ಮನೆ ಅಪರಾಧ ಆನೇಕಲ್: ಮನೆಗೆ ನುಗ್ಗಿ ವೃದ್ಧೆಯ ಕತ್ತುಕೊಯ್ದು ಚಿನ್ನದ ಸರ ಕದ್ದೊಯ್ದ ಕಿರಾತಕ

ಆನೇಕಲ್: ಮನೆಗೆ ನುಗ್ಗಿ ವೃದ್ಧೆಯ ಕತ್ತುಕೊಯ್ದು ಚಿನ್ನದ ಸರ ಕದ್ದೊಯ್ದ ಕಿರಾತಕ

0

ಆನೇಕಲ್: ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬೆಳ್ಳಂ ಬೆಳಿಗ್ಗೆ ಮನೆಗೆ ನುಗ್ಗಿದ ಕಿರಾತಕ ವೃದ್ದೆಯ ಕತ್ತುಕೊಯ್ದು ಚಿನ್ನದ ಸರ ಕದ್ದೊಯ್ದ ಘಟನೆ ಆನೇಕಲ್​ ನಲ್ಲಿ ನಡೆದಿದೆ.

ವೃದ್ದೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ರಸ್ತೆಯಲ್ಲಿ ಘಟನೆ ನಡೆದಿದೆ.

ವೃದ್ದೆ ಅಕ್ಕಯ್ಯಮ್ಮ ಹಾಗೂ ಪತಿ ನಾರಾಯಾಣಾಚಾರಿ ಇಬ್ಬರೂ ಕಾಲು, ಕೈ ಉಳುಕಿಗೆ ಮಂತ್ರ ಹಾಕುತ್ತಿದ್ದರು. ಹೀಗಾಗಿ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿ ಅಕ್ಕಯ್ಯಮ್ಮ ಎಂಬ ವೃದ್ದೆಯ ಕತ್ತು ಕೊಯ್ದು ಚಿನ್ನದ ಸರ ಎಗರಿಸಿದ್ದಾನೆ.

ಕಳೆದ ಶನಿವಾರ ವೃದ್ದರ ಮನೆಗೆ ಉಳುಕು ಮಂತ್ರ ಹಾಕಿ ಎಂದು ಬಂದಿದ್ದ ಕಳ್ಳ ಕಾಲು ಉಳುಕಿದೆ ಎಂದು ಮಂತ್ರ ಹಾಕಿಸಿಕೊಂಡು 50 ರೂಪಾಯಿ ಕೊಟ್ಟು ಹೋಗಿದ್ದ. ಮತ್ತೆ ಇಂದು ಬೆಳಿಗ್ಗೆ 8.30 ರ ಸುಮಾರಿಗೆ ಮನೆಗೆ ಬಂದು ನೀವು ಮಂತ್ರ ಹಾಕಿದ್ದಕ್ಕೆ ನಮ್ಮ ಮಗು ಸಾವಿಗೀಡಾಗಿದೆ ಎಂದು ಬೆದರಿಸಿದ್ದ. ಏಕಾಏಕಿ ಮನೆಯ ಬಾಗಿಲು ಹಾಕಿ ಮನೆಯಲ್ಲಿನ ಒಡವೆ ಕೊಡಿ ಎಂದು ಬೆದರಿಕೆ ಹಾಕಿದ್ದ. ವೃದ್ದೆ ಸರ ನೀಡಲು ನಿರಾಕರಿಸುತ್ತಿದ್ದಂತೆ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದು ಚಿನ್ನದ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದಾನೆ.

ಪತ್ನಿಯ ಮೇಲಿನ ಹಲ್ಲೆ ತಡೆಯಲು ಮುಂದಾದ ವೃದ್ಧನ ಮೇಲೂ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ವೃದ್ಧ ನಾರಾಯಣಾಚಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಾರಾಯಣಾಚಾರಿ ಅವರು ಕೂಗಾಡಿಕೊಂಡಿದ್ದು ಚೀರಾಟ ಕೇಳಿ ಅಕ್ಕಪಕ್ಕದ ಮನೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧೆಯನ್ನು ಆನೇಕಲ್ ಪಟ್ಟಣದ ವಿಜಯ್ ನರ್ಸಿಂಗ್ ಹೋಂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನಭತ್ತ ಸಂಗ್ರಹ ಯೋಜನೆ ವ್ಯಾಪ್ತಿಯ ರೈತರನ್ನು ಬ್ಯಾಂಕ್‌ಗಳು ಸಾಲಗಾರರಂತೆ ನೋಡುವಂತಿಲ್ಲ: ಕೇರಳ ಹೈಕೋರ್ಟ್
ಮುಂದಿನ ಲೇಖನಗ್ಯಾರಂಟಿ ಯೋಜನೆ ಟೀಕಿಸಿದ್ದ ಮೋದಿಯವರೇ ಈಗ ಗ್ಯಾರಂಟಿ ಘೋಷಣೆ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ