ಮನೆ ರಾಜಕೀಯ ಎಚ್‌ ಡಿಕೆ ಹೇಳಿದ ದಿನ ಮಂಡ್ಯದಲ್ಲಿ ಸುಮಲತಾ ಪ್ರಚಾರ: ಆ‌ರ್.ಅಶೋಕ್‌

ಎಚ್‌ ಡಿಕೆ ಹೇಳಿದ ದಿನ ಮಂಡ್ಯದಲ್ಲಿ ಸುಮಲತಾ ಪ್ರಚಾರ: ಆ‌ರ್.ಅಶೋಕ್‌

0

ಮಂಡ್ಯ:ಕಾಂಗ್ರೆಸ್ಸಿಗರು ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಭಯೋತ್ಪಾದಕರ ತಂಗುದಾಣವನ್ನಾಗಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ
ಮಾಡಿದ್ದಾರೆ.

Join Our Whatsapp Group


ಮಂಡ್ಯ ನಗರದ ಹೊರ ವಲಯದಲ್ಲಿರುವ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್‌ ಪ್ರಕರಣದಲ್ಲಿ ಭಾಗಿಯಾಗಿದವರನ್ನು ಸಹೋದರರ ಹೆಸರಿನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಕ್ಷಣೆ ಮಾಡಲು ಮುಂದಾಗಿದ್ದರು ಎಂದು ದೂರಿದ್ದಾರೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣವನ್ನು ವ್ಯವಹಾರಿಕ ದ್ವೇಷದಿಂದ ಬೇರೆ ಹೊಟೇಲ್‌ನವರು ಕೃತ್ಯವನ್ನು ಮಾಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದರು. ಸ್ಪರ್ಧಾತ್ಮಕ ಪೈಪೋಟಿಯಿಂದ ಬೇರೆ ಹೊಟೇಲ್‌ನವರು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್‌ ಪ್ರಕರಣ ನಡೆದಾಗಲೂ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿದರು.ಬೆಂಗಳೂರಿನ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ನಾವು ಒತ್ತಾಯಿಸಿದ್ದೆವು.ಆದರೂ ಸರ್ಕಾರ ವಹಿಸಲು ಹಿಂದೇಟು ಹಾಕಿತು. ವಿಷಯ ತಿಳಿದು ಎನ್‌ಐಎ ಸ್ವತಃ ಧಾವಿಸಿ ತನಿಖೆ ಆರಂಭಿಸಿತ್ತು. ಮೂರು ದಿನಗಳ ಬಳಿಕ ಸರ್ಕಾರ ಎನ್‌ಐಗೆ ವಹಿಸುವ ಕೆಲಸ ಮಾಡಿತು ಎಂದರು.
ಭಯೋತ್ಪಾದಕರ ಬಗ್ಗೆ ಮೃದು ಧೋರಣೆ
ಬೆಂಗಳೂರಿನ ಜನ ಭಯಭೀತರಾಗಿದ್ದಾರೆ. ರಾಜ್ಯದಲ್ಲೂ ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ರಾಮೇಶ್ವರಂ ಹೊಟೇಲ್ ಬಾಂಬ್ ಬ್ಲಾಸ್ಟ್‌ನಿಂದಾಗಿ ಇಡೀ ಬೆಂಗಳೂರು ತಲ್ಲಣಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಯೋತ್ಪಾದಕರನ್ನು ಸಹೋದರರು ಎನ್ನುವ ಕಾಂಗ್ರೆಸ್ಸಿಗರು ಮೃಧು ಧೋರಣೆ ಅನುಸರಿಸುತ್ತಿದ್ದಾರೆ. ಭಯೋತ್ಪಾದಕ ಘಟನೆ ಎಂದು ಬಟಾ ಬಯಲಾಗಿದ್ದರೂ ಸಹ ಅವರ ಬಗ್ಗೆ ಸಾಫ್ಟ್‌ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೂ ಏನೂ ಮಾಡಲಿಲ್ಲ. ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದರು.
ಏ.14ರಂದು ಮೈಸೂರಿಗೆ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿಯವರು ಏ.14ರಂದು ಮೈಸೂರಿಗೆ ಭೇಟಿ ನೀಡಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದಿನ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾಲ್ಕೂ ಜಿಲ್ಲೆಗಳ ಎನ್‌ಡಿಎ ಅಭ್ಯರ್ಥಿಗಳಾದ ಮೈಸೂರಿನ ಯಧುವೀರ್, ಮಂಡ್ಯದ ಎಚ್.ಡಿ. ಕುಮಾರಸ್ವಾಮಿ, ಚಾಮರಾಜನಗರದ ಬಾಲರಾಜು ಹಾಸನದ ಪ್ರಜ್ವಲ್ ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸುವರು ಎಂದರು.
ಪ್ರಧಾನಿ ಮೋದಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಅಂದಿನ ಸಭೆಯಲ್ಲಿ ನಾಲ್ಕೂ ಜಿಲ್ಲೆಗಳಿಂದ ಹೆಚ್ಚಿನ ಜನರು ಬರಲಿದ್ದಾರೆ. ದೊಡ್ಡ ಮಟ್ಟದ ಕಾರ್ಯಕ್ರಮನ್ನು ರೂಪಿಸಲಾಗುವುದು ಎಂದು ಹೇಳಿದರು.
ಮಂಡ್ಯಗೆ ಕುಮಾರಣ್ಣ, ಇಂಡಿಯಾಗೆ ನರೇಂದ್ರಮೋದಿ ಎಂದು ನಾವು ಹೇಳುತ್ತೇವೆ. ಕಾಂಗ್ರೆಸ್ಸಿಗರು ಮಂಡ್ಯಕ್ಕೆ ಕಂಟ್ರಾಕ್ಟರ್, ಇಂಡಿಯಾಗೆ ರಾಹುಲ್‌ ಎನ್ನುತ್ತಾರೆ. ನಮ್ಮಲ್ಲಿ ಪ್ರಧಾನಿ ಒಬ್ಬರೇ ಅದು ನರೇಂದ್ರ ಮೋದಿ. ಕಾಂಗ್ರೆಸ್ಸಿನಲ್ಲಿ ಯಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರ ಕೂಡ
ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಕಳೆದ 10 ವರ್ಷಗಳಿಂದ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ. 10 ವರ್ಷಗಳಿಂದ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ಸಿಗರು 50 ವರ್ಷ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರರು. ಗರೀಬಿ ಹಠಾವೋ, 3ಜಿ, 4ಜಿ, ಭೂಮಿಯೊಳಗೆ, ಆಕಾಶದಲ್ಲಿ ಎಲ್ಲಕಡೆ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿಯವರು ದೇಶ ಕಾಯುವ ಕಾವಲುಗಾರನಾಗಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ನಾವು ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುಮಲತಾ ಸ್ಟಾರ್ ಕ್ಯಾಂಪೇನರ್
ಸಂಸದೆ ಸುಮಲತಾ ಅಂಬರೀಶ್ ಅವರು ನಮ್ಮ ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವಾಗ ದಿನಾಂಕ ಗೊತ್ತುಪಡಿಸುತ್ತಾರೋ ಅಂದು ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.
ಕೇವಲ ಮಂಡ್ಯ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಶುದ್ಧ ಮನಸ್ಸಿನಿಂದ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮೋದಿಯವರ ಸಮಾವೇಶದಲ್ಲೂ ವೇದಿಕೆ ಮೇಲೆ ಇರಲಿದ್ದಾರೆ ಎಂದು ಹೇಳಿದರು.