ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗೆ ಆರ್ಎಸ್ಎಸ್ ಕಾರ್ಯಕರ್ತರನ್ನು ಆಯ್ಕೆ ಮಾಡಿ ವಿವಾದಕ್ಕೆ ಸಿಲುಕಿದೆ. ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧಕ್ಷರಾಗಿ ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಯಲ್ಲಾಪುರ ಶಾಸಕರ ಆಪ್ತರಾಗಿರುವ ಸಿದ್ದವೀರೇಶ ಮೇಘರಾಜು, ಉಪಾಧ್ಯಕ್ಷ ಅರವಿಂದ್ ತೆಲಗುಂದ ಆಯ್ಕೆ ಮಾಡಲಾಗಿದ್ದು, ಹಿಂದಿನ ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ತಾಪ್ ಶೇಖ್ಗೆ ಕೋಕ್ ನೀಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಜನರಲ್ ಸೆಕ್ರೆಟರಿಯಾಗಿ ಸಕ್ರಿಯ ಆರ್ಎಸ್ಎಸ್ ಕಾರ್ಯಕರ್ತ ಡಾ. ರವಿ ಭಟ್ ಬರಗದ್ದೆ ನೇಮಕ ಮಾಡಲಾಗಿದೆ. ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತರ ನೇಮಕ ಮಾಡಿದ್ದಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ನೇಮಕಾತಿ ವಿರೋಧಿಸಿ ರಾಜ್ಯಾಧ್ಯಕ್ಷರಿಗೆ ಹಾಗೂ ಎಐಸಿಸಿ ಅಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರು ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ.
ಇದರ ಬೆನ್ನಲ್ಲೇ ಬನವಾಸಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಗೆ ಜಿಲ್ಲಾಧ್ಯಕ್ಷ ಸಾಯಿಗಾಂವ್ಕರ್ ತಡೆ ನೀಡಿದ್ದಾರೆ. ಆದರೆ, ಜಿಲ್ಲಾ ಕಾಂಗ್ರೆಸ್ ಜನರಲ್ ಸೆಕ್ರೆಟರಿಯಾಗಿರುವ ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಶಾಸಕ ಶಿವರಾಮ್ ಹೆಬ್ಬಾರ್ ಬೆಂಬಲಿಗ ಡಾ. ರವಿ ಭಟ್ ಬರಗದ್ದೆ ನೇಮಕ ಮುಂದುವರಿಸಲಾಗಿದೆ.
ಹೊಸದಾಗಿ ನೇಮಕವಾಗಿರುವ ಬನವಾಸಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳನ್ನು ಮುಂದುವರೆಸುವಂತೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪಟ್ಟು ಹಿಡಿದಿದ್ದು, ಇದೀಗ ಜಿಲ್ಲಾ ಕಾಂಗ್ರೆಸ್ನ ಮೂಲ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಉಂಟಾಗಿದೆ. ಆರ್ಎಸ್ಎಸ್ ಕಾರ್ಯಕರ್ತರನ್ನ ಮುಂದುವರೆಸಿದಲ್ಲಿ ಪಕ್ಷದ ಕಚೇರಿ ಮುಂದೆ ಧರಣಿ ಎಚ್ಚರಿಕೆಯನ್ನು ಮೂಲ ಕಾಂಗ್ರೆಸ್ ನಾಯಕರು ನೀಡಿದ್ದಾರೆ.















