ಮನೆ ಅಪರಾಧ ಮೈಸೂರು: ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ್ದ ದಂಪತಿಗಳ ಬಂಧನ

ಮೈಸೂರು: ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ್ದ ದಂಪತಿಗಳ ಬಂಧನ

0

ಮೈಸೂರು(Mysuru): ಕೆಎಸ್‌’ಆರ್‌’ಟಿಸಿ ಅಧಿಕಾರಿಗಳಿಗೆ ಮಾರಕಾಸ್ತ್ರ ತೋರಿಸಿ ಕೊಲೆ ಬೆದರಿಕೆ ಹಾಕಿದ ಆರೋಪಿ ದಂಪತಿಯನ್ನು ವಿರಾಜಪೇಟೆಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌ ತಿಳಿಸಿದರು.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಸಂಕೀರ್ಣವನ್ನು ಶಫೀಕ್ ಅಹ್ಮದ್‌ 12 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದು, ₹1.89 ಕೋಟಿ ಬಾಡಿಗೆ ಪಾವತಿ ಮಾಡಿರಲಿಲ್ಲ. ಕಟ್ಟಡ ತೆರವುಗೊಳಿಸಲು ಡಿ.10ರ ಶನಿವಾರ ವಿಭಾಗೀಯ ಸಾರಿಗೆ ಅಧಿಕಾರಿ ಮರೀಗೌಡ ಅವರು ಸಿಬ್ಬಂದಿಯೊಂದಿಗೆ ತೆರಳಿದ್ದಾಗ, ಬಾಡಿಗೆದಾರ ಶಫೀಕ್ ಅಹ್ಮದ್, ಅವರ ಪತ್ನಿ ಹಾಗೂ ಮೂವರು ಮಹಿಳೆಯರು ಬೆದರಿಕೆ ಹಾಕಿದ್ದರು ಎಂದು ಮಾಹಿತಿ ನೀಡಿದರು.

ಮಚ್ಚು ತೋರಿಸಿ ಕತ್ತರಿಸಿ ಬಿಡುವುದಾಗಿ ಕೊಲೆ ಬೆದರಿಕೆ ಹಾಕುತ್ತಿರುವ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿ ಮರೀಗೌಡ ಉದಯಗಿರಿ ‍ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದರು.

ದಂಪತಿ ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಗುರುವಾರ ರಾತ್ರಿ ದಂಪತಿಯನ್ನು ವಿರಾಜಪೇಟೆ ಸಮೀಪ ಬಂಧಿಸಲಾಗಿದೆ. ಇಬ್ಬರ ಮೇಲೂ ರೌಡಿಶೀಟ್ ತೆರೆದು, ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಜೊತೆಯಲ್ಲಿದ್ದ ಮೂವರನ್ನು ಗುರುತಿಸಿ ವಶಕ್ಕೆ ಪಡೆಯುವ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್‌.ಶಶಿಧರ್‌ ನೇತೃತ್ವದಲ್ಲಿ ಉದಯಗಿರಿ ಠಾಣೆ ಇನ್‌’ಸ್ಪೆಕ್ಟರ್ ಪಿ.ಕೆ.ರಾಜು, ಎಸ್‌’ಐ ಸುನಿಲ್‌, ರಾಜು, ರೂಪೇಶ್‌, ಸಿಬ್ಬಂದಿ ಸಿದ್ದಿಕ್ ಅಹ್ಮದ್‌, ವಿನೋದ್‌ ರಾಥೋಡ್‌, ಮಲ್ಲಿಕಾರ್ಜುನ್, ನಾಜಿಯಾ ಭಾನು, ಸಂತೋಷ್‌, ಸಮೀರ್, ಶಿವರಾಜಪ್ಪ, ಗೋಪಾಲ್‌, ರವಿಕುಮಾರ್‌, ಕುಮಾರ್‌ ಭಾಗವಹಿಸಿದ್ದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ, ಎಸಿಪಿ ಎಂ.ಎನ್‌.ಶಶಿಧರ್‌ ಇದ್ದರು.

ಹಿಂದಿನ ಲೇಖನವಿರಕ್ತ ಮಠದಲ್ಲಿ ಅವಿರಕ್ತ ನಡೆ ಸರಿಯೇ ? : ಹೈಕೋರ್ಟ್
ಮುಂದಿನ ಲೇಖನಇಬ್ಬರು ರೌಡಿಶೀಟರ್‌’ಗಳ ಗಡಿಪಾರು: ಮೈಸೂರು ನಗರ ಪೊಲೀಸ್ ಕಮಿಷನರ್‌