ಮನೆ ರಾಜ್ಯ ಜೂ.23 ರಿಂದ ಇವಿ ಚಾರ್ಜಿಂಗ್ ಸೆಂಟರ್ ಗಳ ಕುರಿತು ಅಭಿಯಾನ: ಸಚಿವ ವಿ.ಸುನಿಲ್‌  ಕುಮಾರ್‌

ಜೂ.23 ರಿಂದ ಇವಿ ಚಾರ್ಜಿಂಗ್ ಸೆಂಟರ್ ಗಳ ಕುರಿತು ಅಭಿಯಾನ: ಸಚಿವ ವಿ.ಸುನಿಲ್‌  ಕುಮಾರ್‌

0

ಬೆಂಗಳೂರು (Bengaluru): ಇದೇ ತಿಂಗಳ 23 ರಿಂದ 30 ರವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್ ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಇವಿ ಜಾಗೃತಿ ಪೋರ್ಟಲ್ ಮತ್ತು ದಿಕ್ಸೂಚಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ಸರಕಾರ ಉತ್ತೇಜನ ನೀಡುತ್ತಿದೆ. ಅದಕ್ಕಾಗಿ ಅಭಿಯಾನ ಸಹ ಹಮ್ಮಿಕೊಂಡಿದೆ ಎಂದರು.

ರಾಜ್ಯದಲ್ಲಿ 1000 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳಿದ್ದು, 3000 ಚಾರ್ಜಿಂಗ್ ಸ್ಟೇಷನ್ ಗಳ ಗುರಿ ಹೊಂದಲಾಗಿದೆ. ನಗರದಲ್ಲಿ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂ ಗೆ ನೀಡಲಾಗಿದೆ. ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಭಾರತದ ಬ್ರಿಟಿಷ್ ಹೈಕಮಿಷನರ್ ಆಲೆಕ್ಸ್ ಇಲ್ಲಿಸ್  ಮಾತನಾಡಿ, ಭಾರತ, ಅಮೆರಿಕಾ ಮತ್ತು ಚೀನಾ ದೇಶಗಳು ಯುಕೆ ಜತೆ ಸಹಭಾಗಿತ್ವದ ವಹಿವಾಟುವಿನಲ್ಲಿ ತೊಡಗಿಕೊಂಡಿವೆ. ಭಾರತದ ಸುಮಾರು 22 ಕೋಟಿ ಜನರು ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ವಲಸೆ ಹೋಗಲಿದ್ದಾರೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಸಮರ್ಥ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದರು.

ಭಾರತದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಬಳಕ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ನಾನು ಮಾತನಾಡಿದ್ದೇನೆ. ಅವರು ಈ ಕುರಿತು ಧನಾತ್ಮಕ ಧೋರಣೆ ಹೊಂದಿದ್ದು, ಭಾರತ ಸರಕಾರ  ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಮೋದಿ ನೀಡಿದ್ದಾರೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಇವಿ ಚಲನೆಶೀಲತೆ ಬಗ್ಗೆ ಭಾಗಿತ್ವ ಹೊಂದಲು ಬ್ರಿಟನ್ ಉತ್ಸುಕತೆ ಹೊಂದಿದೆ. ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಅವಕಾಶ ಇದೆ ಎಂದು ಅವರು ಉಲ್ಲೇಖಿಸಿದರು.

ಬೆಸ್ಕಾಂ ಆಡಳಿತ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಪ್ರಸ್ತಾವಿಕ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಬೆಸ್ಕಾಂ ಸಾರ್ವಜನಿಕರಿಗಾಗಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದ್ದು, ಎರಡು ಚಾರ್ಜಿಂಗ್ ಸ್ಟೇಷನ್ ಗಳನ್ನು ಬೆಸ್ಕಾಂ ನ ನಿಗಮ ಕಚೇರಿಗಳಲ್ಲಿ ತೆರಯಲಾಗಿದೆ ಎಂದರು.

ಪ್ರಸ್ತುತ ವಿರುವ ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳಿಂದ ತಿಂಗಳಿಗೆ 6000 ಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದ್ದು, ಸುಮಾರು 30,000 ಕಿಲೋ ವ್ಯಾಟ್ ಇಂಧನ ಮಾರಾಟ ಮಾಡಿ 2.5 ಲಕ್ಷ ರೂ. ಆದಾಯಗಳಿಸುತ್ತಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್  ಉಪ ಹೈಕಮಿಷನರ್ ಅನ್ನಾ ಶೋಟ್ ಬೋಲ್ಟ್ , ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಮತ್ತು ಕೆಪಿಟಿಸಿಎಲ್ ಆಡಳಿತ ನಿರ್ದೇಶಕ ಡಾ. ಎನ್. ಮಂಜುಳಾ ಹಾಜರಿದ್ದರು.

ಹಿಂದಿನ ಲೇಖನಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ: ಸುನಿಲ್  ಕುಮಾರ್
ಮುಂದಿನ ಲೇಖನಜೂ.22ರಂದು ಜೆಡಿಎಸ್ ಜನತಾ ಸೇವಕ ಕಾರ್ಯಕ್ರಮ ಆರಂಭ