ಮನೆ ಸುದ್ದಿ ಜಾಲ ಮಾದಪ್ಪನ ಸನ್ನಿದಿಯಲ್ಲಿ ಹುಂಡಿ ಎಣಿಕೆ: ೧.೮೭ ಕೋಟಿ ರೂ. ಸಂಗ್ರಹ

ಮಾದಪ್ಪನ ಸನ್ನಿದಿಯಲ್ಲಿ ಹುಂಡಿ ಎಣಿಕೆ: ೧.೮೭ ಕೋಟಿ ರೂ. ಸಂಗ್ರಹ

0

ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರ ಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಗುರುವಾರ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ ೪೩ ದಿನದ ಅವಧಿಯಲ್ಲಿ ೧.೮೭ ಕೋಟಿ ರೂ ಸಂಗ್ರಹವಾಗಿದೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಬೆಳಗ್ಗೆ ೭ ರಲ್ಲಿ ಸಾಲೂರು ಬೃಹನ್ಮಾಠಧ್ಯಕ್ಷ ವಿದ್ವಾನ್ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಎಣಿಕೆ ಕಾರ್ಯವು ರಾತ್ರಿ ೮ ರವರೆಗೂ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಕೊರೊನಾ ಕೊಂಚ ತಗ್ಗಿದ ಪರಿಣಾಮ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ದಿಸೆಯಲ್ಲಿ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಸರ್ಕಾರಿ ರಜಾ ದಿನಗಳಂದು ಬೆಂಗಳೂರು, ಕನಕಪುರ, ಚನ್ನಪಟ್ಟಣ, ರಾಮನಗರ, ಮೈಸೂರು, ಮಂಡ್ಯ, ಚಾ.ನಗರ, ಮಳವಳ್ಳಿ ಸೇರಿದಂತೆ ರಾಜ್ಯದ ಇನ್ನಿತರೆ ಕಡೆಗಳಿಂದ ಸಾವಿರಾರು ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ಇಷ್ಟಾರ್ಥವಾಗಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು.
ಈ ದಿಸೆಯಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ೪೩ ದಿನದ ಅವಧಿಯಲ್ಲಿ ಈ ಬಾರಿ ೧,೮೭,೧೪,೩೫೮ ರೂ ನಗದು, ೫೦ ಗ್ರಾಂ ಚಿನ್ನ ಹಾಗೂ ೨ ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ೩೩ ದಿನದ ಅವಧಿಯಲ್ಲಿ ೨,೨೭,೬೬,೮೩೪ ರೂ ನಗದು, ೫೭ ಗ್ರಾಂ ಚಿನ್ನ ಹಾಗೂ ೩,೮೦೦ ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.
ಎಣಿಕೆ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ಹಣಕಾಸು ಸಲಹೆಗಾರ ನಾಗಯ್ಯ, ಎಸ್‌ಬಿಐನ ನೌಕರರು, ಪ್ರಾಧಿಕಾರದ ನೌಕರರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನಭೂಮಾಪನ ಶುಲ್ಕ ಇಳಿಸಿದ ಸರ್ಕಾರ
ಮುಂದಿನ ಲೇಖನಕನಕಪುರದ ಬಂಡೆಗಳನ್ನು ಲೂಟಿ ಮಾಡುವ ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ: ಎಂ.ಪಿ ರೇಣುಕಾಚಾರ್ಯ