ಮನೆ ಕ್ರೀಡೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ: ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದ ಭಾರತ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ: ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದ ಭಾರತ

0

ಎಜ್‌ಬಾಸ್ಟನ್ (Edgbaston): ಇಂಗ್ಲೆಂಡ್‌ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ಗೆ 378 ರನ್‌ಗಳ ಸವಾಲಿನ ಗುರಿ ನೀಡಿದೆ.

ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ ಗಳಿಸಿ ಆಲೌಟ್‌ ಆಗಿದೆ. ಇದರೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡದ ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದೆ.

ಸದ್ಯ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ತಂಡ ವಿಕೆಟ್‌ ನಷ್ಟವಿಲ್ಲದೆ 30 ರನ್‌ ಕಲೆಹಾಕಿದೆ. 19 ರನ್‌ ಗಳಿಸಿರುವ ಅಲೆಕ್ಸ್‌ ಲೀಸ್‌ ಅವರೊಂದಿಗೆ 10 ರನ್ ಹೊಡೆದಿರುವ ಜಾಕ್‌ ಕ್ರಾಲಿ ಕ್ರೀಸ್‌ನಲ್ಲಿದ್ದಾರೆ. ಗೆಲುವಿಗೆ ಇನ್ನೂ 348 ರನ್‌ ಗಳಿಸಬೇಕಿದೆ.

ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ, ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್ ಪಂತ್‌ (146) ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜ (104) ಅವರ ಸಾಹಸಮಯ ಬ್ಯಾಟಿಂಗ್‌ ಬಲದಿಂದ 416 ರನ್‌ ಕಲೆಹಾಕಿ ಆಲೌಟ್‌ ಆಗಿತ್ತು.

ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ಜಾನಿ ಬೆಸ್ಟೋ (106) ಶತಕ ಗಳಿಸಿದ್ದರ ಹೊರತಾಗಿಯೂ, 284 ರನ್‌ ಗಳಿಗೆ ಆಲೌಟ್‌ ಆಗಿತ್ತು. ಹೀಗಾಗಿ ಭಾರತಕ್ಕೆ ನೂರಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಲಭಿಸಿತ್ತು. ಆದರೆ, ಎರಡನೇ ಇನಿಂಗ್ಸ್‌ನಲ್ಲಿಯೂ ಭಾರತದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟರು.

ಆರಂಭಿಕ ಶುಭಮನ್‌ ಗಿಲ್‌ ಕೇವಲ 4 ರನ್‌ ಗಳಿಸಿ ಔಟಾದರೆ, ಹನುಮ ವಿಹಾರಿ 11, ವಿರಾಟ್‌ ಕೊಹ್ಲಿ 20 ಹಾಗೂ ಶ್ರೇಯಸ್‌ ಅಯ್ಯರ್‌ 19 ರನ್‌ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಪಂತ್‌ ಮತ್ತು ಚೇತೇಶ್ವರ ಪೂಜಾರ ತಂಡಕ್ಕೆ ನೆರವಾದರು.

ಮೊದಲ ಇನಿಂಗ್ಸ್‌ನಲ್ಲಿ ಮೂರಂಕಿ ಮೊತ್ತ ಕಲೆಹಾಕಿದ್ದ ಪಂತ್‌, ಈ ಬಾರಿ ಅರ್ಧಶತಕ (57) ಬಾರಿಸಿದರು. ಪೂಜಾರ 66 ರನ್‌ ಗಳಿಸಿದರು. ಇದರಿಂದಾಗಿ ಜಸ್‌ಪ್ರೀತ್‌ ಬೂಮ್ರಾ ಬಳಗ ಆಂಗ್ಲರಿಗೆ ಸವಾಲಿನ ಗುರಿ ನೀಡಲು ಸಾಧ್ಯವಾಯಿತು.

ಇಂಗ್ಲೆಂಡ್‌ ಪರ ನಾಯಕ ಬೆನ್‌ ಸ್ಟೋಕ್ಸ್‌ 4 ವಿಕೆಟ್ ಪಡೆದರೆ, ಸ್ಟುವರ್ಟ್‌ ಬ್ರಾಡ್‌ ಹಾಗೂ ಮ್ಯಾಟಿ ಪಾಟ್ಸ್‌ ತಲಾ ಎರಡು ವಿಕೆಟ್‌ ಕಿತ್ತರು. ಇನ್ನೆರಡು ವಿಕೆಟ್‌ಗಳನ್ನು ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಜಾಕ್‌ ಲೀಚ್‌ ಹಂಚಿಕೊಂಡರು.

ಪಂದ್ಯ ಗೆದ್ದರೆ 3–1 ಅಂತರದಲ್ಲಿ ಸರಣಿ ಜಯ

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಕಳೆದ ವರ್ಷ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ನಾಲ್ಕು ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ 2–1ರಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ನಡೆಯುತ್ತಿರುವುದು ಐದನೇ ಪಂದ್ಯವಾಗಿದ್ದು, ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು.ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸರಣಿಯನ್ನು 3–1 ಅಂತರದಲ್ಲಿ ಜಯಿಸಲಿದೆ.

ಹಿಂದಿನ ಲೇಖನಲಂಚ ಪ್ರಕರಣ: ಐಎಎಸ್ ಅಧಿಕಾರಿ ಜಿ. ಮಂಜುನಾಥ್‌ ರನ್ನು ಬಂಧಿಸಿದ ಎಸಿಬಿ
ಮುಂದಿನ ಲೇಖನನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ