ದಾವಣಗೆರೆ: ಕೊಲೆ ಮಾಡಿದ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ದಾವಣಗೆರೆ ನಗರದ ಕೆಟಿಜೆ ನಗರದ ನಿವಾಸಿ ಜಮೀರಾ ಭಾಷಾ ಕೊಲೆ ಮಾಡಿದ ಅಪರಾಧಿ. ಶೌಕತ್ ಅಲಿ (38) ಕೊಲೆಯಾದ ವ್ಯಕ್ತಿ.
2022ರ ಜುಲೈ 24 ರಂದು ದಾವಣಗೆರೆ ನಗರದ ಡಾಂಗೆ ಪಾರ್ಕ ಬಳಿ ಮಟನ್ ಊಟಕ್ಕೆ ಬಂದ ಜಮೀರ್ ಭಾಷಾ ಮತ್ತು ಕೊಲೆಯಾದ ಶೌಕತ್ ಅಲಿ ನಡುವೆ ಮಟನ್ ಸಾಂಬರ್ ವಿಚಾರವಾಗಿ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕೊನೆಗೆ ಜಮೀರ್ ಭಾಷಾ ಶೌಕತ್ ಅಲಿಗೆ ಚಾಕುವಿನಿಂದ ತಿವಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಶೌಕತ್ ಅಲಿ ಚಿಕಿತ್ಸೆ ಫಲಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಮೀರ್ ಭಾಷಾನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಪ್ರವೀಣಕುಮಾರ ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.














