ಮನೆ ಅಪರಾಧ ಮೈಸೂರು: ಕುತ್ತಿಗೆಗೆ ವೇಲ್ ಬಿಗಿದು ಮಹಿಳೆಯ ಹತ್ಯೆ

ಮೈಸೂರು: ಕುತ್ತಿಗೆಗೆ ವೇಲ್ ಬಿಗಿದು ಮಹಿಳೆಯ ಹತ್ಯೆ

0

ಮೈಸೂರು: ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ವೇಲ್ ಬಿಗಿದು ಹತ್ಯೆಗೈದಿರುವ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ವಿವೇಕಾನಂದ ನಗರ ಜ್ಯೋತಿ ಸ್ಕೂಲ್ ಬಳಿಯ ನಿವಾಸಿ ನಾಗರಾಜ್ ಎಂಬವರ ಪತ್ನಿ ಮಂಜುಳ(೪೧) ಹತ್ಯೆಗೀಡಾದವರು.

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಹೆಚ್.ಡಿ.ಕೋಟೆ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರು ಕಳೆದ ೨೬ ವರ್ಷಗಳ ಹಿಂದೆ ಮಂಜುಳ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಓರ್ವ ಪುತ್ರಿ ಇದ್ದಾಳೆ. ಬುಧವಾರ ಬೆಳಗ್ಗೆ ಎಂದಿನಂತೆ ಮಂಜುಳ ಅವರ ಪತಿ ನಾ ಗರಾಜು ಕರ್ತವ್ಯಕ್ಕೆ ತೆರಳಿದರೆ, ಮಗಳು ಶಾಲೆಗೆ ತೆರಳಿದಳು. ಶಾಲೆ ಮುಗಿಸಿಕೊಂಡು ಸಂಜೆ ೪ ಗಂಟೆಗೆ ಮಗಳು ಮನೆಗೆ ಬಂದಿದ್ದಳು. ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿಯೇ ಇತ್ತು. ಓಳಗೆ ಹೋದ ಮಗಳಿಗೆ ಕೊಠಡಿಯ ಮಂಚದ ಮೇಲೆ ವೇಲ್ ಬಿಗಿದ ಸ್ಥಿತಿಯಲ್ಲಿ ತಾಯಿ ಮೃತಪಟ್ಟಿದ್ದು, ಕಂಡು ಬಂದಿದೆ. ಕೂಡಲೇ ಆಕೆ ತಂದೆ ಹಾಗೂ ಅಕ್ಕ ಪಕ್ಕದವರಿಗೆ ವಿಚಾರ ತಿಳಿಸಿದ್ದಾಳೆ.

ಸ್ಥಳೀಯರು ಕುವೆಂಪು ನಗರ ಠಾಣಾ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.