ಮನೆ ಕಾನೂನು ಅಕ್ಟೋಬರ್ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಜ್ಞಾನವಾಪಿ ಮಸೀದಿ ಅರ್ಜಿ ವಿಚಾರಣೆ

ಅಕ್ಟೋಬರ್ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಜ್ಞಾನವಾಪಿ ಮಸೀದಿ ಅರ್ಜಿ ವಿಚಾರಣೆ

0

ನವದೆಹಲಿ(Newdelhi): ಜ್ಞಾನವಾಪಿ ಮಸೀದಿ ಸ್ಥಳ ಸಮೀಕ್ಷೆಗೆ ಕೋರ್ಟ್‌ ಕಮಿಷನರ್‌ ನೇಮಕ ಮಾಡಿದ ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಅಕ್ಟೋಬರ್‌ ಮೊದಲ ವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌, ಸೂರ್ಯಕಾಂತ್‌ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ಪೀಠವು, ಹಿಂದೂ ಭಕ್ತರು ಸಲ್ಲಿಸಿರುವ ಸಿವಿಲ್‌ ಮೊಕದ್ದಮೆಯನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿಯು ಅರ್ಜಿಯಲ್ಲಿ ಎತ್ತಿರುವ ಆಕ್ಷೇಪಣೆಗೆ ಸಂಬಂಧಿಸಿ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರು ಕೈಗೊಳ್ಳುವ ತೀರ್ಮಾನ ಎದುರು ನೋಡಲಾಗುತ್ತಿದೆ ಎಂದು ಹೇಳಿದೆ.

ತ್ರಿಸದಸ್ಯ ಪೀಠವು, ಜಿಲ್ಲಾ ನ್ಯಾಯಾಧೀಶರ ಮುಂದೆ ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದ್ದು, ಇದು ಪೂರ್ಣವಾಗುವವರೆಗೆ, ತೀರ್ಪು ಹೊರಬೀಳುವವರೆಗೂ ಜ್ಞಾನವಾಪಿ ಮಸೀದಿ ಸಮಿತಿಯ ಮನವಿಯನ್ನು ಬಾಕಿ ಇರಿಸುವುದು ಸೂಕ್ತ ಎಂದು ‌ಅಭಿಪ್ರಾಯಪಟ್ಟಿತು.

ಮೇ 20ರಂದು ಸುಪ್ರೀಂ ಕೋರ್ಟ್‌, ಜ್ಞಾನವಾಪಿ ಮಸೀದಿ‌ ಬಗ್ಗೆ ಹಿಂದೂ ಭಕ್ತರು ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನು ವಾರಾಣಸಿಯ ಸಿವಿಲ್ ನ್ಯಾಯಾಲಯದಿಂದ (ಹಿರಿಯ ವಿಭಾಗ) ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು.

ಇದೊಂದು ಸಂಕೀರ್ಣ ಮತ್ತು ಸೂಕ್ಷ್ಮ ವಿಚಾರ. ಈ ಪ್ರಕರಣವನ್ನು 25-30 ವರ್ಷಗಳ ಕಾಲ ನಿರ್ವಹಿಸಿರುವ ನ್ಯಾಯಾಂಗದ ಹಿರಿಯ ಅಧಿಕಾರಿಗಳೇ ನಿಭಾಯಿಸುವುದು ಉತ್ತಮ ಎಂದು ಸುಪ್ರೀಂಕೋರ್ಟ್‌ ಹೇಳಿದೆ.