ಮನೆ ಸ್ಥಳೀಯ ಕುಕ್ಕರಹಳ್ಳಿ ಕೆರೆಗೆ ಕಾಯಕಲ್ಪ- ಇನ್ ಟ್ಯಾಕ್ ಸಂಸ್ಥೆಗೆ ಡಿಪಿಆರ್ ಸಿದ್ಧಪಡಿಸಿ ಜೂನ್ ಅಂತ್ಯದೊಳಗೆ ವರದಿ ನೀಡಲು...

ಕುಕ್ಕರಹಳ್ಳಿ ಕೆರೆಗೆ ಕಾಯಕಲ್ಪ- ಇನ್ ಟ್ಯಾಕ್ ಸಂಸ್ಥೆಗೆ ಡಿಪಿಆರ್ ಸಿದ್ಧಪಡಿಸಿ ಜೂನ್ ಅಂತ್ಯದೊಳಗೆ ವರದಿ ನೀಡಲು ಸೂಚನೆ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು  ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆಗೆ ವಹಿಸಿದ್ದು ಜೂನ್ ಅಂತ್ಯದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

Join Our Whatsapp Group

ಇಂದು ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಕುಕ್ಕರಹಳ್ಳಿ ಕೆರೆ ಯೋಜನಾ ಅನುಷ್ಠಾನ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಳ್ಳಿ ಕೆರೆಯ ವೀಕ್ಷಣೆಗೆ ಪ್ರತಿದಿನವೂ ಸಾವಿರಾರು ಜನರು ಬರುತ್ತಿರುತ್ತಾರೆ. ಅಂತಹ ಸ್ಥಳವನ್ನು ಸದಾ ಸ್ವಚ್ಛ ಹಾಗೂ ಸುಂದರವಾಗಿ ಇರುವಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.

ಕುಕ್ಕರಳ್ಳಿ ಕೆರೆಯ ಸುತ್ತಲು ಇರುವ ಅನಧಿಕೃತ ಒಳ ಚರಂಡಿಗಳನ್ನು ಮುಚ್ಚಿಸಿ ಅಲ್ಲಿಂದ ಕೆರೆ ನೀರಿಗೆ  ಬರುತ್ತಿದ್ದಂತಹ ಕೊಳಚೆ ನೀರನ್ನು ತಡೆಗಟ್ಟಬೇಕು. ಶುದ್ಧ ನೀರನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಕ್ಕರಳ್ಳಿ ಕೆರೆಯ ವ್ಯಾಪ್ತಿಯಲ್ಲಿ ಕೆಲವೊಂದು ಕಡೆ ಕಸದ ರಾಶಿ ಕಂಡುಬರುತ್ತಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಬೇಕು. ಆ ಸ್ಥಳಗಳಲ್ಲಿ ಪಾರ್ಕ್, ಕೂರಲು ಹಾಸನದ ವ್ಯವಸ್ಥೆ ಇತ್ಯಾದಿ ಉಪಯುಕ್ತ ಕೆಲಸಕ್ಕೆ ಬಳಸಿ ಸಾರ್ವಜನಿಕರಿಗೆ ಸಹಾಯವಾಗುವಂತೆ ಮಾರ್ಪಡಿಸಬೇಕು ಎಂದರು.

ಸುತ್ತ-ಮುತ್ತಲಿನ ಶಬ್ದ ಮಾಲಿನ್ಯದಿಂದ ಕೆರೆಯ ಒಳಗಿರುವ ಪ್ರಾಣಿ-ಪಕ್ಷಿಗಳಿಗೆ ತೊಂದರೆಯುಟೆಗುತ್ತಿದ್ದು, ಅದನ್ನು ತಡೆಯಲು ಸಾರ್ವಜನಿಕರಿಗೆ ಸೂಚನಾ ಫಲಕಗಳ ಮೂಲಕ ಮಾಹಿತಿ ನೀಡಿ ಶಬ್ದವನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಶುದ್ಧವಾದ ನೀರು, ಗಾಳಿ ಸಿಗುವಂತಹ ವಾತಾವರಣವನ್ನು ನಿರ್ಮಿಸಬೇಕು. ಕೆರೆಯೊಳಗೆ ಇರುವಂತಹ ಬೇಡದ ದೋಣಿಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕರು ಕೆರೆಯೊಳಗೆ ಹೋಗದಂತೆ ನಿಗಾವಹಿಸಬೇಕು ಎಂದರು.

ಪರಿಣಿತರಿಂದ ಕುಕ್ಕರಹಳ್ಳಿ ಅಭಿವೃದ್ಧಿ ಸಂಬಂಧ ಯೋಜನೆ ಅನುಷ್ಠಾನಕ್ಕೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಸಲಹೆ ಸ್ವೀಕರಿಸಿ,  ಈಗಾಗಲೇ ಕೈಗೊಂಡಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಎನ್ ಎನ್ ಮಧು, ಮೂಡ ಆಯುಕ್ತರಾದ ದಿನೇಶ್, ಇಂಟ್ಯಾಕ್ ಸಂಸ್ಥೆಯ ಅಧಿಕಾರಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು,ಮೈಸೂರು ಪರಂಪರೆ ಸಮಿತಿಯ ಸದಸ್ಯರು ಸೇರಿದಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಕ್ಕರಹಳ್ಳಿ ಕೆರೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.