ಮನೆ ರಾಜ್ಯ ಲಂಚ ಪ್ರಕರಣ: ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ರನ್ನು ಬಂಧಿಸಿದ ಎಸಿಬಿ

ಲಂಚ ಪ್ರಕರಣ: ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ರನ್ನು ಬಂಧಿಸಿದ ಎಸಿಬಿ

0

ಬೆಂಗಳೂರು (Bengaluru): ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ಅವರನ್ನು ಎಸಿಬಿ ಸೋಮವಾರ ಬಂಧಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವೇಳೆ ಜಮೀನು ವ್ಯಾಜ್ಯ ಇತ್ಯರ್ಥ ಪಡಿಸಲು ವ್ಯಕ್ತಿಯೊಬ್ಬರಿಂದ  5 ಲಕ್ಷ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ಅವರನ್ನು ಯಶವಂತಪುರದ ಅವರ ನಿವಾಸದಲ್ಲಿ ಬಂಧಿಸಲಾಗಿದೆ.

ಲಂಚ ಪ್ರಕರಣದಲ್ಲಿ ಮಂಜುನಾಥ್ ಮೂರನೇ ಆರೋಪಿಯಾಗಿದ್ದಾರೆ. ಲಂಚ ಪ್ರಕರಣದಲ್ಲಿ ಮಂಜುನಾಥ್ ಅವರನ್ನು ಮೂರನೇ ಆರೋಪಿಯನ್ನಾಗಿ ಮಾಡುವಂತೆ ಕೋರಿ ಬೆಂಗಳೂರು ಎಸಿಬಿ ಪೊಲೀಸರು ಭ್ರಷ್ಟಾಚಾರ ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವರದಿಗೆ ಸಮ್ಮತಿಸಿರುವ ವಿಶೇಷ ನ್ಯಾಯಾಲಯ ಐಎಎಸ್ ಅಧಿಕಾರಿ ಮಂಜುನಾಥ್ ವಿಚಾರಣೆಗೆ ಹಸಿರು ನಿಶಾನೆ ತೋರಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಇಂದು ಮಂಜುನಾಥ್ ಅವರನ್ನು ಬಂಧಿಸಿದ್ದಾರೆ.

ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇತ್ತು. ಈ ಪ್ರಕರಣದ ಪೂರ್ಣ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತೀರ್ಪು ಪ್ರಕಟ ಮಾಡಿರಲಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದ ಅರ್ಜಿದಾರ ಆಜಂಪಾಷಾ ಅವರಿಗೆ ಅಧೀನ ಸಿಬ್ಬಂದಿ ಮಹೇಶ್ ಅವರನ್ನು ಕಾಣಲು ಸೂಚಿಸಲಾಗಿತ್ತು. ಮಹೇಶ್ ಅವರನ್ನು ಭೇಟಿ ಮಾಡಿದಾಗ, ನಿನ್ನ ಪರ ಅನುಕೂಲಕರ ತೀರ್ಪು ನೀಡಲು 5 ಲಕ್ಷ ರೂ. ಲಂಚ ನೀಡುವಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಮಹೇಶ್ ಹಾಗೂ ನ್ಯಾಯಾಲಯ ವಿಭಾಗದ ಚೇತನ್ ಕುಮಾರ್ ಬೇಡಿಕೆ ಇಟ್ಟಿದ್ದರು.