ಕೊಪ್ಪಳ: ಅಂಗನವಾಡಿ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ದಿಡೀರನೆ ಉದುರಿ ಬಿದ್ದಿದ್ದರಿಂದ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ನಗರದಲ್ಲಿ ನಡೆದಿದೆ.
ಮಹೆಬೂಬ್ ನಗರದಲ್ಲಿರೋ 11 ನೇ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕಾಂಕ್ರಿಟ್ ಉದುರಿ ಬಿದ್ದಿದೆ.
ಇಂದು ಮುಂಜಾನೆ ಅಂಗನವಾಡಿಗೆ 20ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದವು. ಆದರೆ ಮುಂಜಾನೆ 10.30ರ ಸಮಯದಲ್ಲಿ ದಿಡೀರನೆ ಕಾಂಕ್ರೀಟ್ ಉದುರಿ ಬಿದ್ದಿದೆ. ಇದರಿಂದ ನಾಲ್ಕು ಮಕ್ಕಳ ತಲೆ ಮತ್ತು ಕಾಲುಗಳಿಗೆ ಗಾಯವಾಗಿವೆ. ಮೆಹಬೂಬ್ ನಗರದ ಅಮನ್, ಮನ್ವಿತ್,ಮದ೯ನ್, ಸುರಕ್ಷಾ ಅನ್ನೋ ಮಕ್ಕಳು ಗಾಯಗೊಂಡಿವೆ.
ಗಾಯಗೊಂಡ ಮಕ್ಕಳನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿವೆ. ಇನ್ನು ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ನಗರಸಭೆ ಅಧ್ಯಕ್ಷ ಮತ್ತು ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಮೆಹಬೂಬ್ ನಗರದಲ್ಲಿ ನಿರ್ಮಾಣವಾಗಿರೋ ಅಂಗನವಾಡಿ ಕಟ್ಟಡ ತೀರಾ ಹಳೆಯ ಕಟ್ಟಡವೇನಲ್ಲಾ. ಈ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ ಕೇವಲ ಏಳು ವರ್ಷವಾಗಿದೆ. ಏಳೇ ವರ್ಷಕ್ಕೆ ಕಟ್ಟಡದ ಕಾಮಗಾರಿ ಅಸಲಿಯತ್ತು ಬಯಲಾಗಿದೆ.
ಕಳಪೆ ಕಾಮಗಾರಿಯಿಂದಲೇ ಈ ಘಟನೆ ನಡೆದಿದ್ದು ಇದಕ್ಕೆ ಕಾರಣವಾಗಿರೋ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.