ಬೆಂಗಳೂರು: ಒಂದು ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ ಸಿಎಂ ಸಿದ್ದರಾಮಯ್ಯ ಅವರೇ. ಯುಪಿಎ ಅವಧಿಗೆ ಹೋಲಿಸಿದರೆ ಎನ್ ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ ಮೂರು ಪಟ್ಟು ಹೆಚ್ಚು ಹಣ ದೊರೆತಿದೆ ಎನ್ನುವ ಸತ್ಯ ನಿಮಗೂ ಗೊತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕದ ಪಾಲಿನ ಹಣವನ್ನು ನೀಡದೆ ಅನ್ಯಾಯ ಎಸಗುತ್ತಿದೆ. ಅನುದಾನ ನೀಡುವ ವಿಚಾರದಲ್ಲಿ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಆದರೆ, ಇದನ್ನು ಪ್ರಶ್ನಿಸಲು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಬಾಯಿ ಬರಲ್ಲ. ಪ್ರತಿಪಕ್ಷ ನಾಯಕ ಆರ್ ಅಶೋಕ್ಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿರುಗೇಟು ನೀಡಿದ್ದಾರೆ.
“14 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯ ಅವರು ಪದೇ ಪದೇ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು ಬಿಟ್ಟು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಕಳೆದ 20 ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಒಟ್ಟು ಅನುದಾನ, ತೆರಿಗೆ ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ” ಎಂದು ಆರ್ ಅಶೋಕ್ ಆಗ್ರಹಿಸಿದರು.
ಇನ್ನು ರಾಜ್ಯ ಬಿಜೆಪಿ ಘಟಕ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಹರಿಹಾಯ್ದಿದೆ. “ಸಿದ್ದರಾಮಯ್ಯ ಅವರ ಸರ್ಕಾರ 2,38,000 ಕೋಟಿ ರೂ. ರಾಜಸ್ವ ಸ್ವೀಕೃತಿಯ ಗುರಿ ಇಟ್ಟುಕೊಂಡಿತ್ತು. ಆದರೆ ಡಿಸೆಂಬರ್ ಅಂತ್ಯಕ್ಕೆ ಕೇವಲ 1,61,000 ಕೋಟಿ ರೂ. ಗುರಿ ತಲುಪಿದೆ. ಅಂದರೆ ಇವರ ಸಾಧನೆ ಕೇವಲ ಶೇ 67 ರಷ್ಟು ಮಾತ್ರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಶೇ 82 ರಷ್ಟು ಗುರಿ ಸಾಧಿಸಲಾಗಿತ್ತು. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ತಮ್ಮ ಸರ್ಕಾರದ ಗುರಿ ಏಕೆ ತಲುಪಲಿಲ್ಲ ಎಂಬುದರ ಬಗ್ಗೆ ರಾಜ್ಯದ ಜನರಿಗೆ ಉತ್ತರ ನೀಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದೆ ಎಂದರು.
ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಮರೆಮಾಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸದಾ ಆರೋಪಿಸುವುದು ಕೇಂದ್ರ ಸರ್ಕಾರವನ್ನು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದೂ ಕಂಡು ಕೇಳರಿಯದಂತಹ ಆಡಳಿತ ವಿರೋಧಿ ಅಲೆ ಸದ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಆಡಳಿತ ವಿರೋಧಿ ಅಲೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಜೀವನ ಪೂರ್ತಿ ಪರರನ್ನು ಬೊಟ್ಟು ಮಾಡಿ ಜಾರಿಕೊಳ್ಳಲು ಯತ್ನಿಸುತ್ತಿರುವ ಸಿದ್ದರಾಮಯ್ಯನವರೇ, ಈ ಕೆಳಗಿನ ಮಾಹಿತಿ ನಿಮ್ಮ ಸರ್ಕಾರದ ಬಳಿ ಇಲ್ಲದಿರುವುದು ನಿಮ್ಮ ಆಡಳಿತದ ಅಸಾಮರ್ಥ್ಯ ತೋರಿಸುತ್ತದಷ್ಟೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ ಮೂರುಪಟ್ಟು ಅಧಿಕ ತೆರಿಗೆಪಾಲು ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಅವರ ಸರ್ಕಾರ ಎಂದು ಹೇಳಿದರು.
2004-2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್ವೆಲ್ತ್ ಹಗರಣಗಳಂಥ ಭಾನಗಡಿಗಳ ನಡುವೆ ಕರ್ನಾಟಕಕ್ಕೆ ನೀಡಲು ಅಂದಿನ ಕೇಂದ್ರ ಸರ್ಕಾರದ ಬಳಿ ಇದ್ದದ್ದೇ ₹81,795 ಕೋಟಿ. ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ ₹2,82,791 ಕೋಟಿ ಶೇ.245 ರಷ್ಟು ಹೆಚ್ಚು ಎಂಬುದನ್ನು ಕಾಂಗ್ರೆಸ್ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಲು ನೀವು ಎಷ್ಟೇ ಪ್ರಯತ್ನಿಸಿದರೂ ಅಸಾಧ್ಯ ಎಂದು ಹೇಳಿದ್ದಾರೆ.
ಇದಲ್ಲದೆ ನಿರ್ದಿಷ್ಟ ಯೋಜನೆಗಳಿಗಾಗಿ ನೀಡಲಾದ ಅಭಿವೃದ್ಧಿ ಹಣ ಅದೆಷ್ಟು ಪಾಲು ಅಧಿಕ ಎಂಬುದನ್ನು ಲೆಕ್ಕ ಹಾಕಲು ಸ್ವಯಂಘೋಷಿತ ಆರ್ಥಿಕ ತಜ್ಞರಾದ ತಮಗೆ ಅಸಾಧ್ಯವಲ್ಲ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ ₹ 60,779 ಕೋಟಿಗಿಂತಲೂ ಮೋದಿ ಸರ್ಕಾರ ನೀಡಿದ ₹2,08,882 ಕೋಟಿ ಹೆಚ್ಚು ಎಂಬುದನ್ನು ಅರಿಯಲು ಅರ್ಥಶಾಸ್ತ್ರ ಗೊತ್ತಿರಲೇಬೇಕೆಂದು ಇಲ್ಲ, ಲೆಕ್ಕ ಗೊತ್ತಿದ್ದರೂ ಸಾಕು. ನಮ್ಮ ರಾಜ್ಯದಲ್ಲಿ ನಿಮ್ಮ ಪಕ್ಷದವರು 1947 ರಿಂದ 2014ರ ವರೆಗೆ ನಿರ್ಮಾಣ ಮಾಡಿದ ರಸ್ತೆ ಕೇವಲ 6750 ಕಿಲೋಮೀಟರ್. ಮೋದಿ ಸರ್ಕಾರ 2014ರ ನಂತರ ಕರ್ನಾಟಕದಲ್ಲಿ ಮಾಡಿದ ರಸ್ತೆ ನಿರ್ಮಾಣ ಒಟ್ಟು 13,500 ಕಿಲೋಮೀಟರ್. ಸಿದ್ದರಾಮಯ್ಯನವರೇ, ಮೊದಲು ನಾಲ್ಕು ಗಂಟೆಗೂ ಹೆಚ್ಚು ಸಮಯ ತಗಲುತ್ತಿದ್ದ ನಿಮ್ಮ ತವರೂರಿಗೆ ಕೇವಲ ಒಂದೂವರೆ ಗಂಟೆಯಲ್ಲೇ ನೀವಿಂದು ಹೋಗುತ್ತಿರುವ ಆ ರಸ್ತೆಯನ್ನು ಮಾಡಿಸಿದ್ದೂ ಸಹ ಮೋದಿ ಸರ್ಕಾರವೇ. 2009 ರಿಂದ 2014ರ ವರೆಗೆ ರಾಜ್ಯದ ರೈಲ್ವೆ ಯೋಜನೆಗಳಿಗೆ ನಿಮ್ಮ ಸರ್ಕಾರ ನೀಡಿದ್ದ ₹835 ಕೋಟಿಗಿಂತ ಮೋದಿ ಸರ್ಕಾರ ನೀಡಿರುವ ₹11,000 ಕೋಟಿ ಎಷ್ಟು ಪಟ್ಟು ಹೆಚ್ಚು ಎಂಬುದನ್ನು ನೀವೇ ಸ್ವಲ್ಪ ಲೆಕ್ಕ ಹಾಕಿ ಹೇಳಿಬಿಡಿ ಎಂದಿದ್ದಾರೆ.
ಬ್ರಿಟೀಷರು ಭಾರತವನ್ನು ಬಿಟ್ಟು ಹೋದಲ್ಲಿಂದ ಹಿಡಿದು 2014 ರಲ್ಲಿ ಕಾಂಗ್ರೆಸ್ ಅಧಿಕಾರ ಬಿಟ್ಟು ತೊಲಗುವವರೆಗೆ, 67 ವರ್ಷಗಳಲ್ಲಿ ಕರ್ನಾಟಕದಲ್ಲಿ ಆದ ರೈಲ್ವೇ ವಿದ್ಯುದೀಕರಣ ಕೇವಲ 16 ಕಿಲೋಮೀಟರ್. ಆದರೆ ಕಾಂಗ್ರೆಸ್ಸನ್ನು ಉಚ್ಛಾಟಿಸಿ ಬಂದ ಮೋದಿ ಸರ್ಕಾರ ಮಾಡಿದ ರೈಲ್ವೆ ವಿದ್ಯುದೀಕರಣ ಬರೋಬ್ಬರಿ 3265 ಕಿಮೀ. ರೈಲ್ವೆ ಇಲಾಖೆ ಸಾಧನೆಯೇ ಕಾಂಗ್ರೆಸ್ ಅವಧಿಯಲ್ಲಿ ಇಷ್ಟು ಅತ್ಯಲ್ಪವಾಗಿರುವಾಗ ನಿಮ್ಮ ಪಕ್ಷದವರು ಅಧಿಕಾರ ನಡೆಸುವಾಗ ಮೆಟ್ರೋಗೋಸ್ಕರ ಯಶಸ್ವಿಯಾಗಿ ಅಳವಡಿಸಿದ ಹಳಿಯ ಉದ್ದ ಕೇವಲ 7 ಕಿಮೀ. 2014 ರಿಂದ 2023 ನಡುವೆ ಬರೋಬ್ಬರಿ 73 ಕಿಲೋಮೀಟರ್ ಮೆಟ್ರೋ ಹಳಿ ಅಳವಡಿಸಲಾಗಿದೆ. ಅಂದರೆ ಇದು ನಿಮ್ಮ ಪಕ್ಷದವರು ನಿರ್ಮಿಸಿದ್ದಕ್ಕಿಂತ 10 ಪಟ್ಟಿಗೂ ಹೆಚ್ಚು ಅಧಿಕ. ಕಾಂಗ್ರೆಸ್ ನ 67 ವರ್ಷಗಳ ಆಡಳಿತದಲ್ಲಿ ಕರ್ನಾಟಕದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣಗಳು ಕೇವಲ 7. ಆದರೆ 2014ರಲ್ಲಿ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದ ನಂತರ ಕರ್ನಾಟಕವೊಂದರಲ್ಲೇ 14 ವಿಮಾನ ನಿಲ್ದಾಣಗಳನ್ನು ನಿರ್ಮಿಸಿರುವುದು ಮೋದಿ ಸರ್ಕಾರ ಎಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಿಗೆ ನೀಡಿರುವುದು ₹30,000 ಕೋಟಿ. ಕರ್ನಾಟಕದ ರೈತರ ಜೇಬಿಗೆ ಬಂದ ಕಿಸಾನ್ ಸಮ್ಮಾನದ ಮೌಲ್ಯ ₹10,990 ಕೋಟಿ. ಕಾಂಗ್ರೆಸ್ ಸರ್ಕಾರಗಳಿಗೆ 67 ವರ್ಷಗಳಲ್ಲಿ ಯೋಚಿಸಲೂ ಸಾಧ್ಯವಾಗದಿದ್ದ ಆಯುಷ್ಮಾನ್ ಭಾರತ ಯೋಜನೆಯ ಲಾಭವನ್ನು ಪಡೆದ ಕನ್ನಡಿಗರು 62,00,000 ಕ್ಕೂ ಅಧಿಕ. ಕರ್ನಾಟಕಕ್ಕೆ ಮೊದಲ ಐಐಟಿ ನೀಡಿದ್ದು ಸಹ ಮೋದಿ ಸರ್ಕಾರ ಎಂಬುದು ನಿಮಗೆ ತಿಳಿದಿತ್ತೇ ಮುಖ್ಯಮಂತ್ರಿ ಸಾಹೇಬರೇ? ಎಂದು ಪ್ರಶ್ನಿಸಿದ್ದಾರೆ.
ಕೊರೋನಾದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರ ಕರ್ನಾಟಕಕ್ಕೆ ಉಚಿತವಾಗಿ ನೀಡಿದ ಲಸಿಕೆಯೇ 10 ಕೋಟಿಗೂ ಹೆಚ್ಚು. ಆ ಪ್ರಮಾಣದಲ್ಲಿ ನಿಮ್ಮ ಪಕ್ಷದ ಸರ್ಕಾರಗಳು ಪೋಲಿಯೋ ಲಸಿಕೆಗಳನ್ನೂ ನೀಡಿಲ್ಲ ಎಂಬ ಅಂಶ ನಿಮ್ಮ ತಲೆಯಲ್ಲಿರಲಿ.
ಮೇಲೆ ಹೇಳಿದ ಇವಿಷ್ಟೂ ಅಲ್ಲದೆ ಪಿಎಂ ಗತಿ ಶಕ್ತಿ ಯೋಜನೆ, ಸಾಗರಮಾಲಾ ಯೋಜನೆ, ಬಡವರಿಗೆ ಸ್ವಂತ ಮನೆ ಖಾತರಿಪಡಿಸುವ ಪಿಎಂ ಆವಾಸ್ ಯೋಜನೆಯಡಿ ರಾಜ್ಯಕ್ಕೆ ₹1 ಲಕ್ಷ ಕೋಟಿ ರೂಪಾಯಿಗೂ ಅಧಿಕ ನೆರವು 2014ರ ನಂತರ ಹರಿದುಬಂದಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಪಟಾಲಂ ಕಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿರುವ ಸಿದ್ದರಾಮಯ್ಯನವರೇ, ಜಲ ಜೀವನ್ ಮಿಷನ್, ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ, ಪಿಎಂ ಆವಾಸ್ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ನೀಡಿದ ಅನುದಾನವನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದೀರಾ ಎಂಬ ಶ್ವೇತಪತ್ರವನ್ನು ಹೊರಡಿಸುವ ತಾಕತ್ತು, ದಮ್ಮು ನಿಮ್ಮಲ್ಲಿದೆಯೇ ಎಂದು ಹರಿಹಾಯ್ದಿದ್ದಾರೆ.
ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ವಾಮಮಾರ್ಗದಲ್ಲಿ ಸಂಗ್ರಹಿಸಿ, ತೆಲಂಗಾಣ, ಛತ್ತಿಸ್ಗಢ, ಮಧ್ಯಪ್ರದೇಶ, ರಾಜಸ್ಥಾನದ ಚುನಾವಣೆಗೆ ನೀಡಿದ ನಿಮಗೆ ಈ ವಿಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.