ಮನೆ ಅಪರಾಧ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ; ಕಾರಿನಲ್ಲಿ ಮೃತದೇಹ ಪತ್ತೆ

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ; ಕಾರಿನಲ್ಲಿ ಮೃತದೇಹ ಪತ್ತೆ

0

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣ ಯಾದವ್ (55) ಎಂಬುವವರನ್ನು ಹತ್ಯೆ ಮಾಡಿ ಕಾರಿನಲ್ಲಿ ಮೃತದೇಹ ಇರಿಸಿ ಆರೋಪಿಗಳು ಪರಾರಿಯಾಗಿದ್ದು, ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ಕೃಷ್ಣ, 20 ವರ್ಷಗಳಿಂದ ಮಾರುತಿನಗರದಲ್ಲಿ ನೆಲೆಸಿದ್ದರು. ಬಾಗಲೂರು ವೃತ್ತ ಬಳಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಮಗ ನೀಡಿರುವ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೆಲಸವಿರುವುದಾಗಿ ಹೇಳಿ ಸೋಮವಾರ ಮನೆಯಿಂದ ಹೊರಗೆ ಬಂದಿದ್ದ ಕೃಷ್ಣ, ರಾತ್ರಿ ವಾಪಸು ಹೋಗಿರಲಿಲ್ಲ. ಬೆಳಿಗ್ಗೆ ಬರಬಹುದೆಂದು ಮನೆಯವರು ಸುಮ್ಮನಾಗಿದ್ದರು. ಆದರೆ, ಬೆಳಿಗ್ಗೆ ಕೃಷ್ಣ ಮೃತದೇಹ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದರು.

ಕೃಷ್ಣ ಅವರು ತಮ್ಮ ಕಾರಿನಲ್ಲಿ ಇಬ್ಬರು ವ್ಯಕ್ತಿಗಳ ಜೊತೆ ಹೊರಟಿದ್ದರೆಂದು ಗೊತ್ತಾಗಿದೆ. ಅದೇ ವ್ಯಕ್ತಿಗಳು, ಕೃಷ್ಣ ಅವರನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ಆತನಿಗೆ 15ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ನಂತರ, ಮೃತದೇಹ ಸಮೇತ ಕಾರನ್ನು ಬಾಗಲೂರು ವೃತ್ತದ ಬಳಿ ನಿಲ್ಲಿಸಿ ಪರಾರಿಯಾಗಿರುವ ಮಾಹಿತಿ ಇದೆ. ಮೃತದೇಹದ ಮೇಲಿರುವ ಗಾಯದ ಗುರುತಿನಿಂದ ಇದೊಂದು ಕೊಲೆ ಎಂಬುದು ಗೊತ್ತಾಯಿತು’ ಎಂದು ಹೇಳಿದರು.

‘ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ, ಹಲವು ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದರು. ಕೆಲವರ ಜೊತೆ ವೈಷಮ್ಯ ಹೊಂದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಯಲಹಂಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.