ಸಂಭಲ್: ಉತ್ತರ ಪ್ರದೇಶದ ಸಂಭಲ್ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದ್ದು ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು ಜೊತೆಗೆ ಡಿಸೆಂಬರ್ 1 ರವರೆಗೆ ಹೊರಗಿನವರು ನಗರದೊಳಗೆ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹಿಂಸಾಚಾರದಲ್ಲಿ 25ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ 36 ಮಂದಿ ಗಾಯಗೊಂಡಿದ್ದಾರೆ. ಘರ್ಷಣೆಯ ಹಿನ್ನೆಲೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ್ದು ಅದರಂತೆ ಪ್ರದೇಶ ಸುತ್ತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು ಜೊತೆಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಜನರು ಗುಂಪು ಗುಂಪಾಗಿ ಸೇರದಂತೆ ಆದೇಶ ಹೊರಡಿಸಲಾಗಿದೆ.
ಆದರೆ ಈ ಎಲ್ಲದರ ನಡುವೆ ಸಮೀಕ್ಷೆ ವೇಳೆ ಹಿಂಸಾಚಾರ ಭುಗಿಲೆಳಲು ಕಾರಣ ಏನು ಎಂಬ ಪ್ರಶ್ನೆ ಏಳತೊಡಗಿದೆ. ಏಕೆಂದರೆ ಇದಕ್ಕೂ ಮುನ್ನ ಮಸೀದಿ ಸಮೀಕ್ಷೆ ನಡೆಸಲಾಗಿತ್ತು ಈ ವೇಳೆ ಶಾಂತಿಯುತವಾಗಿ ನಡೆಸಲಾಗಿತ್ತು. ಆದರೆ ಈ ಭಾರಿ ಘರ್ಷಣೆ ನಡೆದು ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲು ಕಾರಣ ಏನೆಂಬುದೇ ನಿಗೂಢವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಸೀದಿ ಸಮೀಕ್ಷೆ ವೇಳೆ ಅಲ್ಲಿ ನೆರೆದಿದ್ದ ಜನರ ಗುಂಪು ಘೋಷಣೆಗಳನ್ನು ಕೂಗಲು ಆರಂಭಿಸಿದ್ದು ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದೇ ಘರ್ಷಣೆ ನಡೆಯಲು ಕಾರಣ ಎನ್ನಲಾಗಿದೆ. ಸದ್ಯ ಸಂಭಲ್ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಸಿಬಂದಿಗಳನ್ನು ನೇಮಿಸಲಾಗಿದೆ.