ಮನೆ ಅಪರಾಧ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಆರೋಪ: ರೋಹಿತ್ ಚಕ್ರತೀರ್ಥ, ಲಕ್ಷಣ್ ವಿರುದ್ಧ ದೂರು

ರಾಷ್ಟ್ರಕವಿ ಕುವೆಂಪುಗೆ ಅಪಮಾನ ಆರೋಪ: ರೋಹಿತ್ ಚಕ್ರತೀರ್ಥ, ಲಕ್ಷಣ್ ವಿರುದ್ಧ ದೂರು

0

ಬೆಂಗಳೂರು(Bengaluru): ರಾಷ್ಟ್ರಕವಿ ಕುವೆಂಪು ಅವರ ಗೌರವಕ್ಕೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷಣ ಆಕಾಶೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ವಕೀಲರ ನಿಯೋಗ ದೂರು ನೀಡಿದೆ.

ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲರಾದ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್​ ರೆಡ್ಡಿ ಅವರಿಗೆ ದೂರು ಸಲ್ಲಿಸಿ ಆರೋಪಿತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿರುವ ಆರೋಪಿತರು ನಾಡಗೀತೆಗೂ ಅವಮಾನ ಮಾಡಿದ್ದಾರೆ. ಆದ್ದರಿಂದ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ವಿರುದ್ಧ ತಕ್ಷಣವೇ ಕಾನೂನು ರೀತಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

2017ರಲ್ಲಿ ರೋಹಿತ್ ಚಕ್ರತೀರ್ಥ ಎನ್ನುವ ವ್ಯಕ್ತಿ ಕನ್ನಡ ನಾಡಿನ ಜನಮಾನಸದ ಹೃದಯಗೀತೆ ಆಗಿರುವ ನಾಡಗೀತೆಯನ್ನು ಗೇಲಿ ಮಾಡಿ, ವಿಕೃತಗೊಳಿಸಿ, ನಾಡಗೀತೆಗೆ ಅಪಾರ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿಗಳನ್ನು ಕಡೆಗಣಿಸಿ ಸ್ಥಾಪಿತ ಹಿತಾಸಕ್ತಿಗಳ ಬರಹಗಳನ್ನು ಸೇರಿಸಿ ವಿವಾದ ಸೃಷ್ಟಿಸಿದ್ದಾರೆ. ನಾಲ್ಕನೇ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಪರಿಚಯವನ್ನು ಅಪಮಾನಕರ ರೀತಿಯಲ್ಲಿ ಪ್ರಕಟಿಸಿರುವುದು ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ 2017 ರಲ್ಲಿ ನಾಡಗೀತೆಯನ್ನು ಅಪಮಾನಿಸಿದ ರೋಹಿತ್ ಚಕ್ರತೀರ್ಥರ ವಿಕೃತ ಬರಹವನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ, ಇತರ ಮಾಧ್ಯಮಗಳಲ್ಲೂ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಕುವೆಂಪು ಅವರ ಗೌರವಕ್ಕೆ ಧಕ್ಕೆ ತರುವ ಜೊತೆಗೆ ಅವರ ಅಪಾರ ಅಭಿಮಾನಿ ವರ್ಗದ ಭಾವನೆಗಳಿಗೆ ನೋವುಂಟು ಮಾಡಿದೆ.ಅತ್ಯಂತ ಅಭಿಮಾನ, ಗೌರವದೊಂದಿಗೆ ಹಾಡುವ ನಾಡಗೀತೆಗೆ ರೋಹಿತ್ ಚಕ್ರತೀರ್ಥ ಎಂಬಾತ ಅಪಮಾನ ಮಾಡಿ ಅಸಡ್ಡೆ, ಅಸಹನೆ, ಗೇಲಿಗೆ ಒಳಪಡಿಸಿರುವುದು ಕನ್ನಡಿಗರಿಗೆ ಮತ್ತು ರಾಜ್ಯಕ್ಕೆ ಮಾಡಿದ ಅವಮಾನ.

ಇದೇ ರೀತಿ ಲಕ್ಷ್ಮಣ ಆಕಾಶೆ ಕಾರ್ಕಳ ಎಂಬ ವ್ಯಕ್ತಿ ರಾಷ್ಟ್ರಕವಿ ಕುವೆಂಪು ಅವರನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ಈತನ ಬರಹಕ್ಕೆ ರೋಹಿತ್ ಚಕ್ರತೀರ್ಥರ ಕುಮ್ಮಕ್ಕು ಇದೆ. ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಇಬ್ಬರೂ ನಾಡಿನ ಜನತೆಯ ಸಹನೆ, ಸೌಹಾರ್ದತೆಯನ್ನು ಕೆಡಿಸಬೇಕೆಂಬ ದುರುದ್ದೇಶದಿಂದಲೇ ಹಾಗೆ ಬರೆದಿದ್ದಾರೆ. ಶಾಂತಿಯುತ ನಾಡಿನಲ್ಲಿ ಜೀವ ವಿರೋಧಿ ಬರಹಗಳು ಹಿಂಸೆಗೆ ಪ್ರಚೋದಿಸುವಂತಹವು ಮತ್ತು ನಾಡಿನ ನೆಮ್ಮದಿ ಕೆಡಿಸುವಂತಹವು.

ಆದ್ದರಿಂದ ಈ ಇಬ್ಬರೂ ಸಮಾಜಘಾತುಕರ ಮೇಲೆ ಕಾನೂನು ಕ್ರಮ ಕೈಗೊಂಡು ತಕ್ಷಣ ಬಂಧಿಸಬೇಕೆಂದು ಮನವಿ ಮಾಡುತ್ತೇವೆ. ಈ ಮೂಲಕ ನಾಡಿನ ನೆಮ್ಮದಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ದೂರಿನ ಜತೆಗೆ ರೋಹಿತ್ ಚಕ್ರತೀರ್ಥ ಮತ್ತು ಲಕ್ಷ್ಮಣ ಆಕಾಶೆ ಕಾರ್ಕಳ ಅವರ ಬರಹಗಳನ್ನು ದೂರಿನೊಂದಿಗೆ ನೀಡಿರುವ ಮಾಹಿತಿ ಲಭ್ಯವಾಗಿದೆ.