ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಕ್ವಾಲಿಫೈಯರ್ 1ಕ್ಕೂ ಮುನ್ನ ಮಹತ್ವದ ಗೊಂದಲ ಎದುರಾಗಿದೆ. ತಂಡದ ನಿಯಮಿತ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ ಆಗಿಲ್ಲ ಎಂಬ ವರದಿಗಳ ನಡುವೆ, ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಗಾಯದ ಸಮಸ್ಯೆಯಿಂದ ತವರು ಇಂಗ್ಲೆಂಡ್ಗೆ ತೆರಳಿದ್ದ ಫಿಲ್ ಸಾಲ್ಟ್ ಇದೀಗ ಮತ್ತೆ ಭಾರತಕ್ಕೆ ಬಂದಿದ್ದಾರೆ. ಟೂರ್ನಿಯ ಮೊದಲ ಆರು ಪಂದ್ಯಗಳಲ್ಲಿ ಆಡಿದ್ದ ಸಾಲ್ಟ್ ನಂತರದ ಲೀಗ್ ಹಂತದ ಪಂದ್ಯಗಳಿಂದ ಹೊರಗುಳಿದಿದ್ದರು. ಅವರ ಬದಲಿಗೆ ಅವಕಾಶ ಪಡೆದಿದ್ದ ಜೇಕಬ್ ಬೆಥೆಲ್ ಕೂಡ ಗಾಯದ ಕಾರಣದಿಂದ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
GT ವಿರುದ್ಧದ ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಮಾತನಾಡಿದ RCB ನಾಯಕ ರಜತ್ ಪಾಟೀದಾರ್, ಫಿಲ್ ಸಾಲ್ಟ್ ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಅಂತಿಮ ಪ್ಲೇಯಿಂಗ್ XI ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.‘ಫಿಲ್ ಸಾಲ್ಟ್ ಫಿಟ್ ಆಗಿದ್ದಾರೆ. ಆದರೆ ಅವರು ಇನ್ನೂ ವೀಕ್ಷಣೆಯಲ್ಲಿದ್ದಾರೆ. ನಾವು ಇನ್ನೂ ಅಂತಿಮ ತಂಡವನ್ನು ಫೈನಲ್ ಮಾಡಿಲ್ಲ. ಪಿಚ್ ಪರಿಸ್ಥಿತಿ ಗಮನಿಸಿದ ಬಳಿಕ ಪ್ಲೇಯಿಂಗ್ XI ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಪಾಟೀದಾರ್ ಧರ್ಮಶಾಲಾದಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.
ಜೇಕಬ್ ಬೆಥೆಲ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಮರಳಿದ್ದ ವೆಂಕಟೇಶ್ ಅಯ್ಯರ್, ಮೇ 22ರಂದು ನಡೆದ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಓಪನಿಂಗ್ ಮಾಡಿ ಕೇವಲ 19 ಎಸೆತಗಳಲ್ಲಿ 44 ರನ್ ಸಿಡಿಸಿದ್ದರು. ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ವೆಂಕಟೇಶ್ ಅವರನ್ನು RCB ಫ್ಲೋಟರ್ ಪಾತ್ರದಲ್ಲಿ ಬಳಸಿಕೊಂಡಿದ್ದು, ತಾತ್ಕಾಲಿಕ ಆರಂಭಿಕ ಆಟಗಾರನಾಗಿ ಅವರು ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ.
ಇದೀಗ ಫಿಲ್ ಸಾಲ್ಟ್ ಮತ್ತು ವೆಂಕಟೇಶ್ ಅಯ್ಯರ್ ನಡುವೆ ಯಾರಿಗೆ ಅವಕಾಶ ನೀಡಬೇಕು ಎಂಬುದು RCB ತಂಡದ ದೊಡ್ಡ ತಲೆನೋವಾಗಿದೆ.ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಸೈಮನ್ ಡೌಲ್ ಅಭಿಪ್ರಾಯಪಟ್ಟಿರುವಂತೆ, RCB ತಂಡವು ಫಾರ್ಮ್ನಲ್ಲಿರುವ ವೆಂಕಟೇಶ್ ಅಯ್ಯರ್ ಜೊತೆ ಮುಂದುವರಿಯಬೇಕು. ದೀರ್ಘ ವಿರಾಮದ ಬಳಿಕ ಮರಳುತ್ತಿರುವ ಫಿಲ್ ಸಾಲ್ಟ್ ಮೇಲೆ ತಕ್ಷಣ ಭರವಸೆ ಇಡುವುದು ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.ನಾಲ್ಕು ಇನಿಂಗ್ಸ್ ಗಳಲ್ಲಿ 177.52 ಸ್ಟ್ರೈಕ್ ರೇಟ್ ನಲ್ಲಿ 158 ರನ್ ಗಳಿಸಿರುವ ವೆಂಕಟೇಶ್ ಅಯ್ಯರ್ ಉತ್ತಮ ಲಯದಲ್ಲಿದ್ದಾರೆ ಎಂದು ಡೌಲ್ ಹೇಳಿದ್ದಾರೆ.
‘ನಾನು ವಿರಾಟ್ ಕೊಹ್ಲಿ ಜೊತೆ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕ ಆಟಗಾರನಾಗಿ ಮುಂದುವರಿಸುತ್ತೇನೆ. ಫಿಲ್ ಸಾಲ್ಟ್ ಕಳೆದ ಕೆಲವು ವಾರಗಳಿಂದ ತಂಡದಿಂದ ದೂರ ಇದ್ದಾರೆ. ವಿಶೇಷವಾಗಿ ಗಾಯದ ಬಳಿಕ ಮರಳುವ ಆಟಗಾರರಿಗೆ ತಕ್ಷಣ ಲಯ ಸಿಗುವುದು ಸುಲಭವಲ್ಲ. ಅವರು ಪ್ರತಿಭಾವಂತ ಆಟಗಾರರಾದರೂ, ಪ್ಲೇಆಫ್ ಹಂತದಲ್ಲಿ ಪ್ರಯೋಗ ಮಾಡುವುದು ಸೂಕ್ತವಲ್ಲ’ ಎಂದು ಡೌಲ್ ಜಿಯೋಸ್ಟಾರ್ ನಲ್ಲಿ ಹೇಳಿದ್ದಾರೆ.
‘ವೆಂಕಟೇಶ್ ಅಯ್ಯರ್ ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. SRH ವಿರುದ್ಧ ಚೆನ್ನಾಗಿ ಆಡಿದ್ದಾರೆ. ಪಂಜಾಬ್ ವಿರುದ್ಧವೂ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಅವರ ಜೊತೆಯಾಟ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕ್ರಿಕೆಟ್ ನಲ್ಲಿ ಹೆಸರುಗಿಂತ ಫಾರ್ಮ್ ಹೆಚ್ಚು ಮುಖ್ಯ. ವಿಶೇಷವಾಗಿ ನಾಕೌಟ್ ಪಂದ್ಯಗಳಲ್ಲಿ ಫಾರ್ಮ್ನಲ್ಲಿರುವ ಆಟಗಾರನನ್ನೇ ಆಯ್ಕೆ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.


















