ಮನೆ ರಾಜಕೀಯ ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ `ಇ-ಸಹಮತಿ’ಗೆ ಹಸಿರು ನಿಶಾನೆ

ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ `ಇ-ಸಹಮತಿ’ಗೆ ಹಸಿರು ನಿಶಾನೆ

0

ಬೆಂಗಳೂರು: ಉನ್ನತ ಶಿಕ್ಷಣ ವಲಯದಲ್ಲಿ ಪರೀಕ್ಷಾಂಗವನ್ನು ಸದೃಢಗೊಳಿಸುವ ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ `ಇ-ಸಹಮತಿ’ ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ಇದರ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಇದರಿಂದ ವಿ.ವಿ.ಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳ ಬಾಬ್ತಿಗೆಂದು ಖರ್ಚು ಮಾಡುತ್ತಿದ್ದ ಸುಮಾರು 60 ಕೋಟಿ ರೂ. ಹಣ ಉಳಿತಾಯವಾಗಲಿದೆ. ಜೊತೆಗೆ, ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಇದರಿಂದ ಕಡಿವಾಣ ಬೀಳಲಿದ್ದು, ಮಾನ್ಯತೆ ಹೊಂದಿರುವ 3,400ಕ್ಕೂ ಹೆಚ್ಚು ಕಾಲೇಜುಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದರು.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್ ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ ಪ್ರವೇಶಾತಿ ಮತ್ತು ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ಹೊತ್ತಿಗೆ ಅಳವಡಿಸಲಾಗುವುದು. ಇಂತಹ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ ಎಂದು ಅವರು ಹೇಳಿದರು.

ಸದ್ಯಕ್ಕೆ ಸರಕಾರಿ ಸ್ವಾಮ್ಯದ 24 ವಿ.ವಿ.ಗಳ ಪೈಕಿ ಎರಡು ವಿ.ವಿ.ಗಳು ತಮ್ಮದೇ ಆದ ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, 8 ವಿ.ವಿ.ಗಳಲ್ಲಿ ಯಾವುದೇ ಪರೀಕ್ಷಾ ತಂತ್ರಾಂಶಗಳಿಲ್ಲ. ಮಿಕ್ಕ ವಿ.ವಿ.ಗಳು ಇದಕ್ಕೆಲ್ಲ ಹೊರಗುತ್ತಿಗೆಯನ್ನು ನೆಚ್ಚಿಕೊಂಡಿದ್ದವು. ಈಗ ಅಭಿವೃದ್ಧಿಪಡಿಸಿರುವ ಪರೀಕ್ಷಾ ನಿರ್ವಹಣಾ ತಂತ್ರಾಂಶದ ಮೂಲಕ ಡಿಜಿಟಲ್ ಮೌಲ್ಯಮಾಪನ, ಆನ್ಲೈನ್ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ಬ್ಯಾಚ್ ನಿರ್ವಹಣೆ, ಅಂಕಪಟ್ಟಿ ಪೂರೈಕೆ ಮುಂತಾದವು ಸಾಧ್ಯವಾಗಲಿವೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ಬಹುಶಿಸ್ತೀಯ ಪಠ್ಯಕ್ರಮವನ್ನು ಇಲ್ಲಿ ಪರಿಗಣಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಮೊಟಕುಗೊಳಿಸಿದರೆ ಅಥವಾ ಮರುಪ್ರವೇಶ ಬಯಸಿದರೆ ಅದನ್ನೂ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಕಲ್ಪಿಸಲಾಗಿದ್ದು, ತಮಗೆ ಅಗತ್ಯವೆನಿಸಿದಾಗ ಪ್ರಮಾಣಪತ್ರಗಳನ್ನು ಪಡೆಯಬಹುದು ಎಂದು ಅಶ್ವತ್ಥನಾರಾಯಣ ನುಡಿದರು.

ಇದಲ್ಲದೆ, `ಇ-ಸಹಮತಿ’ ತಂತ್ರಾಂಶದ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಡೇಟಾವನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್- ಎನ್ಎಬಿಸಿ) ಸೇರಿಸಲು ಹಾಗೂ ಉದ್ಯೋಗಧಾತರ ಜತೆಗೆ ಅಂಕಪಟ್ಟಿ ಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇವೆಲ್ಲವೂ ಎನ್ಕ್ರಿಪ್ಟೆಡ್ ರೂಪದಲ್ಲಿ ಇರಲಿದ್ದು, ಪ್ರತೀ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿ `ಡಿಜಿಲಾಕರ್-ಎನ್ಎಡಿ’ಗೆ ನೇರವಾಗಿ ವರ್ಗಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಭದ್ರತೆ ಮತ್ತು ಗೌಪ್ಯತೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ವಿ.ವಿ.ಗಳು ತಮ್ಮ ಸ್ವಾಯತ್ತತೆಗೆ ಅನುಸಾರವಾಗಿ ಪರೀಕ್ಷೆಯ ನಿಯಮಗಳನ್ನು ಈ ತಂತ್ರಾಂಶದಲ್ಲಿ ರೂಪಿಸಿ, ಅಳವಡಿಸುವ ಸ್ವಾತಂತ್ರ್ಯವೂ ಇದೆ. ಇದರ ಅನುಷ್ಠಾನಕ್ಕೆ 24/7 ಕಾರ್ಯನಿರ್ವಹಿಸುವ ಸಹಾಯವಾಣಿ ವ್ಯವಸ್ಥೆಯೂ ಇರಲಿದೆ.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕುಮಾರ್ ನಾಯಕ್, ಇ-ಆಡಳಿತ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ ಮತ್ತು ಹಲವು ವಿ.ವಿ.ಗಳ ಕುಲಪತಿಗಳು ಹಾಗೂ ಕುಲಸಚಿವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಅವರು ವರ್ಚುವಲ್ ಮೂಲಕ ಹಾಜರಾಗಿದ್ದರು.

ಹಿಂದಿನ ಲೇಖನಬಿಎಂಟಿಸಿ ಬಸ್ ಢಿಕ್ಕಿ : ಬೈಕ್ ಸವಾರ ಸಾವು
ಮುಂದಿನ ಲೇಖನರಾಜ್ಯ ಸರ್ಕಾರದಲ್ಲಿ ಅಭದ್ರತೆ ಇಲ್ಲ: ವಿ.ಸೋಮಣ್ಣ