್‌ ರಸ್ತೆಯಲ್ಲಿರುವ ಜಯಚಾಮರಾಜೇಂದ್ರ ಅರಸು ಬೋರ್ಡಿಂಗ್‌ ಶಾಲೆಗೆ ‘ಚಾಮರಾಜೇಂದ್ರ ಸ್ಕೂಲ್‌ ಫಾರ್ ಎಕ್ಸಲೆನ್ಸ್‌’ ಎಂದು ಮರುನಾಮಕರಣ ಮಾಡಲಾಗಿದ್ದು, ಪ್ರಸಕ್ತ 2023–24ನೇ ಸಾಲಿನಿಂದ ಪುನರಾರಂಭಿಸಲಾಗುತ್ತಿದೆ ಎಂದು ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಯಚಾಮರಾಜ ಅರಸು ಶಿಕ್ಷಣ ಟ್ರಸ್ಟ್‌ ಅಡಿಯಲ್ಲಿ ನಡೆಸಲಾಗುವ ಈ ಶಾಲೆಯು ಫೆ.22ರಂದು ಉದ್ಘಾಟನೆಗೊಳ್ಳಲಿದೆ. ಸದ್ಯಕ್ಕೆ ಎಲ್‌’ಕೆಜಿಯಿಂದ 8ನೇ ತರಗತಿವರೆಗೆ ಇರಲಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಹಾಗೂ ಪಿಯು ಶಿಕ್ಷಣಕ್ಕೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ನಗರದ ಹೃದಯ ಭಾಗದಲ್ಲಿ 9 ಎಕರೆ ಪ್ರದೇಶದಲ್ಲಿ ಹರಡಿದ್ದು, ಪರಿಸರ ಸ್ನೇಹಿ ವಾತಾವರಣ ಹೊಂದಿದೆ. ಎಲ್ಲ ಬಡಾವಣೆಗಳಿಂದಲೂ ಉತ್ತಮ ಸಂಪರ್ಕವಿದೆ. ಪ್ರತಿ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಹಾಗೂ ಇಂದಿನ ಆಧುನಿಕತೆ ಅನುಗುಣವಾಗಿ ನವೀನ ತಾಂತ್ರಿಕ ಶೈಕ್ಷಣಿಕ ಸೌಲಭ್ಯಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ಒದಗಿಸುವ ಟ್ರಸ್ಟ್‌’ನ ಉದ್ದೇಶವನ್ನು ಇಲ್ಲೂ ಮುಂದುವರಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌’ಇಪಿ–2020) ಅನ್ವಯ ಕಲಿಕಾ ಚಟುವಟಿಕೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

1957ರಲ್ಲಿ ಜಯಚಾಮರಾಜ ಒಡೆಯರ್‌ ಅವರು ಟ್ರಸ್ಟ್‌ ಆರಂಭಿಸಿದ್ದರು. ಅದರಡಿ ಶಾಲೆ ನಡೆಸಲಾಗುತ್ತಿತ್ತು. ಕಾರಣಾಂತರಗಳಿಂದ, ವಿದ್ಯಾರ್ಥಿಗಳ ಪ್ರವೇಶಾತಿ ಕುಸಿದಿದ್ದರಿಂದ ಶಾಲೆಯನ್ನು ಮೂರು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಬಳಿಕ ಜೀರ್ಣೋದ್ಧಾರ ಮಾಡಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದವರಿಗೂ ಕೈಗೆಟಕುವಂತೆ ಶುಲ್ಕ ನಿಗದಿಪಡಿಸಲಾಗಿದೆ. ಚಟುವಟಿಕೆ ಆಧಾರಿತವಾದ ಕಲಿಕೆಗೆ ಒತ್ತು ನೀಡಲಾಗುವುದು. ಅನುಭವಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ವಿಶಾಲವಾದ ಆಟದ ಮೈದಾನವಿದೆ ಎಂದು ವಿವರಿಸಿದರು.

ಶಾಲೆಯ ಆವರಣದಲ್ಲಿ ಜ.29ರಂದು 3ರಿಂದ 12 ವರ್ಷಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಬಹುಮಾನ, ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು.

ಆಸಕ್ತರು ಮಾಹಿತಿಗೆ ಮೊ.ಸಂಖ್ಯೆ: 99028 96323 ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಯಚಾಮರಾಜ ಅರಸು ಶಿಕ್ಷಣ ಟ್ರಸ್ಟ್‌ ಉಪಾಧ್ಯಕ್ಷೆ ಭಾರತಿ, ಗೌರವ ಕಾರ್ಯದರ್ಶಿ ಮಹೇಶ್ ಅರಸ್, ಟ್ರಸ್ಟ್‌ ಕಮಿಟಿ ಸದಸ್ಯ ಬಾಲಚಂದ್ರ ಹಾಗೂ ಸರ್ದಾರ್‌ ಶ್ರೀಕಂಠರಾಜೇ ಅರಸ್ ಇದ್ದರು.

‘ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇ’: ಸರ್ಕಾರದ ನಿರ್ಧಾರಕ್ಕೆ ಸ್ವಾಗತ

ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ವೇಗೆ ಹೆಸರು ನಾಮಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯದುವೀರ, ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸರ್ಕಾರದ ಅಧಿಕಾರವದು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಕಾವೇರಿ ನದಿಯ ಹೆಸರಿಡಬೇಕು ಎಂದು ಚರ್ಚೆಯಾಗುತ್ತಿದೆ. ಎರಡು ಸಲಹೆಗಳೂ ಚೆನ್ನಾಗಿವೆ ಎಂದು ಹೇಳಿದರು.

ದೇವಿಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇ ವಿಷಯವಿದ್ದರೂ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಪ್ರತಿಕ್ರಿಯೆ ನೀಡುತ್ತಾರೆ. ಅದು ಅವರಿಗೆ ಸಂಬಂಧಿಸಿದ ವಿಷಯವಾಗಿದೆ ಎಂದರು.

ಹಿಂದಿನ ಲೇಖನಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ರದ್ದಿಗೆ ಒತ್ತಾಯ
ಮುಂದಿನ ಲೇಖನಗೂಗಲ್’ಗೆ ₹1,337 ಕೋಟಿ ದಂಡ: ಎನ್’ಸಿಎಲ್ಎಟಿ ಪರಿಹಾರ ನಿರಾಕರಣೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ