ಮನೆ ಮನರಂಜನೆ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿ

ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯಸ್ವಾಮಿ ಸನ್ನಿಧಿ

0

ಬೆಂಗಳೂರು ಮಹಾನಗರದ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ವಿಶ್ವೇಶ್ವರ ಪುರ ದೇವಾಲಯಗಳ ಬೀಡೂ ಹೌದು. ಇಲ್ಲಿರುವ ಶ್ರೀವಲ್ಲೀ ದೇವಸೇನಾ ಸಹಿತ ಶ್ರೀ ಸುಬ್ರಹ್ಮಣ್ಯ ದೇವಾಲಯ ಅತ್ಯಂತ ಪ್ರಖ್ಯಾತವಾದ್ದು.

Join Our Whatsapp Group

ಮಹಾರಾಷ್ಟ್ರದಿಂದ ವಲಸೆ ಬಂದ ನೂಲು ವ್ಯಾಪಾರಿ ಹಾಗೂ ಮಹಾನ್ ದಾನಿ ಸಜ್ಜನರಾವ್ ಅವರು 22.6.1934ರಲ್ಲಿ ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ವಿುಸಿದರು ಎಂದು ದೇವಾಲಯದ ಪ್ರಾಕಾರದಲ್ಲಿರುವ ಶಿಲಾಶಾಸನ ಸಾರುತ್ತದೆ. 

ಶಿಲಾಮಯವಾದ ದೇವಾಲಯ ವಿಜಯನಗರ ಶೈಲಿಯಲ್ಲಿದ್ದು ಮಹಾದ್ವಾರಬಂಧ, ರಾಜಗೋಪುರ, ಪ್ರದಕ್ಷಿಣ ಪ್ರಾಕಾರ, ಅಂತರಾಳ, ಸುಖನಾಸಿ ಹಾಗೂ ಮೂರು ಗರ್ಭಗುಡಿಗಳನ್ನು ಒಳಗೊಂಡಿದೆ. ಮೂರೂ ಗರ್ಭಗೃಹದ ಮೇಲೆ ಮೂರು ಪ್ರತ್ಯೇಕ ಗೋಪುರವಿದ್ದು, ಈ ದೇವಾಲಯ ತ್ರಿಕೂಟಾಚಲ ಎಂದೂ ಕರೆಸಿಕೊಂಡಿದೆ.

ದ್ವಾರಬಂಧದ ಮೇಲೆ ಐದು ಅಂತಸ್ತುಗಳ ಭವ್ಯ ರಾಜಗೋಪುರವಿದ್ದು, ಇದು ಈಡೀ ದೇವಾಲಯಕ್ಕೆ ಕಳಶಪ್ರಾಯವಾಗಿದೆ. ಗೋಪುರದ ತುದಿಯಲ್ಲ ಪಂಚಕಳಶಗಳಿವೆ. ದ್ವಾರಬಂಧದ ಬಾಗಿಲವಾಡದಲ್ಲಿ ಗಂಡಬೇರುಂಡ ಲಾಂಛನವಿದ್ದರೆ ಎಡ ಬಲದ ಗೂಡುಗಳಲ್ಲಿ ಸರಸ್ವತಿ ಹಾಗೂ ಲಕ್ಷ್ಮಿಯ ಮೂರ್ತಿಗಳಿವೆ. ಗೋಪುರದ ಪ್ರತಿ ಹಂತದಲ್ಲೂ ದ್ವಾರಪಾಲಕರು, ಋಷಿಮುನಿಗಳು, ಶಿವ, ಪಾರ್ವತಿ, ಸುಬ್ರಹ್ಮಣ್ಯ, ಗಣಪತಿಯೇ ಮೊದಲಾದ ಹಲವಾರು ದೇವತಾಮೂರ್ತಿಗಳ ಹಾಗೂ ಸುತ್ತಲೂ ಇರುವ ಗಾರೆ ಗಚ್ಚಿನ ಗೂಡುಗಳಲ್ಲಿ ಸುಬ್ರಹ್ಮಣ್ಯನ ಲೀಲೆಗಳ ಗಾರೆಯ ಶಿಲ್ಪಗಳಿವೆ.

ದ್ವಾರದ ಮೂಲಕ ಒಳ ಪ್ರವೇಶಿಸುತ್ತಿದ್ದಂತೆ ಧ್ವಜಸ್ತಂಭ, ಬಲಿಪೀಠ, ದೇವಾಲಯದ ಒಳ ಪ್ರಾಕಾರ ಮತ್ತು ಮುಖ ಮಂಟಪ ಕಾಣುತ್ತದೆ. ಕಲ್ಲುಗಳಿಂದ ನಿರ್ಮಿಸಿ ಮೇಲೆ ಗಾರೆಯ ಗೋಪುರಗಳನ್ನು ನಿರ್ಮಿಸಲಾಗಿದೆ.

ಇಲ್ಲಿರುವ ಮೂರು ಗರ್ಭಗೃಹಗಳ ಪೈಕಿ ಎಡ ಭಾಗದ ಮೊದಲ ಗರ್ಭಗೃಹದಲ್ಲಿ ಚಿಂತಾಮಣಿ ಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿದ್ದರೆ, ಮಧ್ಯದ ಪ್ರಧಾನ ಗರ್ಭಗೃಹದಲ್ಲಿ  ವಲ್ಲೀ ದೇವಸೇನಾ ಸಮೇತ ಸುಬ್ರಹ್ಮಣ್ಯನ ಮೂರ್ತಿಯನ್ನೂ, ಮತ್ತೊಂದರಲ್ಲಿ ರಾಧಾ ರುಕ್ಮಿಣಿ ಸಮೇತ ಕೃಷ್ಣನ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ.

ಇನ್ನು ದೇವಾಲಯದ ಪ್ರದಕ್ಷಿಣಾ ಪ್ರಾಕಾರದಲ್ಲಿ  ಕಾಲಭೈರವ, ದಕ್ಷಿಣಾಮೂರ್ತಿ, ಚಂಡಿಕೇಶ್ವರ, ತಾಂಡವೇಶ್ವರ,  ಆಂಜನೇಯ,  ನಟರಾಜ ಹಾಗೂ ನವಗ್ರಹ ಮಂಟಪಗಳಿವೆ. ದೇವಾಲಯದ ನಿರ್ಮಾತೃ ಸಜ್ಜನರಾವ್ ಪ್ರತಿಮೆಯೂ ಇದೆ. ಪ್ರದಕ್ಷಿಣ ಪ್ರಾಕಾರದ ಕಿಟಕಿಯ ಮೇಲೆ ದಕ್ಷಿಣಾ ಮೂರ್ತಿಯ ಸುಂದರ ಗಾರೆಯ ಶಿಲ್ಪವೂ ಇದೆ.

ಇಲ್ಲಿನ ಸುಬ್ರಹ್ಮಣ್ಯೇಶ್ವರ ಕ್ಷೀರಾಭಿಷೇಕಪ್ರಿಯನಂತೆ. ಹೀಗಾಗಿ ಇಲ್ಲಿ ಗೆ ಬರುವ ಭಕ್ತರು ವಿವಿಧ ಬೇಡಿಕೆಯೊಂದಿಗೆ ಬಂದು ಕ್ಷೀರಾಭಿಷೇಕ ಮಾಡಿಸುತ್ತಾರೆ. ಹರಕೆ ಹೊರುತ್ತಾರೆ. ಹರಕೆ ನೆರವೇರಿದ ಬಳಿಕ ಬಂದು ಪೂಜೆ ಮಾಡಿಸುತ್ತಾರೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್.

2012ರ ಫೆಬ್ರವರಿ 29ರಂದು ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ.ಶ್ರೀ. ಭಾರತೀತೀರ್ಥ ಮಹಾ ಸ್ವಾಮಿಗಳ ಅಮೃತ ಹಸ್ತದಿಂದ ರಾಜಗೋಪುರದ ಕುಂಭಾಭಿಷೇಕ ಮಹೋತ್ಸವ ನಡೆದಿತ್ತು ಎಂದು ಸಾರುವ ಫಲಕವೂ ಇಲ್ಲಿದೆ.

ದೇವಾಲಯದಲ್ಲಿ ನಿತ್ಯ ಅದ್ವೈತ ಪದ್ಧತಿಯ ರೀತ್ಯ ಅರ್ಚನೆ, ಸಹಸ್ರನಾಮ, ಕ್ಷೀರಾಭಿಷೇಕ, ವಿಭೂತಿ ಅಭಿಷೇಕ, ಕಲ್ಯಾಣೋತ್ಸವವೇ ಮೊದಲಾದ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಪ್ರತಿ ಮಂಗಳವಾರ ಮತ್ತು ಷಷ್ಠಿಯಂದು ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ.

ಆಷಾಢಮಾಸದಲ್ಲಿ ಆಡಿಕೃತ್ತಿಕೆಯ ಕಾವಡಿ ಉತ್ಸವ ಇಲ್ಲಿ ನಡೆಯುತ್ತದೆ. ಮಾರ್ಗಶಿರ ಶುದ್ಧ ಬಿದಿಗೆಯಿಂದ ದಶಮಿವರೆಗೆ ಮಹಾರಥೋತ್ಸವ ಪೂಜೆಗಳು ನಡೆದು ವಾರ್ಷಿಕ ಮಹಾ ರಥೋತ್ಸವ ಜರುಗುತ್ತದೆ. 23 ಅಡಿ ಎತ್ತರದ ಬೆಳ್ಳಿಯ ತೇರಿನಲ್ಲಿ ಸುಬ್ರಹ್ಮಣ್ಯ ದೇವರ ಮೆರವಣಿಗೆ ನೋಡುವುದೇ ಒಂದು ಸೊಗಸು. ರಥೋತ್ಸವದ ದಿನ ಇಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ರಥೋತ್ಸವಕ್ಕೆ ಸಾಕ್ಷಿಯಾಗುತ್ತಾರೆ. .

ಹಿಂದಿನ ಲೇಖನಹಾಸನ ವಿಧಾನಸಭಾ ಕ್ಷೇತ್ರ: ನಿಷ್ಠಾವಂತರ ಕಾರ್ಯಕರ್ತರಿಗೇ ಟಿಕೆಟ್‌ ಎಂದ ಹೆಚ್’ಡಿ’ಕೆ
ಮುಂದಿನ ಲೇಖನಕೇರಳ: ರೈಲಿಗೆ ಬೆಂಕಿ ಇಟ್ಟ ಪ್ರಕರಣದ ಆರೋಪಿ ಶಾರುಖ್ ಸೈಫಿಗೆ 14 ದಿನಗಳ ನ್ಯಾಯಾಂಗ ಬಂಧನ