ಮನೆ ಕಾನೂನು ಚೆಕ್ ಬೌನ್ಸ್ ಪ್ರಕರಣ: ಮಾಜಿ ಶಾಸಕ ವೈ ಎಸ್ ವಿ ದತ್ತಾ ವಿರುದ್ಧ ಬಂಧನ ವಾರೆಂಟ್...

ಚೆಕ್ ಬೌನ್ಸ್ ಪ್ರಕರಣ: ಮಾಜಿ ಶಾಸಕ ವೈ ಎಸ್ ವಿ ದತ್ತಾ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ವಿಶೇಷ ನ್ಯಾಯಾಲಯ

0

ಸಿ ಎಸ್ ಸೋಮೇಗೌಡ ಅವರು ಹೂಡಿರುವ ದಾವೆಯಲ್ಲಿ ಸತತ 10ನೇ ಬಾರಿಗೆ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಹೊರಡಿಸಿದ್ದು, ಕಳೆದ ಜನವರಿ 18ರಂದು ಬಂಧನ ವಾರೆಂಟ್ ಜಾರಿ ಮಾಡಿತ್ತು.

ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವೈ ಎಸ್ ವಿ ದತ್ತಾ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಬಂಧನ ವಾರೆಂಟ್ ಹೊರಡಿಸಿದೆ.

ಅರ್ಜಿದಾರಾದ ಎನ್ ನಿತ್ಯಾನಂದ, ಸಿ ಎಸ್ ಸೋಮೇಗೌಡ ಮತ್ತು ಪ್ರಕಾಶ್ ಜಿ ಎಸ್ ಎಂಬವರು ಪ್ರತ್ಯೇಕವಾಗಿ ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್ 138ರ ಅಡಿ ದಾಖಲಿಸಿರುವ ದಾವೆಗಳ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಅವರು ನಡೆಸಿದರು.

ನಿತ್ಯಾನಂದ ಅವರು ಹೂಡಿರುವ ಪ್ರಕರಣದಲ್ಲಿ ಸತತ ನಾಲ್ಕನೇ ಬಾರಿಗೆ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ. ಒಟ್ಟು ಐದು ಬಾರಿ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯ ಮೂಲಕ ಜಾಮೀನುರಹಿತ ವಾರೆಂಟ್ ಜಾರಿ ಮಾಡುವಂತೆ ಬುಧವಾರದ ಆದೇಶದಲ್ಲಿ ತಿಳಿಸಿದೆ.

ಸಿ ಎಸ್ ಸೋಮೇಗೌಡ ಅವರು ಹೂಡಿರುವ ದಾವೆಯಲ್ಲಿ ಸತತ 10ನೇ ಬಾರಿಗೆ ನ್ಯಾಯಾಲಯವು ಜಾಮೀನುರಹಿತ ವಾರೆಂಟ್ ಹೊರಡಿಸಿದ್ದು, ಕಳೆದ ಜನವರಿ 18ರಂದು ಬಂಧನ ವಾರೆಂಟ್ ಜಾರಿ ಮಾಡಿತ್ತು. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಅವರ ಮೂಲಕ ಮತ್ತೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.

2022ರ ನವೆಂಬರ್’ನಲ್ಲಿ ಪ್ರಕಾಶ್ ಜಿ ಎಸ್ ಎಂಬವರು ದತ್ತಾ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಇಂದು ಸಮನ್ಸ್ ಜಾರಿ ಮಾಡಿದೆ. ಮೂರು ಪ್ರತ್ಯೇಕ ಪ್ರಕರಣಗಳ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿಪಡಿಸಿದೆ.