ಮನೆ ರಾಜ್ಯ ರಾಜ್ಯದ ಆರ್ಥಿಕ ವ್ಯವಸ್ಥೆ ವೆಂಟಿಲೇಟರ್ ಮೇಲೆ ಮಲಗುವ ಕಾಲ ಸನ್ನಿಹಿತ: ಹೆಚ್.ಡಿ.ಕುಮಾರಸ್ವಾಮಿ ಕಟು ಟೀಕೆ

ರಾಜ್ಯದ ಆರ್ಥಿಕ ವ್ಯವಸ್ಥೆ ವೆಂಟಿಲೇಟರ್ ಮೇಲೆ ಮಲಗುವ ಕಾಲ ಸನ್ನಿಹಿತ: ಹೆಚ್.ಡಿ.ಕುಮಾರಸ್ವಾಮಿ ಕಟು ಟೀಕೆ

0

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿನ ರಾಜ್ಯಪಾಲರ ಭಾಷಣವನ್ನು ಗಮನಿಸಿದರೆ ಈ ಸರಕಾರವು ಆದಷ್ಟು ಬೇಗ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ವೆಂಟಿಲೇಟರ್ (ಐಸಿಯು) ಮೇಲೆ ಮಲಗಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.

Join Our Whatsapp Group

ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದರು.

ರಾಜ್ಯಪಾಲರ ಭಾಷಣವು ರಾಜ್ಯದ ಮುಂದಿನ ದರ್ಬರ ದಿನಗಳತ್ತ ಬೊಟ್ಟು ಮಾಡಿದೆ. ಈ ಸರಕಾರ ಐಸಿಯುಗೆ ಹೋಗುವ ಕಾಲವೂ ಶೀಘ್ರವೇ ಬರಲಿದೆ ಎಂದು ಅನಿಸುತ್ತಿದೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರಕಾರ ನಡೆಯುವ ಸನ್ನಿವೇಶ ನಿರ್ಮಾಣ ಆಗಬಹುದು ಎಂದರು.

ಅಲ್ಲದೆ, ಸಮ್ಮಿಶ್ರ ಸರಕಾರದಂತೆ ಆಗಿರುವ ಈ ಸರಕಾರವೂ ಐಸಿಯು ಪಾಲಾಗುವ ಕಾಲ ಹತ್ತಿರದಲ್ಲೇ ಇದೆ ಎಂದು ಅವರು ಭವಿಷ್ಯ ನುಡಿದರು.

ವಿಪಕ್ಷ ನಾಯಕನಾಗಿ ಟೀಕಿಸಬೇಕೆಂದು ಸರಕಾರವನ್ನು ಟೀಕಿಸುತ್ತಿಲ್ಲ. ಆದರೆ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ಎನ್ನುವುದರ ಬಗ್ಗೆ ಸರಕಾರ ಸತ್ಯ ಮರೆಮಾಚಿದೆ. ಚುನಾವಣೆ ವೇಳೆ ಕಾಂಗ್ರೆಸ್ ಜನರಿಗೆ ಕೊಟ್ಟ ಆಶ್ವಾಸನೆ ಏನು? ಈಗ ಹೇಳುತ್ತಿರುವುದೇನು? ಭವಿಷ್ಯದ ಕರ್ನಾಟಕದ ಬಗ್ಗೆ ಯಾವುದೇ ಒಳನೋಟ ಇಲ್ಲದ ಭಾಷಣ ಇದಾಗಿದೆ ಎಂದು ಅವರು ಟೀಕಿಸಿದರು.

ಈ ಸರಕಾರಕ್ಕೆ ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ದೂರದೃಷ್ಟಿ, ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣ ಇರಲಿ, ಬಜೆಟ್ ಭಾಷಣ ಇರಲಿ, ಸರಕಾರದ ಮುಂದಿನ ಆಶಯಗಳ ಬಗ್ಗೆ ಬೆಳಕು ಚೆಲ್ಲಬೇಕು. ಈ ಭಾಷಣದಲ್ಲಿ ಬೆಳಕಿನ ಮಾತು ಹಾಗಿರಲಿ, ಬರೀ ಕತ್ತಲೇ ತುಂಬಿದೆ ಎಂದರು ಅವರು.

ರಾಜ್ಯಪಾಲರ ಭಾಷಣ ಎಂದರೆ ಹೇಗಿರಬೇಕು? ಅದೂ 135 ಸೀಟುಗಳನ್ನು ಗೆದ್ದ ಪೂರ್ಣ ಬಹುಮತದ ಸರಕಾರದ ರಾಜ್ಯಪಾಲರ ಭಾಷಣ ಎಂದರೆ ಅದಕ್ಕೊಂದು ಗಾಂಭೀರ್ಯ ಬೇಡವೇ ಎಂದ ಅವರು, ಆಡಳಿತ ಪಕ್ಷದ ಯಾವ ಶಾಸಕರು ಕೂಡ ರಾಜ್ಯಪಾಲರ ಭಾಷಣ ಕೇಳಿ ಮೇಜು ಕುಟ್ಟಿದ್ದು ನೋಡಲಿಲ್ಲ ಎಂದು ಅವರು ಟಾಂಗ್ ನೀಡಿದರು.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯದ ಅನೇಕ ಸಾಧಕರ ಹೆಸರುಗಳನ್ನು ನೆನಪಿಸಿ,ಅವರ ಮಾತನ್ನು ಸ್ಮರಿಸಿದ್ದಾರೆ. ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದ ಸರಕಾರ  ಎಂದು ಹೇಳಿಕೊಂಡಿದ್ದಾರೆ. ನಾಡಿನ ಸಾಮಾಜಿಕ ಸಮಸ್ಯೆಗಳು,ವಿವಿಧ ಸಮಸ್ಯೆಗಳು ಬಗಹರಿಸುವ ಸಂದೇಶ ನೀಡಿದ್ದಾರೆ. ವಸತಿ ರಹಿತರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ಗ್ರಾಮೀಣ ಮತ್ತು ನಗರಪ್ರದೇಶದ ಅಭಿವೃದ್ಧಿ ಮಾಡೋದಾಗಿ ಹೇಳಿಕೊಂಡಿದ್ದಾರೆ. ಪಶು ಸಂಗೋಪನೆಯಿಂದ ಗ್ರಾಮೀಣ ಜನರ ಬದುಕು ಅನೂಕೂಲ ಆಗುತ್ತೆ ಎಂದು ಹೇಳಿದ್ದಾರೆ. ಆದರೆ, ಸರಕಾರವು ಏಕಪಕ್ಷೀಯವಾಗಿ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಕಡಿತ ಮಾಡಿದೆ. ಇದೆಂಥಾ ವಿಪರ್ಯಾಸ ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.

ಹಿಂದಿನ ಲೇಖನಬಿಜೆಪಿಯಲ್ಲಿ ವಿಪಕ್ಷನ ನಾಯಕನಾಗುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ನಾಚಿಕೆಗೇಡು: ಕಾಂಗ್ರೆಸ್ ವ್ಯಂಗ್ಯ
ಮುಂದಿನ ಲೇಖನಫುಡ್ ಅಲರ್ಜಿಯಾಗಿದೆ ಎಂದು ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ