ಮನೆ ಕಾನೂನು ಪರವಾನಗಿ ಇಲ್ಲದಿದ್ದರೂ ಅಪಘಾತ ವಿಮೆ ಪಾವತಿಸಿ: ಹೈಕೋರ್ಟ್‌

ಪರವಾನಗಿ ಇಲ್ಲದಿದ್ದರೂ ಅಪಘಾತ ವಿಮೆ ಪಾವತಿಸಿ: ಹೈಕೋರ್ಟ್‌

0

ಬೆಂಗಳೂರು: ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಾಹನಕ್ಕೆ ಪರವಾನಗಿ  ಮತ್ತು ಫಿಟ್‌ನೆಸ್‌ ಸರ್ಟಿಫಿಕೇಟ್‌ (ಕ್ಷಮತಾ ಪ್ರಮಾಣಪತ್ರ) ಇಲ್ಲದಿದ್ದರೂ ವಿಮಾ ಕಂಪೆನಿ ಘಟನೆಯಿಂದ ನೊಂದವರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Join Our Whatsapp Group

ಅಲ್ಲದೆ ಪರಿಹಾರದ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಕಂಪೆನಿ ವಸೂಲಿ ಮಾಡಿಕೊಳ್ಳಬಹುದು ಎಂದೂ ಹೇಳಿದೆ.

ಅಪಘಾತಕ್ಕೊಳಗಾದ ವಾಹನಕ್ಕೆ ಫಿಟ್‌ನೆಸ್‌ ಸರ್ಟಿಫಿಕೇಟ್‌ ಇಲ್ಲದಿದ್ದರೂ ಪರಿಹಾರಕ್ಕೆ ಸೂಚಿಸಿದ್ದ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಶ್ರೀರಾಮ ಜನರಲ್‌ ಇನ್ಶೂರೆನ್ಸ್‌ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಹಾಗೂ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಮೃತ ವ್ಯಕ್ತಿಯ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಎರಡೂ ಮೇಲ್ಮನವಿಗಳನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಪೀಠ, ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಮೃತ ವ್ಯಕ್ತಿಯ ಕುಟುಂಬಕ್ಕೆ ವಿಮಾ ಕಂಪೆನಿಯೇ ಪರಿಹಾರ ನೀಡಬೇಕು. ಆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ವಾಹನ ಮಾಲೀಕರಿಂದ ವಸೂಲಿ ಮಾಡಬಹುದು ಎಂದು ಆದೇಶಿಸಿದೆ. ಅದೇ ರೀತಿ ಪರಿಹಾರ ಮೊತ್ತ ಹೆಚ್ಚಳ ಮಾಡುವ ಮೃತ ವ್ಯಕ್ತಿಯ ಪತ್ನಿ ಸಲ್ಲಿಸಿದ ಮೇಲ್ಮನವಿಯಲ್ಲಿ ಪರಿಹಾರ ಮೊತ್ತವನ್ನು 13.44 ಲಕ್ಷದಿಂದ 13.88 ಲಕ್ಷ ರೂ.ಗೆ ಹೆಚ್ಚಳ ಮಾಡಿ, ಶೇ.6ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪಾವತಿಸಲು ಆದೇಶಿಸಿದೆ.

ವಾಹನ ಮಾಲೀಕರು ತನ್ನ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಗಿ ಮತ್ತು ಫಿಟ್‌ನೆಸ್‌ ಸರ್ಟಿಫಿಕೇಟ್‌ (ಕ್ಷಮತಾ ಪ್ರಮಾಣಪತ್ರ) ಹೊಂದಿಲ್ಲ. ಇದು ವಾಹನ ಮಾಲಕರ ಮೂಲಭೂತ ಉಲ್ಲಂಘನೆ. ಈ ಪ್ರಕ್ರಿಯೆಯಲ್ಲಿ ವಾಹನ ಮಾಲಕರ ತಪ್ಪೂ ಇದೆ. ಹೀಗಾಗಿ ವಿಮಾ ಕಂಪೆನಿಗಳಿಗೆ ಸಂಪೂರ್ಣ ಜವಾಬ್ದಾರಿಯಿಂದ ವಿನಾಯಿತಿ ನೀಡಬೇಕು. ಮಾಲಕರೇ ಪರಿಹಾರ ಪಾವತಿಸಬೇಕು ಎಂಬ ವಿಮಾ ಕಂಪೆನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಚಿಕ್ಕತಿರುಪತಿ ಪ್ರಕರಣ

ಹೊಸಕೋಟೆ- ಚಿಕ್ಕತಿರುಪತಿ ಮಾರ್ಗದಲ್ಲಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ನಂದೀಶಪ್ಪ ಅವರಿಗೆ ಗೂಡ್ಸ್‌ ವಾಹನ ಢಿಕ್ಕಿ ಹೊಡೆದಿತ್ತು. ಇದರಿಂದ ತಲೆಗೆ ತೀವ್ರತರದ ಪೆಟ್ಟಾಗಿದ್ದು, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 13.88 ಲಕ್ಷ ರೂ.ಗಳ ಪರಿಹಾರ ನೀಡಲು ಆದೇಶಿಸಿತ್ತು. ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಹಾಗೂ ನ್ಯಾಯಾಧಿಕರಣದ ಆದೇಶ ರದ್ದು ಕೋರಿ ವಿಮಾ ಕಂಪೆನಿಗಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು.