ಮನೆ ಪ್ರವಾಸ ಬೆಂಗಳೂರಿನ ಶ್ರೀಮಂತ ಪರಂಪರೆ, ಸಂಸ್ಕೃತಿಗೆ ಸಾಕ್ಷಿಯಾದ ಅದ್ಭುತ ತಾಣಗಳಿವುಗಳು

ಬೆಂಗಳೂರಿನ ಶ್ರೀಮಂತ ಪರಂಪರೆ, ಸಂಸ್ಕೃತಿಗೆ ಸಾಕ್ಷಿಯಾದ ಅದ್ಭುತ ತಾಣಗಳಿವುಗಳು

0

ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬೆಲ್ಲಾ ಖ್ಯಾತಿಗೆ ಪಾತ್ರವಾಗಿರುವ ನಮ್ಮ ರಾಜಧಾನಿ ಬೆಂಗಳೂರು ತನ್ನದೇ ಆದ ಹಿರಿಮೆ ಗರಿಮೆಯನ್ನು ಹೊಂದಿದೆ. ಆಧುನಿಕತೆಯ ನಾಗಾಲೋಟದಲ್ಲಿ ಸಾಗುತ್ತಿರುವ ನಗರ ವಿಶ್ವದ ಗಮನ ಸೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಸಾಕಷ್ಟು ಹೆಸರು ಮಾಡಿದೆ. ಆದರೆ, ಈ ಆಧುನಿಕತೆಯ ಥಳುಕು ಬಳುಕಿನ ನಡುವೆಯೂ ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆ, ಇತಿಹಾಸಕ್ಕೆ ಸಾಕ್ಷಿಯಾದ ಅದ್ಭುತ ದೇವಾಲಯಗಳು, ಸುಂದರ ತಾಣಗಳು ಬೆಂಗಳೂರಿನಲ್ಲಿ ಇವೆ. ಬೆಂಗಳೂರಿನ ಬಹುಭಾಗಗಳಲ್ಲಿ ಇಂತಹ ಅದ್ಭುತ ತಾಣಗಳನ್ನು ನೋಡಬಹುದು. ಇವುಗಳಲ್ಲಿ ಕೆಲವು ತಾಣಗಳ ಬಗೆಗಿನ ಮಾಹಿತಿ ಇಲ್ಲಿದೆ.

ದೊಡ್ಡ ಗಣಪತಿ ದೇಗುಲ, ದೊಡ್ಡ ಬಸವಣ್ಣನ ಸನ್ನಿಧಿ

ಬೆಂಗಳೂರಿಗೆ ಬಂದ ಯಾರಾದರೂ ಬಸವನಗುಡಿಗೆ ಬರದೇ ಇರರು. ಇಲ್ಲಿನ ಐತಿಹಾಸ ಪ್ರಸಿದ್ಧ ದೊಡ್ಡ ಗಣಪತಿ ದೇಗುಲ ಮತ್ತು ದೊಡ್ಡ ಬಸವಣ್ಣನ ಸನ್ನಿಧಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವಂತ ತಾಣ. ಮನಸ್ಸಿಗೆ ನೆಮ್ಮದಿ ನೀಡುವ ಪರಮ ಪವಿತ್ರ ಸ್ಥಳವಿದು. ಈ ಪ್ರಶಾಂತ ವಾತಾವರಣದಲ್ಲಿ ಸಿಗುವ ನೆಮ್ಮದಿಯೇ ಅನನ್ಯ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಲ್ಲಿ ಬಸವನ ಗುಡಿ ಕೂಡಾ ಒಂದು. 15 ಅಡಿ ಎತ್ತರದ 20 ಅಡಿ ಉದ್ದದ ಈ ಬಸವಣ್ಣನ ಬೃಹತ್ ವಿಗ್ರಹವನ್ನು ನೋಡುವುದೇ ಪರಮಾನಂದ. 1537ರಲ್ಲಿ ನಾಡಪ್ರಭು ಕೆಂಪೇಗೌಡರು ಈ ದೇವಾಲಯವನ್ನು ನಿರ್ಮಿಸಿದ್ದರು. ಏಕಶಿಲಾ ವಿಗ್ರಹವಿದು. ಇಲ್ಲೇ ದೊಡ್ಡ ಗಣಪತಿ ದೇವಸ್ಥಾನ ಕೂಡಾ ಇದೆ. ಇವೆರಡು ಪವಿತ್ರ ಕ್ಷೇತ್ರಗಳು. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಅದೂ ಅಲ್ಲದೆ, ಇತಿಹಾಸ ಪ್ರಿಯರು ಮತ್ತು ವಾಸ್ತುಶಿಲ್ಪ ಮತ್ತು ಪುರಾತತ್ತ್ವ ಶಾಸ್ತ್ರವನ್ನು ಅಧ್ಯಯನ ಮಾಡಲು ಇಷ್ಟಪಡುವವರಿಗೂ ಇದು ಅತ್ಯುತ್ತಮವಾದ ತಾಣವಾಗಿದೆ.

ಗವಿ ಗಂಗಾಧರೇಶ್ವರ ದೇವಾಲಯ

ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇಗುಲ ಕೂಡಾ ಬೆಂಗಳೂರಿನ ಪ್ರಮುಖ ಧಾರ್ಮಿಕ ಕೇಂದ್ರ. ತನ್ನ ಅನನ್ಯತೆ, ವಾಸ್ತುಶಿಲ್ಪದಿಂದಲೇ ಗಮನ ಸೆಳೆದ ಸುಂದರ ದೇವಸ್ಥಾನ ಇದು. ಅದರಲ್ಲೂ ಮಕರ ಸಂಕ್ರಾಂತಿಯ ದಿನ ಪ್ರತಿವರ್ಷ ಗವಿಗಂಧಾರೇಶ್ವರನಿಗೆ ಸೂರ್ಯರಶ್ಮಿಯ ಸ್ಪರ್ಶವಾಗುತ್ತದೆ. ಈ ಕ್ಷಣವೇ ಸುಂದರ. ಈ ಅಪೂರ್ವ ಗಳಿಗೆಯನ್ನು ಕಣ್ತುಂಬಿಕೊಳ್ಳುವ ಸಲುವಾಗಿಯೇ ಸಾಕಷ್ಟು ಜನರು ಇಲ್ಲಿ ಸೇರಿರುತ್ತಾರೆ. ನಮ್ಮ ಭವ್ಯ ಇತಿಹಾಸ, ಶ್ರೀಮಂತ ಪರಂಪರೆ, ವಾಸ್ತು ಜ್ಞಾನಕ್ಕೆ ಸಾಕ್ಷಿಯಾದ ದೇಗುಲಗಳಲ್ಲಿ ಗವಿ ಗಂಗಾಧರೇಶ್ವರ ದೇಗುಲ ಕೂಡಾ. ಸಾಕಷ್ಟು ಭಕ್ತರನ್ನು ಹೊಂದಿರುವ ಈ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೂಡಾ ಆಗಮಿಸುತ್ತಾರೆ.

ಸೋಮೇಶ್ವರ ದೇವಸ್ಥಾನ

ಬೆಂಗಳೂರಿನಲ್ಲಿ ಇರುವ ಅತ್ಯಂತ ಪುರಾತನ ದೇಗುಲಗಳ ಸಾಲಿಗೆ ಹಲಸೂರಿನ ಸೋಮೇಶ್ವರ ದೇವಸ್ಥಾನ ಕೂಡಾ ಸೇರುತ್ತದೆ. ಹಲಸೂರಿನ ಮುಖ್ಯ ರಸ್ತೆಗೆ ಸಮೀಪದಲ್ಲಿಯೇ ಈ ಸುಂದರ ದೇವ ಸನ್ನಿಧಿ ಇದೆ. ಸುಂದರ ಪ್ರಾಚೀನ ವಾಸ್ತುಶೈಲಿಯನ್ನು ಈ ದೇಗುಲದಲ್ಲಿ ಕಣ್ತುಂಬಿಕೊಳ್ಳಬಹುದು. ಇದೇ ಕಾರಣದಿಂದ ಈ ಪಾರಂಪರಿಕ ತಾಣ ಎಲ್ಲರನ್ನೂ ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿರುತ್ತದೆ. ಸಾಕಷ್ಟು ರಾಜವಂಶಗಳ ಆಳ್ವಿಕೆಯಲ್ಲಿ ಈ ದೇಗುಲ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಈಗಲೂ ಈ ದೇಗುಲದ ಸೌಂದರ್ಯ ಹಾಗೆಯೇ ಉಳಿದಿದೆ. ಬೆಂಗಳೂರಿಗೆ ಬಂದವರು ಒಂದು ಸಲ ಭೇಟಿ ನೀಡಬಹುದಾದಂತಹ ತಾಣಗಳಲ್ಲಿ ಈ ಸುಂದರ ದೇವಾಲಯ ಕೂಡಾ ಒಂದು.

ಬೆಂಗಳೂರು ಅರಮನೆ

ಇನ್ನು ಬೆಂಗಳೂರಿನ ಮತ್ತೊಂದು ಜನಾಕರ್ಷಣೆಯ ಅಪೂರ್ವ ತಾಣ ಎಂದರೆ ಅದು ಬೆಂಗಳೂರು ಅರಮನೆ. ಈ ಭವ್ಯ ಅರಮನೆ ದೇಶ ವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುತ್ತದೆ. ರಾಜಮನೆತನದ ಬದುಕು ಮತ್ತು ಮೈಸೂರು ರಾಜವಂಶಸ್ಥರ ವೈಭವ, ಆಡಳಿತಕ್ಕೆ ಸಾಕ್ಷಿಯಾದ ಸಾಕಷ್ಟು ಅಪರೂಪದ ಅಂಶಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ವಸಂತನಗರಕ್ಕೆ ಸಮೀಪದಲ್ಲಿ ಈ ಅದ್ಭುತ ಅರಮನೆ ಇದೆ. ಅರಮನೆಯ ನಿರ್ಮಾಣವು 1874ರಲ್ಲಿ ಪ್ರಾರಂಭಗೊಂಡು 1878 ರಲ್ಲಿ ಪೂರ್ಣಗೊಂಡಿತ್ತು. 454 ಎಕರೆಗಳಲ್ಲಿ ಹರಡಿರುವ ವಿಶಾಲ ಪ್ರದೇಶದಲ್ಲಿ 45000 ಚದರ ಅಡಿ ವಿಸ್ತೀರ್ಣದ ಈ ಭವ್ಯವಾದ ಅರಮನೆಯನ್ನು ನಿರ್ಮಿಸಲಾಗಿದೆ. ವಸಾಹತುಶಾಹಿ, ವಿಕ್ಟೋರಿಯನ್ ಮತ್ತು ಭಾರತೀಯ ಪರಂಪರೆಯ ಆಸಕ್ತಿದಾಯಕ ಮಿಶ್ರಣವನ್ನು ಇಲ್ಲಿ ನೋಡಬಹುದು. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಅರಮನೆಯಲ್ಲಿ 19 ನೇ ಮತ್ತು 20 ನೇ ಶತಮಾನಗಳ ಅನೇಕ ವರ್ಣಚಿತ್ರಗಳನ್ನೂ ನೋಡಬಹುದು. ಸಾಕಷ್ಟು ಸಿನಿಮಾಗಳಲ್ಲೂ ನೀವು ಈ ಭವ್ಯವಾದ ಅರಮನೆಯನ್ನು ನೋಡಿರಲೂಬಹುದು. ಬೆಂಗಳೂರು ಅರಮನೆಯು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ.

ಟಿಪ್ಪು ಬೇಸಿಗೆ ಅರಮನೆ

ಇನ್ನು, ಟಿಪ್ಪು ಬೇಸಿಗೆ ಅರಮನೆ ಬೆಂಗಳೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ಇಂಡೋ ಇಸ್ಲಾಮಿಕ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆ ಇದು. ಮರ ಮತ್ತು ಮಣ್ಣಿನ ಗಾರೆಯಿಂದ ನಿರ್ಮಿಸಲಾದ ಈ ಕಟ್ಟಡ ಕೆ.ಆರ್. ಮಾರುಕಟ್ಟೆಯ ಸನಿಹದಲ್ಲಿಯೇ ಇದೆ. ಬೆಂಗಳೂರಿಗೆ ಬಂದ ಪ್ರವಾಸಿಗರು ಈ ಟಿಪ್ಪು ಬೇಸಿಗೆ ಅರಮನೆಗೂ ಭೇಟಿ ನೀಡುತ್ತಾರೆ. ಟಿಪ್ಪುವಿನ ಬಳಿಕ ಈ ಅರಮನೆಯನ್ನು ಬ್ರಿಟಿಷರು ಕೂಡಾ ಬಳಸಿದ್ದರು. ಇಲ್ಲಿನ ಸುಂದರ ಕುಸುರಿ ಕೆತ್ತನೆಗಳು ಮನಸೆಳೆಯುತ್ತವೆ. ಇದೀಗ ಭಾರತೀಯ ಪುರಾತತ್ವ ಮತ್ತು ಸರ್ವೆಕ್ಷಣಾ ಇಲಾಖೆ ಈ ಬೇಸಿಗೆ ಅರಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಇದನ್ನು ವಸ್ತುಸಂಗ್ರಹಾಲಯವಾಗಿಯೂ ಬಳಸಲಾಗುತ್ತಿದೆ. ಟಿಪ್ಪು ಸುಲ್ತಾನ್‌ ಬಳಸುತ್ತಿದ್ದ ಪೀಠೋಪಕರಣಗಳು, ಖಡ್ಗ, ಧಿರಿಸುಗಳನ್ನು ಇಲ್ಲಿ ನೋಡಬಹುದು. ಬೆಳಗ್ಗೆ 8.30 ರಿಂದ ಸಂಜೆ 5.30 ರವರೆಗೆ ಈ ಅರಮನೆ ತೆರೆದಿರುತ್ತದೆ.

ಹಿಂದಿನ ಲೇಖನಶೀಘ್ರವೇ “ರೈತ ಶಕ್ತಿ ಯೋಜನೆ”ಗೆ ಚಾಲನೆ
ಮುಂದಿನ ಲೇಖನಪ್ರಣಾಳಿಕೆ ಶೇ.10ರಷ್ಟು ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ: ಸಿದ್ದರಾಮಯ್ಯ