ಮನೆ ಅಪರಾಧ 12 ಸಾವಿರ ಕಳೆದುಕೊಂಡಿದ್ದಕ್ಕೆ ಮಗನಿಗೆ ಬೆಂಕಿ ಹಚ್ಚಿ ಕೊಂದ ಅಪ್ಪ

12 ಸಾವಿರ ಕಳೆದುಕೊಂಡಿದ್ದಕ್ಕೆ ಮಗನಿಗೆ ಬೆಂಕಿ ಹಚ್ಚಿ ಕೊಂದ ಅಪ್ಪ

0

ಬೆಂಗಳೂರು: 12 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕಾಗಿ ಹಾಡಹಗಲೇ ಮಗನಿಗೆ ಬೆಂಕಿ ಹಚ್ಚಿ ಅಪ್ಪನೇ ಕೊಂದಿರುವ ಘಟನೆ ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ. 

ಕಳೆದ ವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 

ಘಟನೆ ವಿವರ:   ಮಗನಿಗೆ ವೃದ್ಧ ತಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಕಿ ಹಚ್ಚಿ ಕೊಂದ ಅಪ್ಪನನ್ನು ಸುರೇಂದ್ರ ಎಂದು ಗುರುತಿಸಲಾಗಿದ್ದು, ಮಗನನ್ನು ಅರ್ಪಿತ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆಜಾದ್​ ನಗರದ ನಿವಾಸಿ ಸುರೇಂದ್ರ ಅವರಿಗೆ ಅರ್ಪಿತ್ ಎಂಬ ಮಗನಿದ್ದಾನೆ. ಕಳೆದ ವಾರ ಅರ್ಪಿತ್ 12 ಸಾವಿರ ರೂಪಾಯಿ ಕಳೆದುಕೊಂಡಿದ್ದರು. ಇದರಿಂದ ಕೋಪಗೊಂಡ ಸುರೇಂದ್ರ ಮನೆಯೊಳಗೆ ತಮ್ಮ ಮಗನ ಮೇಲೆ ಪೆಟ್ರೋಲ್ ಸುರಿದಿದ್ದಾರೆ. ಪೆಟ್ರೋಲ್​ ಸುರಿದಿದ್ದರಿಂದ ಅರ್ಪಿತ್​ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಅರ್ಪಿತ್​ ತನ್ನ ತಂದೆಗೆ ಬೇಡಿಕೊಂಡಿದ್ದಾರೆ. ಆದರೂ ಸುರೇಂದ್ರ ತನ್ನ ಮಗನ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಮೊದಲನೇ ಬಾರಿ ಬೆಂಕಿ ಹೊತ್ತದ ಕಾರಣ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಬಳಿಕ ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ನಗರದ ತುಂಬೆಲ್ಲಾ ಓಡಾಡಿದ್ದಾರೆ. 

ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು. ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ.

ಆರೋಪಿ ತಂದೆಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಭಾರತ-ಪಾಕ್ ಗಡಿಯಲ್ಲಿ ಪತ್ತೆಯಾದ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಬಿಎಸ್ ಎಫ್
ಮುಂದಿನ ಲೇಖನಅಲ್ಪಸಂಖ್ಯಾತರ ಮತಕ್ಕಾಗಿ ಸಿದ್ದರಾಮಯ್ಯ, ಹೆಚ್.ಡಿ.ಕೆ. ಪೈಪೋಟಿ: ಸಚಿವ ಅಶ್ವತ್ಥ್ ನಾರಾಯಣ್