ಮನೆ ಸುದ್ದಿ ಜಾಲ ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ: ಸಿಎಂ ಬೊಮ್ಮಾಯಿ  

ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ: ಸಿಎಂ ಬೊಮ್ಮಾಯಿ  

0

ಬೆಂಗಳೂರು (Bengaluru)- ನವಭಾರತಕ್ಕಾಗಿ ನವಕರ್ನಾಟಕದ ನಿರ್ಮಾಣದ ಧ್ಯೇಯವನ್ನು ಸಾಕಾರಗೊಳಿಸಲು ನಿರ್ಮಾಣ ಸಂಸ್ಥೆಗಳು  ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಟನ್ನಲಿಂಗ್ ಮತ್ತು ಅಂಡರಗ್ರೌಂಡಿಂಗ್ ಕನ್ಸಟ್ರಕ್ಷನ್ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘ ನಿರ್ಮಾಣ 2022ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ನಿರ್ಮಾಣ ಕಾರ್ಯಗಳಲ್ಲಿ ನಿರ್ಮಾಣ ಸಂಸ್ಥೆಗಳು ತಮ್ಮ ವೃತ್ತಿಪರತೆ, ನಿರ್ವಹಣಾ ಕೌಶಲ್ಯಗಳೊಂದಿಗೆ ಸರ್ಕಾರದೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಭಾರತದ ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ ಆಶಯವನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಸ್ಥೆಗಳು ಉತ್ತಮ ದೇಶವನ್ನು ಕಟ್ಟುವ ಕಾಯಕದಲ್ಲಿ ಒಟ್ಟಾಗಿ ಶ್ರಮಿಸಬೇಕು. ಗುಡ್ಡಪ್ರದೇಶಗಳು, ಭೂಗತ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ಅಂಡರ್‍ಗ್ರೌಂಡ್ ಕಾಮಗಾರಿಗಳಲ್ಲಿನ ಪರಿಣಿತಿಯೊಂದಿಗೆ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ :

ಸಾರ್ವಜನಿಕರ ಸುಲಲಿತ ಓಡಾಟಕ್ಕೆ ದಾರಿ ಮಾಡಿಕೊಡುವುದು ಸಾರ್ಥಕವಾದ ಕಾರ್ಯ. ಕರ್ನಾಟಕ ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಡ್ಯಾಂ, ಸುರಂಗ, ವಿದ್ಯುತ್ ಯೋಜನೆಗಳನ್ನು ಈಗಾಗಲೇ ನಿರ್ಮಿಸಿ ನಮ್ಮ ಹಿರಿಯರು ಉತ್ತಮ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ರಾಜ್ಯದಲ್ಲಿ 1970ರಿಂದಲೂ ಬಹಳಷ್ಟು ಸುರಂಗಗಳನ್ನು ನಿರ್ಮಿಸಲಾಗಿದೆ. ಜಲವಿದ್ಯುತ್ ಯೋಜನೆಗಳಲ್ಲಿ ಪೆನ್ಸ್ಟಾಕ್‍ಗಳ ಸ್ಥಾಪನೆಗೆ ಸುರಂಗಗಳನ್ನು ಕೊರೆಯಲಾಗಿದೆ. ಮೆಟ್ರೋ ಕಾಮಗಾರಿಗಳಿಗೆ ಟನಲಿಂಗ್ ನಿಂದ ಸುರಂಗಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದರು.

ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು :

ನಗರ ಪ್ರದೇಶಗಳಲ್ಲಿ ಸುರಂಗಮಾರ್ಗ ನಿರ್ಮಿಸುವುದು ಸವಾಲಿನ ಕೆಲಸ. ಇಂತಹ ಸವಾಲುಗಳನ್ನು ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ಕ್ಲಿಷ್ಟಕರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಇಂಜಿನಿಯರ್ ಹಾಗೂ ಅಂಡರ್‍ಗ್ರೌಂಡ್ ನಿರ್ಮಾಣ ಕಂಪನಿಗಳಿಗೆ ಅಭಿನಂದನೆಗಳು. ಇಲ್ಲಿನ ಕಾರ್ಮಿಕರ ಕೊಡುಗೆ ಅತಿ ಹೆಚ್ಚಿನದು. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಅಂಡರ್‍ಗ್ರೌಂಡ್ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು ನಿಜವಾದ ದೇಶದ ಆಸ್ತಿಯಾಗಿದ್ದು, ಇವರ ಹಿತರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ಸವಾಲುಗಳಿಗೆ ತಕ್ಕಂತೆ ತಂತ್ರಜ್ಞಾನವೂ ಆಧುನೀಕರಣಗೊಂಡಿದೆ :

ಸುರಂಗ ಮಾರ್ಗವೂ ಸೇರಿದಂತೆ ಅಂಡರ್‍ಗ್ರೌಂಡ್ ನಿರ್ಮಾಣಗಳು ಪ್ರಪಂಚಕ್ಕೆ ಹೊಸದಲ್ಲ. ಆದರೆ ಈ ನಿರ್ಮಾಣಗಳಲ್ಲಿ ಎದುರಾಗುವ ಸವಾಲುಗಳಿಗೆ ತಕ್ಕಂತೆ ತಂತ್ರಜ್ಞಾನವೂ ಆಧುನೀಕರಣಗೊಂಡಿದೆ.  ಸುರಂಗಗಳು ರೈಲು ರಸ್ತೆ ಸಾರಿಗೆಯಾಗಿ ಬಳಕೆಯಾಗುತ್ತಿತ್ತು. ಈಗ ಪೈಪ್‍ಲೈನ್‍ಗಳಲ್ಲಿ ಅನಿಲ, ನೀರಿನ ಸರಬರಾಜುಗಳಿಗೂ ಸುರಂಗಗಳನ್ನು ಬಳಸಲಾಗುತ್ತಿದೆ. ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಹಸಿಯಾದ ಮನುಷ್ಯ ಈ ಸುರಂಗ ಮಾರ್ಗಗಳ ನಿರ್ಮಾಣದಲ್ಲಿ ಬೆಟ್ಟಗಳು, ಆಳವಾದ ಸಮುದ್ರ ಹೀಗೆ ಎದುರಾಗುವ ಎಲ್ಲ ತೊಡಕುಗಳನ್ನು ತೊಡೆಯಬಲ್ಲವನಾಗಿದ್ದಾನೆ. ಹ್ಯಾಂಡ್‍ಮೇಡ್ ಸಣ್ಣ ಸುರಂಗಗಳಿಂದ ಹಿಡಿದು ದೊಡ್ಡ ಸುರಂಗಮಾರ್ಗಗಳ ನಿರ್ಮಾಣದವರೆಗೆ ತಂತ್ರಜ್ಞಾನದ ಬೆಳವಣಿಗೆಯಾಗಿದೆ. ಸುರಂಗ ಮಾರ್ಗಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗುವ ಭೌಗೋಳಿಕ ಸವಾಲುಗಳು ಹಾಗೂ ತ್ಯಾಜ್ಯದ ನಿರ್ವಹಣೆಗೆ ವೈಜ್ಞಾನಿಕ ವ್ಯವಸ್ಥೆ ಅಗತ್ಯವಾಗಿದೆ ಎಂದರು.

ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿಯು 2000 ತರಬೇತಿ ಶಿಬಿರಗಳನ್ನು ದೇಶಾದ್ಯಂತ ನಡೆಸಿರುವುದು ಶ್ಲಾಘನೀಯ. ನಿರ್ಮಾಣ ಕ್ಷೇತ್ರದ ಅಭಿವೃದ್ಧಿಗೆ ಟನಲಿಂಗ್ ಮತ್ತು ಅಂಡರ್‍ಗ್ರೌಂಡಿಂಗ್ ಕನ್ಸಟ್ರಕ್ಷನ್ ಕುರಿತ ಸಮಾವೇಶ ಸಹಕಾರಿಯಾಗಲಿದೆ ಎಂದರು.

ಹಿಂದಿನ ಲೇಖನಪ್ರತಿ ಕ್ವಿಂಟಾಲ್‌ಗೆ 3377 ರೂ.‌‌ದರದಲ್ಲಿ ರಾಗಿ ಖರೀದಿಗೆ ಸರ್ಕಾರ ಆದೇಶ
ಮುಂದಿನ ಲೇಖನಮದುವೆಯಾಗಿ ಮರುಕ್ಷಣವೇ ಕಾಲೇಜಿಗೆ ಬಂದು ಪರೀಕ್ಷೆ ಬರೆದ ಯುವತಿ