ಮನೆ ರಾಜಕೀಯ ಗಂಗೂಲಿ ಮನೆಯಲ್ಲಿ ಅಮಿತ್‌ ಶಾ ಭೋಜನ ಕೂಟ: ಗಂಗೂಲಿ ಬಿಜೆಪಿ ಸೇರುವ ವಿಚಾರ ಮತ್ತೆ ಮುನ್ನೆಲೆಗೆ

ಗಂಗೂಲಿ ಮನೆಯಲ್ಲಿ ಅಮಿತ್‌ ಶಾ ಭೋಜನ ಕೂಟ: ಗಂಗೂಲಿ ಬಿಜೆಪಿ ಸೇರುವ ವಿಚಾರ ಮತ್ತೆ ಮುನ್ನೆಲೆಗೆ

0

ಕೋಲ್ಕತ್ತಾ (Kolkata)- ಬಿಸಿಸಿಐ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಬಿಜೆಪಿ ಪಕ್ಷ ಸೇರುತ್ತಾರೆಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತಹ ಬೆಳವಣಿಗೆ ನಡೆದಿದ್ದು, ಗಂಗೂಲಿ ಮನೆಯಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭೋಜನ ಸವಿದಿದ್ದಾರೆ.

ಹೀಗಾಗಿ ಗಂಗೂಲಿ ಬಿಜೆಪಿ ಸೇರುವ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಕೋಲ್ಕತ್ತಾ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾತ್ರಿ ಗಂಗೂಲಿ ಮನೆಯಲ್ಲಿ ಭೋಜನ ಸವಿದಿದ್ದಾರೆ.

ಮತ್ತೊಂದೆಡೆ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಸೌರವ್ ಗಂಗೂಲಿ ಅವರ ಸಹೋದ್ಯೋಗಿಯಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಬಿಸಿಸಿಐನಲ್ಲಿ ಗೌರವ ಕಾರ್ಯದರ್ಶಿಯಾಗಿರುವುದರಿಂದ ಈ ಭೇಟಿಯನ್ನು ಸೌಜನ್ಯದ ಭೇಟಿ ಎಂದು ಹೇಳಲಾಗುತ್ತಿದೆ.

ಇನ್ನು ಭೋಜನ ಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗಂಗೂಲಿ, ಸಭೆಯಲ್ಲಿ ರಾಜಕೀಯವಾಗಿ ಏನೂ ನಡೆದಿಲ್ಲ. ಒಂದು ದಶಕದಿಂದ ಅಮಿತ್ ಶಾ ಅವರನ್ನು ಬಲ್ಲೆ ಮತ್ತು ಹಲವಾರು ಬಾರಿ ಭೇಟಿಯಾಗಿದ್ದೇನೆ ಎಂದು ಹೇಳಿದರು.

ಗಂಗೂಲಿ  ಮತ್ತು ಅಮಿತ್ ಶಾ ಅವರೊಂದಿಗಿನ ಭೇಟಿಯು ರಾಜಕೀಯ ಕೋನಕ್ಕೆ ತಿರುಗಿರೋದು ಇದೇ ಮೊದಲಲ್ಲ. ಕಳೆದ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ, ಅವರು ಅಮಿತ್ ಶಾ ಅವರೊಂದಿಗಿನ ಭೇಟಿಯ ಬಗ್ಗೆ ಸುದ್ದಿ ಹರಡಿ, ಗಂಗೂಲಿ ಬಿಜೆಪಿ ಸೇರುತ್ತಾರೆಂಬ ಮಾತು ಜೋರಾಗಿತ್ತು. ಆದರೆ ಇದನ್ನ ಸೌರವ್ ಗಂಗೂಲಿ ತಳ್ಳಿಹಾಕಿದ್ದರು.

2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಪರವಾಗಿ ಚುನಾವಣೆಗೆ ಸ್ಪರ್ಧಿಸ್ತಾರೆಂದು ದಾದಾ ವರ್ಸಸ್ ದೀದಿ ಎಂದೇ ಮಮತಾ ಬ್ಯಾನರ್ಜಿ ನಾಡಲ್ಲಿ ಗುಲ್ಲೆಬ್ಬಿಸಲಾಗ್ತಿತ್ತು. ಕಳೆದ ವರ್ಷ ಜನವರಿಯಲ್ಲೂ, ಬಂಗಾಳ ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು, ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿತ್ತು.  ಆದರೆ ಅದೇ ತಿಂಗಳು ಗಂಗೂಲಿಗೆ ಲಘು ಹೃದಯಾಘಾತವಾಯಿತು. ರಾಜಕೀಯ ಸೇರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಭೋಜನ ಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ,  ಸಭೆಯಲ್ಲಿ ರಾಜಕೀಯವಾಗಿ ಏನೂ ನಡೆದಿಲ್ಲ. ಒಂದು ದಶಕದಿಂದ ಅಮಿತ್ ಶಾ ಅವರನ್ನು ಬಲ್ಲೆ ಮತ್ತು ಹಲವಾರು ಬಾರಿ ಭೇಟಿಯಾಗಿದ್ದೇನೆ ಎಂದು ಹೇಳಿದರು.

ಹಿಂದಿನ ಲೇಖನರಾಜ್ಯದಲ್ಲಿ 181 ಮಂದಿಗೆ ಕೊರೊನಾ ಪಾಸಿಟಿವ್‌, 1 ಸಾವು
ಮುಂದಿನ ಲೇಖನನೋಟಿಸ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ: ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ