ಮನೆ ರಾಜ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ

0

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪೂರ್ವ, ಪಶ್ಚಿಮ, ಯಲಹಂಕ ಹಾಗೂ ದಕ್ಷಿಣ ವಲಯ ವ್ಯಾಪ್ತಿಯಲ್ಲಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಇಂದು ನಡೆಸಲಾಯಿತು.

ಪೂರ್ವ ವಲಯ:

ಪೂರ್ವ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು 6 ವಿಧಾನ ಸಭಾ ಕ್ಷೇತ್ರಗಳಾದ ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ, ಸರ್ವಜ್ಞನಗರ ಮತ್ತು ಹೆಬ್ಬಾಳ ವ್ಯಾಪ್ತಿಯಲ್ಲಿ ನಡೆಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆಗಳ ಮೇಲ್ಚಾವಣಿ, ತಳ್ಳುವ ಗಾಡಿ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಅದರಂತೆ, ಪೂರ್ವ ವಲಯ ವ್ಯಾಪ್ತಿಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಒ.ಎಫ್.ಸಿ ಕೇಬಲ್ ತೆರವುಕಾರ್ಯಾಚರಣೆ ನಡೆಸಲಾಗಿದ್ದು, ಈ ಪೈಕಿ 13 ಕಿ.ಮೀ ವ್ಯಾಪ್ತಿಯ ರಸ್ತೆಯಲ್ಲಿ 104 ತಳ್ಳುವ ಗಾಡಿ ಜಪ್ತಿ ಮಾಡಲಾಗಿದೆ. 54 ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡ ಅಂಗಡಿ ಮುಂಗಟ್ಟುಗಳ ಮೇಲ್ಚಾವಣಿ, 19 ಅನಧಿಕೃತ ನಾಮಫಲಕಗಳು, 7000 ಮೀಟರ್ ಅನಧಿಕೃತ ಒ.ಎಫ್.ಸಿ ಕೇಬಲ್‌ಗಳು ಹಾಗೂ 5 ಅನಧಿಕೃತ ಪೆಟ್ಟೆಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲು ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆ, ತಳ್ಳುವ ಗಾಡಿ ಹಾಗೂ ಅನಧಿಕೃತ ಓ.ಎಫ್.ಸಿ ಕೇಬಲ್ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸುತ್ತಾ ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಕೆ.ಆರ್.ಪಲ್ಲವಿರವರು ಕೋರಿರುತ್ತಾರೆ.

ಪಶ್ಚಿಮ ವಲಯ:

ಪಶ್ಚಿಮ ವಲಯದ ಮಹಾಲಕ್ಷ್ಮೀಪುರಂ ವಿಭಾಗ ನಾಗಪುರ ವಾರ್ಡ್ ನಲ್ಲಿ ಅನಧಿಕೃತವಾಗಿರುವ ಓ.ಎಫ್.ಸಿ.ಕೇಬಲ್‌ಗಳು ಹಾಗೂ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಡೆಸುತ್ತಿರುವ ಅಂಗಡಿಗಳನ್ನು ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಜೊತೆಗೆ ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.

ನಾಗಪುರ ವಾರ್ಡ್ 1ನೇ ಬ್ಲಾಕ್ ರಾಜಾಜಿನಗರ, 10ನೇ ಅಡ್ಡರಸ್ತೆ ಹಾಗೂ 19ನೇ ಮುಖ್ಯರಸ್ತೆ ಸೇರಿ 1.20 ಕಿ.ಮೀ ಅನಧಿಕೃತ ಓ.ಎಫ್.ಸಿ ಕೇಬಲ್‌ಗಳು ಹಾಗೂ ಅನಧಿಕೃತವಾಗಿ ಫುಟ್ ಪಾತ್ ಮೇಲೆ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಹಾಗೂ ರಸ್ತೆ ಬದಿಯಲ್ಲಿ ಶೇಖರಣೆಯಾಗಿರುವ ಕಲ್ಲು, ಮಣ್ಣು, ಜಾಹೀರಾತು ಫಲಕಗಳು ಹಾಗೂ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲಾಗಿರುತ್ತದೆ.

ಅನಧಿಕೃತ ಓ.ಎಫ್.ಸಿ. ಕೇಬಲ್‌ಗಳ ತೆರವು ಕಾರ್ಯಾಚರಣೆಯಲ್ಲಿ ವಿದ್ಯುತ್ ವಾಹನದ ಲ್ಯಾಡರ್ ಹಾಗೂ ಅನಧಿಕೃತವಾಗಿ ಪಾದಚಾರಿ ಮಾರ್ಗದ ಮೇಲೆ ನಡೆಸುತ್ತಿರುವ ಅಂಗಡಿಗಳನ್ನು ರಸ್ತೆಯ ಎರಡು ಬದಿಗಳಲ್ಲಿ ಸುಮಾರು 1.20 ಕಿ.ಮೀ ಉದ್ದದ ರಸ್ತೆಯಲ್ಲಿನ ಅಡ್ಡಲಾಗಿರುವ ಎಲ್ಲಾ ಅಡಚಣೆಗಳನ್ನು ತೆರವುಗೊಳಿಸಿ ಸಾರ್ವಜನಿಕರು ಓಡಾಡಲು ಅನುವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಓ.ಎಫ್.ಸಿ.ಕೇಬಲ್‌’ಗಳನ್ನು ಮತ್ತು ಅನಧಿಕೃತ ಅಂಗಡಿಗಳನ್ನು ನಡೆಸಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಸ್ಥೆ ಅಥವಾ ಸಂಬಂಧಪಟ್ಟವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

ಪಶ್ಚಿಮ ವಲಯ ಚಾಮರಾಜಪೇಟೆ ವಾರ್ಡ್ ನ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಿಂದ 9ನೇ ಅಡ್ಡರಸ್ತೆಯವರೆಗೆ ಒಟ್ಟು 0.80 ಕಿ.ಮೀ. ಅನಧೀಕೃತವಾಗಿ ಪಾದಚಾರಿ ಮಾರ್ಗ ದಲ್ಲಿ ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಯಲಹಂಕ ವಲಯ:

ಯಲಹಂಕ ವಲಯ ವ್ಯಾಪ್ತಿಯಲ್ಲಿಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ರೈತರ ಸಂತೆ, ಸಹಕಾರನಗರ ಮುಖ್ಯ ರಸ್ತೆ, ಕೊಡಿಗೇಹಳ್ಳಿ ಮುಖ್ಯ ರಸ್ತೆ, ಅಟ್ಟೂರು ಲೇಔಟ್ ಮುಖ್ಯ ರಸ್ತೆ, ಬಿ.ಇ.ಎಲ್ ಲೇಔಟ್ ವಿದ್ಯಾರಣ್ಯಪುರ ಹಾಗೂ ಎನ್.ಟಿ.ಐ ಲೇಔಟ್ ನಲ್ಲಿ ನಡೆಸಲಾದೆ.

ದಕ್ಷಿಣ ವಲಯ:

ದಕ್ಷಿಣ ವಲಯ ಪದ್ಮನಾಭನಗರ ವ್ಯಾಪ್ತಿಯ ಬನಶಂಕರಿ ಉಪವಿಭಾಗದ ಗಣೇಶ ಮಂದಿರ, ಬಿ.ಡಿ.ಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ 24ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, 17ನೇ ಮುಖ್ಯರಸ್ತೆ, 22ನೇ ಅಡ್ಡರಸ್ತೆ ಮತ್ತು 23ನೇ ಅಡ್ಡರಸ್ತೆಯಲ್ಲಿದ್ದ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗುವಂತೆ ನಡೆಸುತ್ತಿದ್ದ ವ್ಯಾಪಾರ ವಹಿವಾಟುಗಳನ್ನು ಇಂದು ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಗಿದ್ದ 8 ತಳ್ಳುವ ಗಾಡಿ, 2 ಕೇಬಲ್, 10 ಆಟೋ ಕ್ರೇಟ್, 1 ಜಾಹಿರಾತು ಫಲಕಗಳು, 2 ಶೆಡ್‌ಗಳು ಹಾಗೂ 2 ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಯಿತು.

ಹಿಂದಿನ ಲೇಖನಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರು ಜಿಲ್ಲಾ ಪ್ರವಾಸ
ಮುಂದಿನ ಲೇಖನನಮಿಪೆ ಅನವರತಾ