ಮನೆ ರಾಜಕೀಯ ಬಹುಮತ ಇರುವ ಸರ್ಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ: ಶಾಸಕ ಸುನಿಲ್ ಕುಮಾರ್

ಬಹುಮತ ಇರುವ ಸರ್ಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ: ಶಾಸಕ ಸುನಿಲ್ ಕುಮಾರ್

0

ಬೆಂಗಳೂರು: ಬಹುಮತ ಇರುವ ಸರ್ಕಾರವನ್ನ ಬಿಜೆಪಿ ಅಭದ್ರ ಮಾಡಲ್ಲ. ಆದರೆ, ಕಾಂಗ್ರೆಸ್ ನಾಯಕತ್ವದಲ್ಲಿನ ಗೊಂದಲದ ಭಾರಕ್ಕೆ ಅವರೇ ಕುಸಿದು ಬಿದ್ದರೆ ಆಮೇಲೆ ನಾವು ನೋಡುತ್ತೇವೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಭದ್ರ ಮಾಡಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.

Join Our Whatsapp Group

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ಸಿದ್ದರಾಮಯ್ಯ ವಿರುದ್ಧ ಬಹಳ ಶಾಸಕರು ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಯಾರ ಭಾರದಿಂದ ಸರ್ಕಾರ ಕುಸಿಯುತ್ತೋ ನೋಡೋಣ. ಸರ್ಕಾರ ಡಿಸಿಎಂ ಡಿಕೆ ಅವರ ಭಾರದಿಂದ ಕುಸಿಯುತ್ತೋ? ಸಿಎಂ ಭಾರದಿಂದ ಕುಸಿಯುತ್ತೋ ಬಿಜೆಪಿ ಕಾದು ನೋಡುತ್ತೆ. ಸರ್ಕಾರ ಅದರದ್ದೇ ಭಾರದಿಂದ ಕುಸಿದ್ರೆ ಸುಮ್ಮನೆ ಇರಬೇಕಾ? ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಂಡಿರಲು ಆಗುತ್ತಾ? ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಸರ್ಕಾರ ರಚನೆ ಮಾಡಲು ಪ್ರಯತ್ನಿಸುತ್ತೆ ಎನ್ನುವ ಅರ್ಥದಲ್ಲಿ ಹೇಳಿದರು.

ಇನ್ನು ಇದೇ ವೇಳೆ ಸರ್ಕಾರ ಆಡಳಿತದ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್, ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾದ್ರೂ ಅಭಿವೃದ್ಧಿ ಶೂನ್ಯ. ಯಾವ ಯೋಜನೆಗಳಿಗೆ ಎಷ್ಟು ಅನುದಾನವೆಂದು ಬಿಡುಗಡೆ ಮಾಡಲಿ. ಶಾಸಕರು 1 ವರ್ಷದಿಂದ ಒಂದೂ ಗುದ್ದಲಿ ಪೂಜೆ ಮಾಡಲು ಆಗಿಲ್ಲ. ಇಡೀ ಸಚಿವ ಸಂಪುಟವೇ ಅಸಮರ್ಥ ಸಂಪುಟ. ಸಚಿವರ ಮೇಲೆ ಹಿಡಿತ ಇಲ್ಲದ ಸಿಎಂ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ಸಚಿವರು ಅಸಮರ್ಥರು. ಬ್ರ್ಯಾಂಡ್ ಬೆಂಗಳೂರು ಕೂಡ ಈಗ ದಿಕ್ಕೆಟ್ಟ ಬೆಂಗಳೂರು ಆಗಿದೆ. ಜನಪ್ರತಿನಿಧಿಗಳಿಗೆ ಅಪಮಾನವಾಗುವಂತಹ ರೀತಿ ಆಡಳಿತ ನಡೆಯುತ್ತಿದೆ. ಇದರ ವಿರುದ್ಧ ಜನಾಂದೋಲನವನ್ನು ಬಿಜೆಪಿ ಆರಂಭ ಮಾಡುತ್ತದೆ. ಗ್ಯಾರಂಟಿ ಗುಂಗಿನಲ್ಲೇ ಇರದೇ ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಜನರು ಕೂಡ ಈ ಸರಕಾರದಿಂದ ಅನುದಾನ ಬರುವುದಿಲ್ಲ ಎಂಬಷ್ಟರ ಮಟ್ಟಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಪುಟವನ್ನು ಗಮನಿಸಿದರೆ ಇಡೀ ಸಂಪುಟವೇ ಅಸಮರ್ಥವಾಗಿದೆ. ಸಚಿವರ ಮೇಲೆ ಹಿಡಿತವಿಲ್ಲದೆ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಯೋಜನೆ ರೂಪಿಸುವುದರಲ್ಲಿ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಸರಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಅಸಮರ್ಥ ಮುಖ್ಯಮಂತ್ರಿಯ ಆಡಳಿತವನ್ನು ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಎಂದು ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.