ಮನೆ ರಾಜ್ಯ ವ್ಯಕ್ತಿತ್ವ ರೂಪಿಸಿದ ವಿದ್ಯಾರ್ಥಿನಿಲಯ: ಡಾ.ಮಾಲೇಗೌಡ

ವ್ಯಕ್ತಿತ್ವ ರೂಪಿಸಿದ ವಿದ್ಯಾರ್ಥಿನಿಲಯ: ಡಾ.ಮಾಲೇಗೌಡ

0

ಮೈಸೂರು(Mysuru): ನಮಗೆ ವ್ಯಕ್ತಿತ್ವ ರೂಪಿಸಿದ ವಿದ್ಯಾರ್ಥಿನಿಲಯವನ್ನು ಮರೆಯಲಾಗದು ಎಂದು ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿ ಹಾಗೂ ಮೂಳೆತಜ್ಞ ಡಾ.ಮಾಲೇಗೌಡ ತಿಳಿಸಿದರು.

ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗದ ಜನರ ನಾಡಿ ಮಿಡಿತವನ್ನು ಅರಿತಿದ್ದ ದೇವರಾಜ ಅರಸು ಅವರ ದೂರದೃಷ್ಟಿತ್ವದಿಂದ ಹಾಸ್ಟೆಲ್‌ಗಳು ಆರಂಭವಾದವು. ನಾವು ಹರಿದ ಬಟ್ಟೆಯಲ್ಲಿ ಬಂದಿದ್ದೆವು. ಈ ಹಾಸ್ಟೆಲ್‌ನಲ್ಲಿ ಓದಿದಂತಹ 20 ಮಂದಿ ವೈದ್ಯರಾಗಿ ಮೈಸೂರು ನಗರದಲ್ಲಿದ್ದೇವೆ. ಪ್ರಾಧ್ಯಾಪಕರಾಗಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ವಿವಿಧ ನೌಕರಿ ಪಡೆದಿದ್ದಾರೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಉಪ ಆಯುಕ್ತೆ ಎಂ.ಕೆ.ಸವಿತಾ ಮಾತನಾಡಿ, ನಾನು ದೇವರಾಜ ಅರಸು ಅವರಂತಹ ಪುಣ್ಯಾತ್ಮ ನಿರ್ಮಿಸಿದ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ನಾನು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ನಮ್ಮಲ್ಲೇ ಪೈಪೋಟಿ ಇಟ್ಟುಕೊಂಡು ಓದುತ್ತಿದ್ದೆವು. ಜಾತಿ, ಮತ ಸೇರಿದಂತೆ ಯಾವುದೇ ತಾರತಮ್ಯವಿರಲಿಲ್ಲ. ಊಟ–ತಿಂಡಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕುಗ್ರಾಮಗಳಿಂದ ಬಂದ ನಮಗೆ ಮೈಸೂರಿನಂಥ ನಗರದಲ್ಲಿ ಉಳಿಯಲು ಜಾಗ ಸಿಕ್ಕಿದ್ದೇ ಪುಣ್ಯ. ನಾವು ಓದುವಾಗ ರ‍್ಯಾಂಕ್ ಪಡೆದಿದ್ದ ಶೈಲಜಾ ಎಂಬ ಹಿರಿಯ ವಿದ್ಯಾರ್ಥಿನಿಯಿಂದ ಆಗಿನ ಜಿಲ್ಲಾಧಿಕಾರಿ ಎಂ.ರಾಮಯ್ಯ ನಮಗೆ ಮಾರ್ಗದರ್ಶನ ಮಾಡಿಸುತ್ತಿದ್ದರು. ಅವರೇ ನಮಗೆ ರೋಲ್ ಮಾಡೆಲ್ ಎಂದರು.

ರಾಜ್ಯ ಬುಡಕಟ್ಟು ಸಂಸ್ಥೆಯ ಸಂಶೋಧನಾ ಅಧಿಕಾರಿ ಶಿವಕುಮಾರ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ,  ಡಾ.ನಾಗೇಶ್, ಡಾ.ಶರತ್‌ಕುಮಾರ್, ಬಿ.ಸಿ.ರೇಖಾ, ಲತಾ ಶಿವರಾಂ, ಸೋನಿಯಾ, ಸುಷ್ಮಾ, ದಶರಥ, ಶಶಿಕಲಾ, ಮಂಜುಳಾ ಭದ್ರೇಗೌಡ ಮಾತನಾಡಿದರು.

ವಿಸ್ತರಾಣಾಧಿಕಾರಿ ಸತೀಶ್, ಸುಚೇಂದ್ರಕುಮಾರ್, ಬೀರೇಗೌಡ ಇದ್ದರು. ತಾಲ್ಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ ಸ್ವಾಗತಿಸಿದರು. ಸಿ.ಮಹಾಲಕ್ಷ್ಮಿ ನಿರೂಪಿಸಿದರು. ಅನುಪಮಾ ವಂದಿಸಿದರು.