ನವದೆಹಲಿ : ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ಪರಿಣಾಮ ಜನರ ಮೇಲೆ ಹೆಚ್ಚು ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಚಿವರಿಗೆ ಕರೆ ನೀಡಿದ್ದಾರೆ. 5 ರಾಷ್ಟ್ರಗಳ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ ಬೆನ್ನಲ್ಲೇ ಗುರುವಾರ ಸಂಜೆ ಸೇವಾ ತೀರ್ಥದಲ್ಲಿ ತಮ್ಮ ಮಂತ್ರಿ ಮಂಡಲದ ಎಲ್ಲಾ ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದರು.
ಈ ಸಭೆಯಲ್ಲಿ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಜನಸಮೂಹದ ಮೇಲೆ ಬೀರುತ್ತಿರುವ ಸಂಭಾವ್ಯ ಪರಿಣಾಮ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕೆ ಇರುವ ಸವಾಲುಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ 2047ರ ವಿಕಸಿತ ಭಾರತ ನಿರ್ಮಾಣ ಗುರಿ ಸಾಧಿಸಲು ಬಾಕಿಯಿರುವ ಕೆಲಸಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ಪ್ರಧಾನಿ ತಮ್ಮ ಮಂತ್ರಿ ಮಂಡಲದ ಎಲ್ಲಾ ಸಚಿವರಿಗೆ ಸೂಚಿಸಿದ್ದಾರೆ.
2047ರ ವಿಕಸಿತ ಭಾರತ ಗುರಿ ತಲುಪಲು ಬಾಕಿಯಿರುವ ಎಲ್ಲಾ ಕೆಲಸಗಳನ್ನು ಬೇಗ ಮುಗಿಸಬೇಕು. ಇದು ಕೇವಲ ಘೋಷಣೆ ಮಾತ್ರ ಆಗಬಾರದು. ಇದರ ಗುರಿ ಈಡೇರಬೇಕು. ಇದರ ನಡುವೆ ತಮ್ಮ 3ನೇ ಅವಧಿ ಸರ್ಕಾರ 2 ವರ್ಷ ಪೂರೈಸುತ್ತಿದ್ದು, ಆಗಬೇಕಾದ ಕೆಲಸಗಳು ಎಲ್ಲೆಲ್ಲಿ ಬಾಕಿಯಿವೆ ಎಂಬುದನ್ನು ಗುರುತಿಸಬೇಕೆಂದು ಸಚಿವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರಾಚ್ಯದ ಯುದ್ಧದ ಕುರಿತು ಮಾತನಾಡಿರುವ ಮೋದಿ, ಈ ಸಂಕಷ್ಟದ ಸಮಯವನ್ನು ಹೇಗೆ ನಿಭಾಯಿಸಬೇಕು, ತೈಲ ಆಮದು ಮಾಡಿಕೊಳ್ಳಲು ಯಾವ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಹಾಗೂ ಯುದ್ಧದ ಪರಿಣಾಮ ಜನರ ಮೇಲೆ ಬೀರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ಸಭೆಯಲ್ಲಿ 6ಕ್ಕೂ ಹೆಚ್ಚು ಸಚಿವಾಲಯಗಳು ಪ್ರಸ್ತುತಿ ನೀಡಿದ್ದು, 9 ಸಚಿವಾಲಯಗಳು ಕಾರ್ಯಯೋಜನೆ ಮತ್ತು ಭವಿಷ್ಯದ ಮಾರ್ಗಸೂಚಿಯ ಕುರಿತು ವಿವರವಾದ ವರದಿ ಸಲ್ಲಿಸಿವೆ. ಈ ವೇಳೆ ಸಂಪುಟ ಕಾರ್ಯದರ್ಶಿ ಮತ್ತು ನೀತಿ ಆಯೋಗಗಳು ಕೂಡ ಪ್ರಸ್ತುತಿ ಸಲ್ಲಿಸಿವೆ.


















