ಮನೆ ಸ್ಥಳೀಯ ಮೈಸೂರಿನಲ್ಲಿ ರೈಲು ತಡೆ ನಡೆಸಲು ಯತ್ನ: ರೈತರ ಬಂಧನ – ಬಿಡುಗಡೆ

ಮೈಸೂರಿನಲ್ಲಿ ರೈಲು ತಡೆ ನಡೆಸಲು ಯತ್ನ: ರೈತರ ಬಂಧನ – ಬಿಡುಗಡೆ

0

ಮೈಸೂರು: ರಾಜ್ಯ ಕಬ್ಬು ಬಳೆಗಾರರ ಸಂಘ ಹಾಗು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತರು  ಮೈಸೂರಿನ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಲು ಯತ್ನಿಸಿದ ರೈತರನ್ನು ಪೊಲೀಸರು ತಡೆದಿದ್ದಾರೆ.

ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದು ಮಾತಿನ ಚಕಮಕಿ ನಡೆಯಿತು.

ನಂತರ ಪೊಲೀಸರು ಬಂಧನ ಮಾಡಲು ಯತ್ನಿಸಿದಾಗ ರೈತರು  ರೈಲ್ವೆ ಗೇಟ್ ಮುಂಭಾಗ      ಕುಳಿತು ಕೇಂದ್ರ ಸರ್ಕಾರದ   ರೈತ ವಿರೋಧಿ ನೀತಿಯನ್ನು  ಖಂಡಿಸಲು ನಾವು ರೈಲು ತಡೆ ನಡೆಸಲು ಬಂದಿದ್ದೇವೆ. ನಾವು ಗೂಂಡಾಗಳಲ್ಲ ದೇಶ ದ್ರೋಹಿಗಳಲ್ಲ ನಾವೇನು ಲೂಟಿ ಮಾಡಲು ಬಂದಿಲ್ಲ ನಮ್ಮನ್ನು ಏಕೆ ತಡೆದಿದ್ದೀರಿ.  ನಮ್ಮ ರೈಲು ನಿಲ್ದಾಣಕ್ಕೆ ನಾವು ಹೋಗಲು ನಮಗೆ ಹಕ್ಕಿಲ್ಲವೇ ಎಂದು ರೈಲ್ವೆ ಪೊಲೀಸರ ವಿರುದ್ಧ  ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

 ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ರೈತರನ್ನು ಬಂಧಿಸಿ ಸಿ ಏ ಆರ್ ಮೈದಾನಕ್ಕೆ ಕರೆದೊಯದು ನಂತರ ಸಂಜೆ ವೇಳೆಗೆ ಬಿಡುಗಡೆ ಮಾಡಿದರು.

ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುತ್ತಾರೆ, ಇದು ದೇಶದ ರೈತರಿಗೆ ಮಾಡುವ  ಅಪಮಾನವಾಗಿದೆ. ರೈತರು ಗುಲಾಮರು ಅಲ್ಲ ಬಿಕ್ಷುಕರು ಅಲ್ಲ ನಿಮಗೆ ಅಧಿಕಾರ ಶಾಶ್ವತ ಅಲ್ಲ ಕೂಡಲೇ ಸಮಸ್ಯೆ ಬಗೆಹರಿಸಿ ಅನ್ನದಾತನ ಋಣ ತೀರಿಸಿ ಎಂದು ಚಳವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟದ ರೈತರು ಯಾರು ದೇಶ ದ್ರೋಹಿಗಳಲ್ಲ. ನಾವು ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ರೈಲು ತಡೆದು ಪೊಲೀಸರ ಮೂಲಕ ಬಂಧಿಸಿ ದೆಹಲಿಗೆ ಹೋಗಲು ಬಿಡದೆ ಮೂರು ದಿನದ ನಂತರ ಕರ್ನಾಟಕಕ್ಕೆ ವಾಪಸ್ ಕಳಿಸುತ್ತಾರೆ, ದೆಹಲಿಯಲ್ಲಿ ಹೋರಾಟ ಮಾಡುವ ಪಂಜಾಬ್, ಹರಿಯಾಣ ರೈತರನ್ನು ದೇಶ ವಿರೋಧಿಗಳು ಎನ್ನುತ್ತಾರೆ. ಇದರ ಅರ್ಥ ಏನು ? ರೈತರು ಸಮಸ್ಯೆ ಬಗೆಹರಿಯುವ ತನಕ ಚಳುವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ರೈತರ ಹೋರಾಟಕ್ಕೆ ನಾವು ಸದಾ ಜೊತೆಯಾಗಿರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯುತ್ತೇವೆ.  ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಲು ಹೆಚ್ಚಿನ ಕಾಳಜಿ ಇರುತ್ತದೆ, ಆದರೆ ರೈತರ ಸಾಲ ಮನ್ನಾ ವಿಚಾರ ಡಾ. ಎಂ ಎಸ್ ಸ್ವಾಮಿನಾಥನ್ ವರದಿ ಬೆಂಬಲ ಬೆಲೆ, ಡಬ್ಲ್ಯೂ ಟಿ ಓ ಒಪ್ಪಂದ, ರೈತರಿಗೆ ಪಿಂಚಣಿ ನೀಡುವ ಯೋಜನೆ, ಬೆಳೆ ವಿಮೆ ಪದ್ಧತಿ, ಕಳೆದ ವರ್ಷ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ 750 ರೈತ ಕುಟುಂಬಕ್ಕೆ ಸರ್ಕಾರದ ನೆರವು,  ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗುತ್ತಿದೆ ಎಂದು ಕಿಡಿಕಾರಿದರು.

ಇಂದಿನ ಚಳವಳಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಮುಖಂಡ ರಾದ  ಹೆಗ್ಗೂರು ರಂಗರಾಜು,ಬನ್ನೂರು ಸೂರಿ,ಬಿಪಿ ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ್,ಉಮೇಶ್, ಕಾಟೂರು ಮಹಾದೇವಸ್ವಾಮಿ, ನಾಗೇಶ್, ಶ್ರೀಕಂಠ, ನಂಜುಂಡಸ್ವಾಮಿ, ವರಕೋಡು ನಾಗೇಶ್, ಪಿ ರಾಜು, ಅಂಬಳೆ ಮಂಜುನಾಥ್, ಕೋಟೆ ಸುನಿಲ್, ಕೊಡನಹಳ್ಳಿ ಪ್ರಕಾಶ್, ಸೋಮಶೇಖರ್, ಚೇತನ್, ಶಂಭು, ಶಾಂತರಾಜ್, ಶಿವಮೂರ್ತಿ, ಮಂಜುನಾಥ್, ಶಿವಕುಮಾರ್, ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.