ಮನೆ ರಾಜ್ಯ ಎಸ್.ಮನೋಹರ್ ಬಂಧಿಸದಿದ್ದರೆ ಗೃಹ ಸಚಿವರ ಕಚೇರಿ ಎದುರು ಧರಣಿ ಎಚ್ಚರಿಕೆ ನೀಡಿದ ಜೆಡಿಎಸ್

ಎಸ್.ಮನೋಹರ್ ಬಂಧಿಸದಿದ್ದರೆ ಗೃಹ ಸಚಿವರ ಕಚೇರಿ ಎದುರು ಧರಣಿ ಎಚ್ಚರಿಕೆ ನೀಡಿದ ಜೆಡಿಎಸ್

0

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳ ಬಂಧನಕೆ ಮೀನಾಮೇಷ ಎಣಿಸುತ್ತಿದೆ ಪೋಲಿಸರ ವಿರುದ್ಧ, ಕಿಡಿಕಾರಿರುವ ಜೆಡಿಎಸ್; ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದರೆ ವಿಧಾನಸೌಧದಲ್ಲಿರುವ ಗೃಹ ಸಚಿವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಪಕ್ಷದ ರಾಜ್ಯದ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ಮುಖಂಡ ಕೆ.ಮಂಜು ಅವರು, ತಪ್ಪಿತಸ್ಥರ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ; ‘ನಮ್ಮ ಪಕ್ಷದ ನಾಯಕರ ವಿರುದ್ಧ ಜೆಡಿಎಸ್ ಪಕ್ಷದ ಕಚೇರಿಯ ಆವರಣದಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದರು. ಯಾರು ಹೀಗೆ ಮಾಡಿದ್ದಾರೆ ಎಂದು ನಾವು ಕೂಡ ಪರಿಶೀಲನೆ ನಡೆಸಿ ಪೋಲಿಸ್ ಕಮಿಷನರ್‌ಗೆ ದೂರು ನೀಡಿದ್ದೆವು. ಕಮಿಷನರ್ ಸೂಚನೆಯಂತೆ ಶ್ರೀರಾಂಪುರ ಸ್ಟೇಷನ್‌‌ನಲ್ಲಿ ಕೂಡ ದೂರು ದಾಖಲಿಸಿದ್ದೇವೆ. ನಮ್ಮ ನಾಯಕರ ವಿರುದ್ಧ  ಪೋಸ್ಟರ್ ಅಂಟಿಸಿರುವ ವಿಚಾರ ಮತ್ತು ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಆಧಾರವಾಗಿ ದೂರು ದಾಖಲಿಸಿದ್ದೇವೆ. ಆದರೆ ಇಲ್ಲಿಯವರೆಗೂ ಪೋಲಿಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂಡಿಯನ್ ಪಿನಲ್ ಕೋಡ್‌‌, ಐಟಿ ಆಕ್ಟ್‌ನಡಿ ಕ್ರಮ ಜರುಗಿಸಬೇಕಾಗಿತ್ತು. ಅದನ್ನು ಪೊಲೀಸರು ಮಾಡಿಲ್ಲ ಎಂದರು.

ರಾಜಕೀಯದಲ್ಲಿ ಪಕ್ಷದ ಹಿರಿಯ ನಾಯಕರ ವಿರುದ್ಧ ವ್ಯಕ್ತಿನಿಂದನೆ ಮಾಡಿದಾಗ ಅವರ ಹಿಂಬಾಲಕರು, ಅಭಿಮಾನಿಗಳು, ಕಾರ್ಯಕರ್ತರಿಗೆ ನೋವು ಉಂಟಾಗುತ್ತದೆ. ನಮ್ಮ ಕಾರ್ಯಕರ್ತರನ್ನು ಕೂಡ ನಾವು ಸಮಾಧಾನಪಡಿಸಿದ್ದೇವೆ. ಆದರೆ ಇಲ್ಲಿಯವರೆಗೂ ಪೋಲಿಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಎಸ್.ಮನೋಹರ್ ಶುಕ್ರವಾರ ಬೆಂಗಳೂರು ನಗರ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್‌ಗೌಡರವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಅಲ್ಲದೇ, ವೈಯಕ್ತಿಕ ತೇಜೋವಧೆ, ವ್ಯಕ್ತಿ ನಿಂದನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಪರಸ್ಪರ ಪ್ರತಿಭಟನೆಗಳು ನಡೆಯುತ್ತವೆ, ಪರಿಸ್ಥಿತಿ ಮಿತಿ ಮೀರಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಗೃಹ ಇಲಾಖೆ, ಡಿಜಿಪಿಯವರು ಇದನ್ನು ಸೂಕ್ಷ್ಮವಾಗಿ ಗಮನಹರಿಸಿ ಈ ರೀತಿಯ ಘಟನೆಗಳು ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಇದು ನಿಲ್ಲದಿದ್ದರೆ ನಾವು ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು‌.

ಎಸ್.ಮನೋಹರ್ ಒಬ್ಬ ಕೊಲೆಗಡುಕ:

ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಮೇಶ್‌ ಗೌಡ ಮಾತನಾಡಿ, ‘ಚಿಕ್ಕವಯಸ್ಸಿನಲ್ಲೇ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ ಎಂದು ನನ್ನ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅವರುಗಳಂತೆ ಜಾಮೀನು ತೆಗೆದುಕೊಂಡು ಓಡಾಡುತ್ತಿಲ್ಲ. ಎಸ್ ಮನೋಹರ್ ವಿರುದ್ಧ ನಾನು ಕಾಂಗ್ರೆಸ್ ವರಿಷ್ಠ ನಾಯಕರಿಗೂ ಕೂಡ ಪತ್ರ ಬರೆಯುತ್ತೇನೆ ಎಂದರು.

ಕುಮಾರಸ್ವಾಮಿಯವರು ಈ ಸರಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ವಿರುದ್ಧ ಪೋಸ್ಟರ್ ಅಂಟಿಸಿದ್ದಾರೆ. ಮನೋಹರ್ ಪೋಸ್ಟರ್ ಅಂಟಿಸಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಪುರಾವೆಗಳಿದೆ. ಮನೋಹರ್ ರೀತಿಯಲ್ಲಿ ನೀಚಗೆಟ್ಟ,ಕೀಳುಮಟ್ಟದ ರಾಜಕೀಯ ನಾವು ಮಾಡಲ್ಲ. ಮನೋಹರ್ ಒಬ್ಬ ಕೊಲೆಗಡುಕ. ನಾನು ಅವ್ಯವಹಾರ ಮಾಡಿರುವುದಕ್ಕೆ ಒಂದೇ ಒಂದು ಸಾಕ್ಷಿ ನೀಡಿದರೆ ರಾಜಕೀಯ ತೊರೆಯುತ್ತೇನೆ ಎಂದು ಅವರು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಅವರು ಎಸ್.ಮನೋಹರ್ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಪೋಸ್ಟರ್ ಅಂಟಿಸಿದ್ದು ನಾನೇ ಎಂದು ರಾಜರೋಷವಾಗಿ ಹೇಳಿಕೊಂಡಿರುವ ಮನೋಹರ್‌ ಅವರನ್ನು ಪೋಲಿಸರು ಬಂಧಿಸಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದ‌ ಶಾಸಕರು, ಮುಖಂಡರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಪೋಸ್ಟರ್ ಅಂಟಿಸುವ ಕೆಲಸ ನಮಗೂ ಬರುತ್ತದೆ. ಮೌಲ್ಯಾಧಾರಿತ ರಾಜಕಾರಣ ಮಾಡಬೇಕು ಎಂದು ನಮ್ಮ ನಾಯಕರು ಸೂಚನೆ ನೀಡಿದ್ದಕ್ಕೆ ನಮ್ಮ ಪಕ್ಷದ ಯುವ ಕಾರ್ಯಕರ್ತರು ಸುಮ್ಮನಿದ್ದಾರೆ ಎಂದು ಆಕ್ರೋಶ ಹೊರಹಾಕಿದರು‌.

ಕೂಡಲೇ ಕಾಂಗ್ರೆಸ್ ಕಾರ್ಯಕರ್ತ ಎಸ್.ಮನೋಹರ್ ಬಂಧನವಾಗದಿದ್ದರೆ ವಿಧಾನಸೌಧದ ಗೃಹ ಸಚಿವರ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಅವರು ಎಚ್ಚರಿಕೆ ನೀಡಿದರು‌.

ಜೆಡಿಎಸ್ ಗೆ ಒಂದು ಕಾನೂನು, ಕಾಂಗ್ರೆಸ್ ಗೆ ಒಂದು ಕಾನೂನು ಇರುತ್ತದೆಯೇ?

ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎಪಿ.ರಂಗನಾಥ್ ಮಾತನಾಡಿ, ಸರಕಾರ, ಪೋಲಿಸ್ ಕಮಿಷನರ್ ಮತ್ತು ಗೃಹ ಸಚಿವರು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾನೂನು ಮಾಡಬಾರದು. ಎಲ್ಲಾ ಪಕ್ಷಕ್ಕೂ ಒಂದೇ ನಿಯಮ. ಜೆಡಿಎಸ್ ಪಕ್ಷದ ಕಾರ್ಯಕರ್ತ ಬೆಟ್ಟಪ್ಪ ಎಂಬಾತ ಫೇಸ್‌‌ಬುಕ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದಕ್ಕೆ ಕೆ‌.ಜಿ.ಎಫ್ ಪೋಲಿಸ್ ಸ್ಟೇಷನ್‌ನಲ್ಲಿ ಜಾಮೀನುರಹಿತ ಕೇಸ್ ದಾಖಲಿಸುತ್ತಾರೆ. ಆದರೆ, ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದವರ ವಿರುದ್ಧ ಪೋಲಿಸ್ ಕಮಿಷನರ್‌ ಗೆ ದೂರು ನೀಡಿದರೂ ಕೂಡ ಜಾಮೀನುಸಹಿತ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಪೋಸ್ಟರ್ ಅಂಟಿಸಿದವರು ರಾಜರೋಷವಾಗಿ ಓಡಾಡಿಕೊಂಡಿದ್ದಾರೆ.

ನಮಗೊಂದು ಅವರಿಗೊಂದು ಕಾನೂನು ಸರಿಯಲ್ಲ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ.ಕೂಡಲೇ ಜಾಮೀನು ರಹಿತ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದರೂ ಕೂಡ ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ, ಮನೋಹರ್ ನೆನ್ನೆ ನಾನೇ ಪೋಸ್ಟರ್ ಅಂಟಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಮನೋಹರ್ ವಿರುದ್ಧ ಯಾವ ಕ್ರಮ ಜರುಗಿಸಿದ್ದೀರಾ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ರಂಗನಾಥ್ ಪ್ರಶ್ನಿಸಿದರು.

ಮನೋಹರ್‌ ರಿಗೆ ಕಾಂಗ್ರೆಸ್ ಪಕ್ಷ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಹತಾಷೆಗೆ ಒಳಗಾಗಿ ಈ ರೀತಿ ಮಾಡಿದ್ದಾರೆ.ಅಥವಾ ಈ ರೀತಿ ಮಾಡಿದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನೀರಿಕ್ಷೆಯಲ್ಲಿ ಮಾಡಿರಬಹುದು.ಡಿ.ಕೆ.ಶಿವಕುಮಾರ್ ಕೂಡ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪ್ರವೀಣ್, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.

ಹಿಂದಿನ ಲೇಖನಭ್ರಷ್ಟಾಚಾರ ಪ್ರಕರಣದಲ್ಲಿ ಡಿಕೆಶಿ ತಪ್ಪತಸ್ಥ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಸರ್ಕಾರ: ಸಿ.ಟಿ. ರವಿ
ಮುಂದಿನ ಲೇಖನವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು: ಡಾ.ಹೆಚ್.ಸಿ.ಮಹದೇವಪ್ಪ