ಮನೆ ಅಪರಾಧ ಮರಳು ಸಾಗಾಣೆಗೆ ಲಂಚ: ಮೂವರು ಪೊಲೀಸರು ಲೋಕಾಯುಕ್ತ ಬಲೆಗೆ

ಮರಳು ಸಾಗಾಣೆಗೆ ಲಂಚ: ಮೂವರು ಪೊಲೀಸರು ಲೋಕಾಯುಕ್ತ ಬಲೆಗೆ

0

ಕಲಬುರಗಿ(Kalburgi): ಮರಳು‌ ಸಾಗಣೆಗೆ ಲಂಚ ಪಡೆಯುತ್ತಿದ್ದ ಮೂವರು ಪೊಲೀಸರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಜೇವರ್ಗಿ ಠಾಣೆ ಇನ್ಸ್​ಪೆಕ್ಟರ್ ಶಿವಪ್ರಸಾದ ಮಠದ, ಜೇವರ್ಗಿ ಎಸ್​​ಪಿ ಬೀಟ್ ಕಾನ್ಸ್​ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಪಿಐ ವಾಹನ ಚಾಲಕ ಅವಣ್ಣ ಲೋಕಾಯುಕ್ತರ ಬಲೆಗೆ ಬಿದ್ದವರು.

ಶಹಾಪುರದ ಮರಳು ವ್ಯಾಪಾರಿ ಅಖಿಲ್ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.

ಮರಳು ವ್ಯಾಪಾರಿ ಅಖಿಲ್ ಅವರ ಬಳಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಶಿವರಾಯ ಅರಳಗುಂಡಗಿ, ಜೇವರ್ಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ವೇಳೆ ಶಿವರಾಯ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಲೋಕಾಯುಕ್ತ ಪೊಲೀಸರು ಬೆನ್ನಟ್ಟಿ ಅವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್​​ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ನೆಲಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಶಿವರಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲಂಚದ ಹಣದಲ್ಲಿ ಇನ್ಸ್​ಪೆಕ್ಟರ್ ಹಾಗೂ ಅವರ ವಾಹನ ಚಾಲಕನ ಪಾಲು ಇರುವುದನ್ನು ಹೇಳಿದ್ದಾನೆ. ಆಗ ಶಿವರಾಯನಿಂದಲೇ ಇನ್ಸ್​ಪೆಕ್ಟರ್​​ಗೆ ಕರೆ ಮಾಡಿಸಿದಾಗ ಹಣ ತೆಗೆದುಕೊಂಡು ಬರುವಂತೆ ಇನ್ಸ್​ಪೆಕ್ಟರ್ ಶಿವಪ್ರಸಾದ್​​ ಹೇಳಿದ್ದಾರೆ‌.‌

ಇದನ್ನೇ ದಾಖಲೆಯಾಗಿ ಇಟ್ಟುಕೊಂಡ ಲೋಕಾಯುಕ್ತ ಅಧಿಕಾರಿಗಳು ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಇನ್ಸ್​ಪೆಕ್ಟರ್ ಶಿವಪ್ರಸಾದ್​​ ಹಾಗೂ ಚಾಲಕ ಅವಣ್ಣನನ್ನು ನಂದಿಕೂರ ಬಳಿ‌ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೇವರ್ಗಿಯ ಸರ್ಕಿಟ್ ಹೌಸ್​​ನಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಹಿಂದಿನ ಲೇಖನಚಿರತೆ ದಾಳಿಗೆ ರೈತ ಬಲಿ
ಮುಂದಿನ ಲೇಖನಭಾರತ್ ಜೋಡೊದಿಂದ ಹರಡಿರುವ ತ್ಯಾಜ್ಯ: ಕೇರಳ ಹೈಕೋರ್ಟ್ ಆಕ್ರೋಶ