ಬೆಂಗಳೂರು : ಮಹದೇವಪುರದ ಮಹೀಂದ್ರಾ ಶೋರೂಂ ಸಿಬ್ಬಂದಿ ಮಾಡಿಕೊಂಡ ಎಡವಟ್ಟಿಗೆ ಹಲವು ಹೊಸ ವಾಹನಗಳು ಜಖಂಗೊಂಡಿವೆ. ಕುಡಿದ ಮತ್ತಿನಲ್ಲಿ ಶೋ ರೂಂಗೆ ಬಂದ ವ್ಯಕ್ತಿಯೊಬ್ಬನಿಗೆ ಮಹೀಂದ್ರಾ ಶೋರೂಂ ಸಿಬ್ಬಂದಿ ಕಾರನ್ನ ಟೆಸ್ಟ್ ಡ್ರೈವ್ಗೆ ನೀಡಿದ್ದಾರೆ.
ಏಪ್ರಿಲ್ 12ರಂದು ಮಹದೇವಪುರದ ವಿಜ್ಞೇಶ್ವರ ನಗರದಲ್ಲಿರುವ ಮಹೀಂದ್ರಾ ಕಾರ್ ಶೋರೂಂನಲ್ಲಿ ಕುಡಿದು ಬಂದಿದ್ದ ಅಭಿಲಾಶ್ ಎಂಬಾತನಿಗೆ ಟೆಸ್ಟ್ ಡ್ರೈವ್ ವಾಹನ ನೀಡಿದ ಸಿಬ್ಬಂದಿಯ ನಿರ್ಲಕ್ಷ್ಯ ತೋರಿದೆ. ಇದರಿಂದ ನಾಲ್ಕು ವಾಹನಗಳು ಜಖಂಗೊಂಡಿದೆ. ಘಟನೆಯಲ್ಲಿ ಒಬ್ಬರ ಕಾಲು ಮುರಿಯುವಂತಹ ಗಂಭೀರ ಅಪಘಾತಕ್ಕೆ ಕಾರಣವಾಗಿದೆ.
ಕುಡಿದ ಮತ್ತಿನಲ್ಲಿ ಅಭಿಲಾಶ್, ರಸ್ತೆಯಲ್ಲಿ ಮನಸೋ ಇಚ್ಛೆ ಕಾರು ಓಡಿಸಿದ್ದಾನೆ. ಆತ ನಾಲ್ಕು ಕಾರುಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ. ಅಷ್ಟೇ ಅಲ್ಲದೆ, ರಮೇಶ್ ಎಂಬವರ ಕಾರಿಗೆ ಗುದ್ದಿದ ರಭಸಕ್ಕೆ ಅವರ ಕಾಲು ಮುರಿದಿದೆ. ಗಾಯಗೊಂಡ ರಮೇಶ್ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ನಂತರ, ಸ್ಥಳೀಯರು ಅಭಿಲಾಶ್ಗೆ ಮನಸೋ ಇಚ್ಛೆ ಥಳಿಸಿದ್ದಾರೆ.
ಅಭಿಲಾಶ್ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಸಂಬಂಧ ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹದೇವಪುರ ಸಂಚಾರಿ ಪೊಲೀಸರು ಅಭಿಲಾಶ್ಗೆ ನೋಟಿಸ್ ಜಾರಿ ಮಾಡಿದ್ದು, ಐಎಂವಿ ಕಾಯ್ದೆ ಹಾಗೂ ಬಿಎನ್ಎಸ್ 125(ಎ), 281 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.














