ಮನೆ ರಾಜಕೀಯ ರಾಷ್ಟ್ರೀಯ ಪಕ್ಷಗಳು ಬಡವರ ಮಕ್ಕಳ ಬದುಕಿನ ಜತೆ ಚೆಲ್ಲಾಟ ಆಡುತ್ತಿವೆ: ಹೆಚ್ ಡಿಕೆ

ರಾಷ್ಟ್ರೀಯ ಪಕ್ಷಗಳು ಬಡವರ ಮಕ್ಕಳ ಬದುಕಿನ ಜತೆ ಚೆಲ್ಲಾಟ ಆಡುತ್ತಿವೆ: ಹೆಚ್ ಡಿಕೆ

0

ಚನ್ನಪಟ್ಟಣ: ಹಿಜಾಬ್ ಮತ್ತು ಕೇಸರಿ ಶಾಲು ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಚನ್ನಪಟ್ಟಣದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿವಾದ ಮತ್ತು ಗಲಾಟೆಗೆ ಚಿತಾವಣೆ ನೀಡುತ್ತಿರುವ ವ್ಯಕ್ತಿಗಳ ಮಕ್ಕಳು ಇಂಗ್ಲಿಷ್ ಕಾನ್ವೆಂಟ್ ಗಳಲ್ಲಿ ನೆಮ್ಮದಿಯಾಗಿ ಓದುತ್ತಿದ್ದರೆ ಬಡವರ ಮಕ್ಕಳಿಗೆ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಹಾಕಿ ಗಲಾಟೆಗೆ ಅವರನ್ನು ಗುರಾಣಿಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು, ವಿವಾದಗಳ ಹಿಂದಿರುವ ಸಂಘಟನೆ, ಪಕ್ಷಗಳ ವಿರುದ್ಧ ಹರಿಹಾಯ್ದರು.

ಇದು ಹಲವಾರು ದೇಶಗಳಲ್ಲಿ ಚರ್ಚೆ ಮಾಡುವ ಹಂತಕ್ಕೆ ಹಿಜಾಬ್ ವಿವಾದವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್ – ಬಿಜೆಪಿ ಪಕ್ಷಗಳ ಜತೆಗೆ ಹಲವು ಸಂಘಟನೆಗಳಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳುತ್ತೇನೆ. ಅಮಾಯಕ, ಮುಗ್ಧ ಮಕ್ಕಳ ಬದುಕಿನ ಜೊತೆಗೆ ಚೆಲ್ಲಾಟ ಅಡುತ್ತಿದ್ದಿರಿ. ಇದು ಸರಿಯಲ್ಲ

ಈ ಸಂಘರ್ಷ ಯಾವ ಶಾಲೆಗಳಲ್ಲಿ ನಡೆಯುತ್ತಿದೆ? ಇದು ದೊಡ್ಡದೊಡ್ಡ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ? ಇಲ್ಲ. ಬಿಜೆಪಿ ನಾಯಕರು, ಕಾಂಗ್ರೆಸ್‌ ನಾಯಕರು ಹಾಗೂ ವಿವಾದದ ಹಿಂದಿರುವ ಸಂಘಟನೆಗಳ ನಾಯಕರ ಮಕ್ಕಳು ಯಾರೂ ಸರಕಾರಿ ಶಾಲೆಗಳಲ್ಲಿ ಅವರ ಮಕ್ಕಳನ್ನು ಓದಿಸುತ್ತಿಲ್ಲ. ಅವರೆಲ್ಲರೂ ಸಹ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ.

ಬಿಜೆಪಿ ನಾಯಕರು ತಾವು ಜನ್ಮಕೊಟ್ಟ ಮಕ್ಕಳ ಹೆಗಲ ಮೇಲೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರಾ? ಅದೂ ಇಲ್ಲ. ಅವರ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಹೋರಾಟ ಯಾಕೆ ಮಾಡಿಸುತ್ತಿಲ್ಲ. ಅಮಾಯಕ, ಬಡಮಕ್ಕಳ ಮಕ್ಕಳ ಹೆಗಲ ಮೇಲೆ ಕೇಸರಿ ಶಾಲು ಹಾಕಿಸಿ ಹೋರಾಟ ಮಾಡಿಸುತ್ತಿದ್ದಾರೆ.

ಇನ್ನೊಂದು ಗುಂಪು ಹಿಜಾಬ್ ಹೆಸರಿನಲ್ಲಿ ಹೋರಾಟ ಮಾಡಿಸಿ ಅವರು ಬೇಳೆ ಬೇಯಿಸಿಕೊಳ್ಳಲು ಹೊರಟ್ಟಿದ್ದಾರೆ. ಇಲ್ಲಿ ಅಮಾಯಕ ಮಕ್ಕಳು, ಖಾಸಗಿ ಶಾಲೆಯಲ್ಲಿ ಓದುವ ಶಕ್ತಿ ಇಲ್ಲದೆ ಸರಕಾರಿ ಶಾಲೆಗಳಲ್ಲಿ  ಓದುತ್ತಿರುವ ಮಕ್ಕಳು ಈ ವಿವಾದಗಳಿಗೆ ಗುರಾಣಿಗಳು ಆಗುತ್ತಿದ್ದಾರೆ. ಸರಕಾರಿ ಶಾಲೆಗಳ ಮಕ್ಕಳು ಬಲಿ ಆಗುತ್ತಿದ್ದಾರೆ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಹೀನ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ. ಮಕ್ಕಳ ಪೋಷಕರು ಸಹ ಈ ವಿವಾದಗಳ ಹಿಂದಿರುವ ದುರುದೇಶವನ್ನು ಅರ್ಥ ಮಾಡಿಕೊಳ್ಳಬೇಕು.

ಎಲ್ಲ ಕಡೆ ಪೊಲೀಸರು ಪ್ರತಿಭಟನೆ ಮಾಡುತ್ತಿರುವ ಮಕ್ಕಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ನಾಳೆಯ ದಿನ ಆ ಮಕ್ಕಳ ವಿರುದ್ಧ ಕೇಸುಗಳು ದಾಖಲಾಗಿ ಅವರು ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದರೆ ಅವರ ಭವಿಷ್ಯ ಕಥೆ ಏನು? ಒಮ್ಮೆ ಪೊಲೀಸ್ ಕೇಸು ಬಿದ್ದರೆ ಅವರ ಜೀವನವೇ ಹಾಳಾಗುತ್ತದೆ. ಎಲ್ಲೂ ಕೆಲಸ ಸಿಗುವುದಿಲ್ಲ. ತೆವಲಿಗೆ, ತಮ್ಮ ಬೇಳೆ ಬೇಯಿಸಿಕೊಳ್ಳಲು  ರಾಜಕೀಯ ಪಕ್ಷಗಳು, ಸಂಘಟನೆಗಳು ಮಕ್ಕಳನ್ನು ಈ ವಿವಾದಗಳಿಗೆ ಬಳಕೆ ಮಾಡಿಕೊಳ್ಳುತ್ತಿವೆ.

ಮುಂದೆ ಮಕ್ಕಳ ಈ ವಿಡಿಯೋಗಳನ್ನು ಇಟ್ಟುಕೊಂಡು ಕೇಸುಗಳನ್ನು ಹಾಕಿ ಅವರನ್ನು ಕೋರ್ಟ್ ಕಚೇರಿಗಳಿಗೆ ಅಲೆಯುವಂತೆ  ಮಾಡುತ್ತಾರೆ. ಈಗಾಗಲೇ ಕೆಲ ಕಡೆ ಮಕ್ಕಳ ಮೇಲೆ FIR ಆಗಿದೆ ಎಂದು ಮಾಹಿತಿ ಇದೆ. ಇದು ನಿರಂತರವಾಗಿ ನಡೆಯುತ್ತದೆ. ಕೆಲ ಮಕ್ಕಳಿಗೆ ಎರಡು ಹೊತ್ತಿನ ಊಟಕ್ಕೂ ಇಲ್ಲದ ಕಷ್ಟದ ಪರಿಸ್ಥಿತಿ ಇದೆ. ಅಂತಹ ಮಕ್ಕಳ ಜೀವನದಲ್ಲಿ ಇವರು ಚೆಲ್ಲಾಟ ಆಡುತ್ತಿದ್ದಾರೆ. ಸಾವಿರಾರು ಜನ ಮಕ್ಕಳ ಮೇಲೆ ಕೇಸ್ ಬೀಳಲಿದೆ. ಇಂಥ ಹೀನ ಕೆಲಸವನ್ನು ಮೊದಲು ರಾಜಕೀಯ ಪಕ್ಷಗಳು ನಿಲ್ಲಿಸಬೇಕು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ನ್ಯಾಯಾಯಲಗಳ ಮೇಲೆ ಒತ್ತಡ ಮಾಡಲು ಸಾಧ್ಯವಿಲ್ಲ. ನ್ಯಾಯಾಂಗ ಇದರಲ್ಲಿ ಮಧ್ಯಸ್ಥಿಕೆ ವಹಿಸಿ ಈ ಪ್ರಕರಣವನ್ನ ತಿಳಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಹಿಜಾಬ್-ಕೇಸರಿ ಶಾಲು ವಿವಾದ ರಾಜಕೀಯ ತಿರುವು ಪಡೆದದ್ದು ನೋವಿನ ಸಂಗತಿ: ವಾಟಾಳ್ ನಾಗರಾಜ್
ಮುಂದಿನ ಲೇಖನಹಿಜಾಬ್ ಪರ, ವಿರೋಧದ ಪ್ರತಿಭಟನೆಗಳಿಗೆ ಅನುಮತಿ ಇಲ್ಲ​: ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ