ಮನೆ ಅಪರಾಧ ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

0

ಮಂಡ್ಯ(Mandya): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಂದಿರುವ ಘಟನೆ ಮಳವಳ್ಳಿಯಲ್ಲಿ ನಡೆದಿದೆ.

ಶಶಿಕುಮಾರ್ (35) ಕೊಲೆಯಾದ ವ್ಯಕ್ತಿ. ಆತನ ಪತ್ನಿ ನಾಗಮಣಿ (28) ಹಾಗೂ ಆಕೆಯ ಪ್ರಿಯಕರ ಕನಕಪುರದ ಹೇಮಂತ್ (25) ಬಂಧಿತ ಆರೋಪಿಗಳು.

ಮಳವಳ್ಳಿ ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಕಳೆದ ಸೆ.18 ರಂದು ಶಶಿಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕುರಿತು ಶಶಿಕುಮಾರ್ ತಾಯಿ, ಸೊಸೆಯ ಮೇಲೆ ಅನುಮಾನಗೊಂಡು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಿಪಿಐ ಎ.ಕೆ. ರಾಜೇಶ್ ನೇತೃತ್ವದ ಪೊಲೀಸರ ತಂಡದ ವಿಚಾರಣೆ ನಡೆಸಿದ್ದು, ನಾಗಮಣಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ನಾಗಮಣಿ ಮತ್ತು ಹೇಮಂತ್ ಕನಕಪುರ ಗಾರ್ಮೆಂಟ್ಸ್’ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ವಿವಾಹೇತರ ಸಂಬಂಧ ಹೊಂದಿದ್ದರು. ಪತ್ನಿಯ ವಿವಾಹೇತರ ಸಂಬಂಧದ ಕುರಿತು ತಿಳಿದ ಶಶಿಕುಮಾರ್, ಕಳೆದ ಎರಡು ತಿಂಗಳ ಹಿಂದೆ ಆಕೆಯನ್ನು ಕೆಲಸದಿಂದ ಬಿಡಿಸಿ ಮಳವಳ್ಳಿ ಮನೆಗೆ ಕರೆತಂದು ಮನೆಯಲ್ಲೇ ಇರುವಂತೆ ಹೇಳಿದ್ದರು ಎನ್ನಲಾಗ್ತಿದೆ.

ಇದರಿಂದ ಕೋಪಗೊಂಡ ನಾಗಮಣಿ, ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಭಾನುವಾರ ರಾತ್ರಿ ಹೇಮಂತ್’ನನ್ನು ಮನೆಗೆ ಕರೆಸಿಕೊಂಡು ಮನೆಯಲ್ಲಿದ್ದ ಮಗನಿಗೆ ಮೊಬೈಲ್ ಕೊಟ್ಟು ರೂಮ್’ನಲ್ಲಿ ಆಟವಾಡಿಕೊಳ್ಳುವಂತೆ ಹೇಳಿ, ಶಶಿಕುಮಾರ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಯಾರೋ ದುಷ್ಕರ್ಮಿಗಳು ನನ್ನನ್ನು ಮತ್ತು ಮಗನನ್ನು ಕೈಕಾಲು ಕಟ್ಟಿ ರೂಮಿನಲ್ಲಿ ಕೂಡಿಹಾಕಿ ಗಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನಾಟಕವಾಡಿದ್ದಳು.