ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯೊಂದು ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಭಾನುವಾರ ತಡರಾತ್ರಿ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿ ನಡೆದಿದೆ. ಸಿಗರೇಟ್ ಹೊಗೆ ಬಿಟ್ಟ ವಿಚಾರಕ್ಕೆ ಶುರುವಾದ ಜಗಳದಲ್ಲಿ ಆಟೋ ಚಾಲಕನೋರ್ವನನ್ನು ಡ್ರ್ಯಾಗರ್ನಿಂದ ಇರಿದು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಬಾಗಲೂರಿನ ರಾಜಾ ಸಾಬ್ ಪಾಳ್ಯದ ನಿವಾಸಿ ಸೈಯದ್ ಶಫೀ (36) ಹತ್ಯೆಯಾದ ಆಟೋ ಚಾಲಕ. ಘಟನೆಗೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಎಂಬಾತನನ್ನು ಚಿಕ್ಕಬಾಣಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂಬುದ್ದಾಗಿದೆ.
ಈ ಪ್ರಕರಣ ಕುರಿತು ಭಾನುವಾರ ರಾತ್ರಿ 11:30ರ ಸಮಯಕ್ಕೆ ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್ ಬಳಿ ಬಂದಿದ್ದ ಶಫಿ ಮದ್ಯ ಖರೀದಿಸಿದ್ದ. ಬಾರ್ ಮುಚ್ಚುವ ಸಮಯವಾದ್ದರಿಂದ ಮುಂಭಾಗದಲ್ಲೇ ಆಟೋ ನಿಲ್ಲಿಸಿ ಗೆಳೆಯನೊಂದಿಗೆ ಮದ್ಯಪಾನ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಆರೋಪಿ ದರ್ಶನ್ ಸಹ ಆತನ ಸ್ನೇಹಿತರೊಂದಿಗೆ ಬಾರ್ನಿಂದ ಹೊರಬಂದಿದ್ದ. ಬಳಿಕ ಶಫಿಯ ಆಟೋ ಪಕ್ಕದಲ್ಲೇ ನಿಂತು ಸಿಗರೇಟ್ ಸೇದುತ್ತ, ಮೂತ್ರ ವಿಸರ್ಜನೆ ಮಾಡುತ್ತಾ ನಿಂತಿದ್ದ. ಸಿಗರೇಟ್ ಹೊಗೆ ತನ್ನತ್ತ ಬಂದಿದ್ದರಿಂದ ಆರೋಪಿಯತ್ತ ತಿರುಗಿ ಗುರಾಯಿಸಿದ್ದ. ಇದರಿಂದ ದರ್ಶನ್ ಹಾಗೂ ಶಫಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿದೆ. ಸಿಟ್ಟಿಗೆದ್ದ ದರ್ಶನ್ ತನ್ನ ಬಳಿ ಇದ್ದ ಡ್ರ್ಯಾಗರ್ನಿಂದ ಶಫಿಯ ಕುತ್ತಿಗೆಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಶಫಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಚಿಕ್ಕಬಾಣಾವರ ಠಾಣೆ ಪೊಲೀಸರು ಆರೋಪಿ ದರ್ಶನ್ನನ್ನು ಬಂಧಿಸಿದ್ದಾರೆ.
ಈ ಮೊದಲು ದರ್ಶನ್ ವಿರುದ್ಧ 2023ರಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ. ಎಲ್ ಮಾಹಿತಿ ನೀಡಿದರು. ಕೊಲೆಯಾದ ಶಫಿ ಯಶವಂತಪುರದ ಗ್ಯಾರೇಜ್ ಒಂದರಲ್ಲಿ ಕಳೆದ 15 ವರ್ಷಗಳಿಂದ ಟಿಂಕರಿಂಗ್ ಕೆಲಸ ಮಾಡಿಕೊಂಡಿದ್ದ. ಜೊತೆಗೆ ಬಿಡುವಿನ ಅವಧಿಯಲ್ಲಿ ಆಟೋ ಓಡಿಸುತ್ತಿದ್ದ. ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ ಶಫಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಬೇಸತ್ತಿದ್ದ ಪತ್ನಿ, ಕಳೆದ ಆರು ತಿಂಗಳಿನಿಂದ ಆತನನ್ನು ಮನೆಗೆ ಸೇರಿಸಿರಲಿಲ್ಲ. ಆತ ಎಲ್ಲಿದ್ದ, ಏನು ಮಾಡುತಿದ್ದ ಎಂಬ ಮಾಹಿತಿ ಕುಟುಂಬಸ್ಥರಿಗೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.


















