ಬೆಳಗಾವಿ (ಮೇ.22): ನಟ ದರ್ಶನ್ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಹಾ ಕುಡಿಯುತ್ತ ಕುಳಿತಿದ್ದ ಫೋಟೋ ವೈರಲ್ ಆದ ಬಳಿಕ ಸುದ್ದಿಯಾಗಿದ್ದ ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಗುರುವಾರ ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಆತನನ್ನು ಬಿಡುಗಡೆ ಮಾಡಲಾಗಿದ್ದು ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಗರಾಜ, ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆ ಕಂಡುಬಂದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಘಟನೆ ನಂತರ ಜೈಲು ಭದ್ರತೆ ಹಾಗೂ ಕೈದಿಗಳ ನಿಯಮ ಉಲ್ಲಂಘನೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಉಂಟಾಗಿತ್ತು.
ಈ ಕುರಿತು ವಿವಾದದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು. ನಂತರ ಈ ಪ್ರಕರಣ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಬುಧವಾರ ನ್ಯಾಯಾಲಯವು ನಾಗರಾಜನಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಬಿಡುಗಡೆ ಪ್ರಕ್ರಿಯೆಯ ಮುನ್ನವೇ ಆತನ ಆರೋಗ್ಯದಲ್ಲಿ ತೊಂದರೆ ಉಂಟಾದ ಕಾರಣ ಕಳೆದ ವಾರ ಆತನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲೇ ಜಾಮೀನು ಆದೇಶ ಜಾರಿಯಾಗಿದ್ದು, ಆಸ್ಪತ್ರೆಯಿಂದಲೇ ಆತನನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ವಿರುದ್ಧದ ಹಲವು ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆದರೂ ಜಾಮೀನು ಆಧಾರದಲ್ಲಿ ಈಗ ತಾತ್ಕಾಲಿಕವಾಗಿ ಬಿಡುಗಡೆ ದೊರೆತಿದೆ. ಈ ಬೆಳವಣಿಗೆ ಜೈಲು ವ್ಯವಸ್ಥೆ ಹಾಗೂ ರೌಡಿಶೀಟರ್ಗಳ ಚಟುವಟಿಕೆಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ ಎಂದು ಕಾನೂನು ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.


















