ಮನೆ ಪ್ರವಾಸ ಕರ್ನಾಟಕದ ಅತ್ಯಂತ ರಮಣೀಯ 5 ಜಲಪಾತಗಳಿವು

ಕರ್ನಾಟಕದ ಅತ್ಯಂತ ರಮಣೀಯ 5 ಜಲಪಾತಗಳಿವು

0

ಪ್ರಕೃತಿ ಪ್ರೇಮಿಗಳು ಜಲಧಾರೆಯನ್ನು ನೋಡಲು ತಮ್ಮ ವಾರಾಂತ್ಯ ಅಥವಾ ರಜಾ ದಿನಗಳಲ್ಲಿ ಪ್ರವಾಸ ಯೋಜಿಸುತ್ತಾರೆ. ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಪಾತದ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸದೇ ಇರಲಾರದು. ಛಾಯಾಗ್ರಾಹಕರು, ಪ್ರಕೃತಿ ಆರಾಧಕರಿಗೆ ಜಲಪಾತದ ಸುತ್ತಲಿನ ವಾತಾವರಣ ಪುಳಕವನ್ನು ಉಂಟು ಮಾಡುತ್ತದೆ.

Join Our Whatsapp Group

ಭಾರತದಲ್ಲಿ ಸಾಕಷ್ಟು ಜನಪ್ರಿಯ ಹಾಗು ನಿಸರ್ಗದಲ್ಲಿ ಮರೆಮಾಚಿರುವ ಜಲಪಾತಗಳಿವೆ. ಅವುಗಳನ್ನು ಆಕಾರ, ಗಾತ್ರ ಹಾಗು ಸೌಂದರ್ಯಗಳಿಂದಾಗಿ ವಿಂಗಡಿಸಲಾಗಿದೆ. ನಮ್ಮ ಕರುನಾಡಿನಲ್ಲಿ ಕೂಡ ಸೊಗಸಾದ ಹಾಗು ಎತ್ತರವಾದ ಜಲಪಾತಗಳಿವೆ. ನೀವು ಲೇಖನದಲ್ಲಿ ತಿಳಿಸಲಾಗಿರುವ ಜಲಪಾತವನ್ನು ನೋಡಿದ್ದೀರಾ?

ಕುಂಚಿಕಲ್ ಜಲಪಾತ

ಸುಮಾರು 455 ಮೀ ಎತ್ತರದಿಂದ ಧುಮ್ಮಿಕ್ಕುವ ಈ ಕುಂಚಿಕಲ್ ಜಲಪಾತವನ್ನು ನೀವು ನೋಡಿದ್ದೀರಾ? ನೀವು ಭೇಟಿ ನೀಡಿರುವ ಈ ಜಲಪಾತ ಕರ್ನಾಟಕದ ಅತ್ಯಂತ ಎತ್ತರವಾದ ಜಲಪಾತ ಎಂಬುದು ನಿಮಗೆ ತಿಳಿದಿರಲಿ. ವರಾಹಿ ನದಿಯಿಂದ ರೂಪುಗೊಂಡ ಈ ಜಲಪಾತವು ನೂರಾರು ಬಂಡೆಗಳ ಮೂಲಕ ಧುಮ್ಮಿಕ್ಕುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಹಬ್ಬ.

ಕುಂಚಿಕಲ್ ಜಲಪಾತವು ಒಂದು ಕಿ.ಮೀಗಿಂತಲೂ ಹೆಚ್ಚು ಬಂಡೆಗಳ ಕೆಳಗೆ ಧುಮ್ಮಿಕ್ಕುತ್ತದೆ. ಜನರು ನೈಸರ್ಗಿಕ ಸೌಂದರ್ಯವನ್ನು ಆನಂದಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಬರ್ಕಾನಾ ಜಲಪಾತ

ಬರ್ಕಾನಾ ಜಲಪಾತವು ಸುಮಾರು 259 ಮೀ ಎತ್ತರದಿಂದ ಧುಮ್ಮಿಕ್ಕುತ್ತದೆ. ಕರ್ನಾಟಕದ 2 ನೇ ಅತಿ ಎತ್ತರದ ಜಲಪಾತ ಮಾತ್ರವಲ್ಲ ಬದಲಾಗಿ ಭಾರತದ 10 ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.

ಬರ್ಕಾಣ ಜಲಪಾತವು ಆಗುಂಬೆ ಗ್ರಾಮದಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು, ಪಶ್ಚಿಮ ಘಟ್ಟಗಳ ಹಾಗು ಬೆಟ್ಟದ ಇಳಿಜಾರುಗಳಲ್ಲಿ ಮೋಡಿ ಮಾಡುವ ನೋಟವನ್ನು ಆನಂದಿಸುವುದನ್ನು ಮರೆಯದಿರಿ.

ಜೋಗ ಜಲಪಾತ

ಶರಾವತಿ ನದಿಯಿಂದ ಹುಟ್ಟುವ ಜಲಪಾತವು ಸುಮಾರು 253 ಮೀ ಎತ್ತರದಿಂದ ಬೀಳುತ್ತದೆ. ಇದು ಭಾರತದ 2 ನೇ ಅತಿ ಎತ್ತರವಾದ ಜಲಪಾತ ಎಂದು ಹೆಸರುವಾಸಿಯಾಗಿದೆ. ಈ ರಮಣೀಯವಾದ ಜಲಪಾತವನ್ನು ಜೋಗದ ಗುಂಡಿ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ರೋರರ್, ರಾಜಾ, ರಾಕೆಟ್, ರಾಣಿಯಂತಹ 4 ವಿಭಿನ್ನ ಜಲಪಾತಗಳನ್ನು ಇಲ್ಲಿ ಒಟ್ಟಿಗೆ ಕಣ್ತುಂಬಿಕೊಳ್ಳಬಹುದು.

ಕಲ್ಹಟ್ಟಿ ಜಲಪಾತ

ಈ ಕಲ್ಹಟ್ಟಿ ಜಲಪಾತವು ಕರ್ನಾಟಕದ ಅತಿ ಎತ್ತರವಾದ ಜಲಪಾತಗಳಲ್ಲಿ ಒಂದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಲ್ಲತ್ತಿಪುರದಲ್ಲಿದೆ. ಇದನ್ನು ಕಾಳಹಸ್ತಿ ಜಲಪಾತ ಎಂದು ಸಹ ಕರೆಯಲಾಗುತ್ತದೆ. ಸುಮಾರು 122 ಮೀಟರ್ ಎತ್ತರದಿಂದ ಧರೆಗೆ ಧುಮ್ಮಿಕ್ಕುವ ಈ ಜಲಧಾರೆಯ ನೋಟವು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ವಿಲಕ್ಷಣ ಸಸ್ಯ ಮತ್ತು ಪ್ರಾಣಿಗಳು ಕಲಹಟ್ಟಿ ಜಲಪಾತದ ಆಕರ್ಷಣೆಯನ್ನು ಹೆಚ್ಚಿಸಿದೆ. ಮಳೆಗಾಲದ ಸಮಯದಲ್ಲಿ ಜಲಪಾತದ ಸೊಬಗು ಮತ್ತಷ್ಟು ಇಮ್ಮಡಿಗೊಳ್ಳುತ್ತದೆ.

ಬೆಲ್ಕಲ್ ತೀರ್ಥ

ಸುಮಾರು 92 ಮೀ ಎತ್ತರದಿಂದ ಧುಮ್ಮಿಕ್ಕುವ ಈ ಬೆಲ್ಕಲ್ ತೀರ್ಥವು ಕುಂದಾಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಈ ಜಲಪಾತವು ಅತ್ಯಂತ ಪವಿತ್ರವಾದುದು ಎಂದು ಪರಿಗಣಿಸಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಪಾಪ ಹಾಗು ರೋಗಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ. ಹಸಿರು ದಟ್ಟವಾದ ಕಾಡುಗಳ ನಡುವೆ ಬೆಳ್ಕಲ್ ತೀರ್ಥವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ.