ಭಾರತವು ತನ್ನ ಪ್ರಾಚೀನ ಸಂಸ್ಕೃತಿ, ಭವ್ಯ ಇತಿಹಾಸ ಮತ್ತು ನಿಗೂಢ ದೇವಾಲಯಗಳಿಗೆ ಜಗತ್ಪ್ರಸಿದ್ಧಿಯಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ಹಲವು ದೇವಾಲಯಗಳ ಚಮತ್ಕಾರ ಹಾಗೂ ರಹಸ್ಯಗಳು ವಿಜ್ಞಾನಕ್ಕೆ ಸವಾಲಾಗಿವೆ. ಅಂತಹದೇ ಒಂದು ಅಪರೂಪದ ಮತ್ತು ವಿಸ್ಮಯಕಾರಿ ದೇವಾಲಯ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿದೆ. ಇದು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿನ ನಂಬಿಕೆಯ ಪ್ರಕಾರ, ದೇವರಿಗೆ ಒಂದು ದಿನ ನೈವೇದ್ಯ (ಭೋಜನ) ಅರ್ಪಿಸದಿದ್ದರೂ ಸಹ ಇಲ್ಲಿರುವ ಕೃಷ್ಣನ ವಿಗ್ರಹವು ದಿನದಿಂದ ದಿನಕ್ಕೆ ಸಣ್ಣಗಾಗುತ್ತಾ ಹೋಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ದಿನದ 24 ಗಂಟೆಯೂ ಸಮಯಕ್ಕೆ ಸರಿಯಾಗಿ ಪೂಜೆ, ನೈವೇದ್ಯ ನಡೆಯುತ್ತದೆ. ರಾತ್ರಿ 9 ಗಂಟೆಗೆ ಮುಚ್ಚುವ ದೇವಸ್ಥಾನದ ಬಾಗಿಲನ್ನು, ಮಧ್ಯರಾತ್ರಿ 2 ಗಂಟೆಗೇ ತೆರೆಯಲಾಗುತ್ತದೆ ಮತ್ತು ಮುಂಜಾನೆ 3 ಗಂಟೆಗೆ ದೇವರಿಗೆ ಆಹಾರವನ್ನು ಅರ್ಪಿಸಲಾಗುತ್ತದೆ. ಈ ವಿಶಿಷ್ಟ ದೇವಾಲಯದ ರೋಚಕ ಕಥೆ ಇಲ್ಲಿದೆ:

ಇದು ಸಾಮಾನ್ಯವಾಗಿ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ಸಮಯದಲ್ಲಿ ದೇಶದಾದ್ಯಂತ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗುತ್ತದೆ. ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಆದರೆ, ಕೇರಳದ ತಿರುವರಪ್ಪು ಶ್ರೀಕೃಷ್ಣ ಸ್ವಾಮಿ ದೇವಾಲಯದಲ್ಲಿ ನಿಯಮಗಳೇ ಬೇರೆ ಕೇರಳದ ಮೀನಾಚಿಲ್ ನದಿಯ ದಂಡೆಯ ಮೇಲೆ ನೆಲೆಸಿರುವ ಈ ಸುಂದರ ದೇವಾಲಯವು ತನ್ನ ಭವ್ಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಹಿಂದೆ ಒಮ್ಮೆ ಸೂರ್ಯಗ್ರಹಣದ ಸಮಯದಲ್ಲಿ ಇತರ ದೇವಾಲಯಗಳಂತೆ ಈ ಮಂದಿರವನ್ನೂ ಮುಚ್ಚಲಾಗಿತ್ತು. ಆದರೆ ಮರುದಿನ ಅರ್ಚಕರು ಗರ್ಭಗುಡಿಯನ್ನು ತೆರೆದಾಗ ಕೃಷ್ಣನ ಮೂರ್ತಿಯನ್ನು ನೋಡಿ ದಂಗಾಗಿದ್ದರು. ದೇವರಿಗೆ ನೈವೇದ್ಯ ಸಿಗದೆ ಕೃಷ್ಣನ ಮೂರ್ತಿ ತೀರಾ ಸಣ್ಣದಾಗಿ, ಕೃಶವಾಗಿ ಕಂಡುಬಂದಿತ್ತು. ಗ್ರಹಣದ ದಿನ ನಡೆದ ಈ ಘಟನೆಯಿಂದ ಅರ್ಚಕರೆಲ್ಲರೂ ಕಂಗಾಲಾಗಿದ್ದರು. ಅದೇ ಸಮಯದಲ್ಲಿ ಆದಿ ಶಂಕರಾಚಾರ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ಜ್ಞಾನದೃಷ್ಟಿಯಿಂದ ನೋಡಿ, “ಶ್ರೀಕೃಷ್ಣನನ್ನು ಇಡೀ ದಿನ ಹಸಿದಿಟ್ಟಿದ್ದರಿಂದಲೇ ಮೂರ್ತಿ ಹೀಗಾಗಿದೆ” ಎಂದು ತಿಳಿಸಿದರು. ಅಂದಿನಿಂದ ಇಂದಿನವರೆಗೆ ಗ್ರಹಣವೇ ಇರಲಿ, ಯಾವುದೇ ಸೂತಕವೇ ಇರಲಿ ಈ ದೇವಾಲಯದಲ್ಲಿ ಕೃಷ್ಣನಿಗೆ ನೈವೇದ್ಯ ನಿಲ್ಲಿಸುವುದೇ ಇಲ್ಲ.

ಹಾಗೂ ವಿಶ್ವದಲ್ಲೇ ಅತಿ ಮುಂಜಾನೆ, ಅಂದರೆ ರಾತ್ರಿ 3 ಗಂಟೆಗೆ ದೇವರಿಗೆ ಭೋಜನ ಉಣಿಸುವ ಏಕೈಕ ಕೃಷ್ಣ ದೇವಾಲಯ ಇದಾಗಿದೆ. ಸರಿಯಾದ ಸಮಯಕ್ಕೆ ನೈವೇದ್ಯ ಅರ್ಪಿಸಬೇಕಾದ ಕಾರಣ, ರಾತ್ರಿ 2 ಗಂಟೆಗೇ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ದೇವಸ್ಥಾನದ ಮುಖ್ಯ ಅರ್ಚಕರು ಬಾಗಿಲಿನ ಚಾವಿ(Door Key) ಯ ಜೊತೆಗೆ ಕೈಯಲ್ಲಿ ಒಂದು ಸುತ್ತಿಗೆಯನ್ನು (Hammer) ಸದಾ ಹಿಡಿದುಕೊಂಡಿರುತ್ತಾರೆ. ಒಂದು ವೇಳೆ ಚಾವಿಯಿಂದ ಬಾಗಿಲು ತೆರೆಯುವುದು ತಡವಾದರೆ, ತಕ್ಷಣವೇ ಸುತ್ತಿಗೆಯಿಂದ ಬೀಗ ಮುರಿದು ಒಳಹೋಗಿ ದೇವರಿಗೆ ಆಹಾರ ನೀಡಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರಿಗಾಗಿ ಈ ದೇವಾಲಯ ಬೆಳಿಗ್ಗೆ 5 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ.
ಪುರಾಣಗಳ ಪ್ರಕಾರ, ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀಕೃಷ್ಣನ ಮೂರ್ತಿಯು ಕಂಸನನ್ನು ವಧಿಸಿದ ನಂತರದ ರೂಪವನ್ನು ಬಿಂಬಿಸುತ್ತದೆ. ಮಹಾ ಯುದ್ಧದ ನಂತರ ಶ್ರೀಕೃಷ್ಣನಿಗೆ ತೀವ್ರವಾದ ಹಸಿವು ಉಂಟಾಗಿತ್ತು ಎನ್ನಲಾಗುತ್ತದೆ. ಆದ್ದರಿಂದಲೇ ಇಲ್ಲಿನ ಕೃಷ್ಣನಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಇಲ್ಲದಿದ್ದರೆ ಮೂರ್ತಿ ಕರಗಲು ಆರಂಭವಾಗುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿನ ಪ್ರಸಾದವನ್ನು ಪಡೆದುಕೊಳ್ಳದೇ ವಾಪಸ್ ಹೋಗಬಾರದು ಎಂಬ ಕಠಿಣ ನಿಯಮವಿದೆ. ಇಲ್ಲಿನ ಪ್ರಸಾದವನ್ನು ಸೇವಿಸುವುದರಿಂದ ನವಗ್ರಹ ದೋಷ, ಗ್ರಹಣ ದೋಷ, ಸಂತಾನ ದೋಷ, ಸರ್ಪ ದೋಷ, ವಿವಾಹದ ಅಡೆತಡೆಗಳು ಮತ್ತು ಬ್ರಹ್ಮಹತ್ಯೆಯಂತಹ ಮಹಾ ಪಾಪಗಳೂ ಸಹ ನಿವಾರಣೆಯಾಗುತ್ತವೆ ಎಂದು ಸ್ಥಳೀಯರು ನಂಬುತ್ತಾರೆ. ಈ ವಿಶಿಷ್ಟ ದೇವಾಲಯದ ನಾಲ್ಕೂ ದಿಕ್ಕುಗಳ ಗೋಡೆಗಳ ಮೇಲೆ ವಿವಿಧ ದೇವತೆಗಳ ಮೂರ್ತಿಗಳಿವೆ. ಮೂಡಣದಲ್ಲಿ (ಪೂರ್ವ) ಕೋಚಂಬಲಂ ಜಿ ದೇವಸ್ಥಾನವಿದ್ದರೆ, ಉತ್ತರದಲ್ಲಿ ಶಿವ ಮತ್ತು ನರಸಿಂಹ ಸ್ವಾಮಿಯ ಮೂರ್ತಿಗಳಿವೆ. ಪಶ್ಚಿಮದಲ್ಲಿ ಗಣಪತಿ, ಸುಬ್ರಹ್ಮಣ್ಯ ಹಾಗೂ ಶಾಸ್ತಾ (ಅಯ್ಯಪ್ಪ) ನೆಲೆಸಿದ್ದರೆ, ದಕ್ಷಿಣದಲ್ಲಿ ಯಕ್ಷ ಮತ್ತು ಗಂಧರ್ವರ ಸನ್ನಿಧಿಯಿದೆ ಎನ್ನಲಾಗುತ್ತದೆ.















