ಮನೆ ಅಪರಾಧ ಜಹಾಂಗೀರ್ ಪುರಿ ಹಿಂಸಾಚಾರ: ಪೊಲೀಸರಿಂದ ಶಾಂತಿ ಸಭೆ

ಜಹಾಂಗೀರ್ ಪುರಿ ಹಿಂಸಾಚಾರ: ಪೊಲೀಸರಿಂದ ಶಾಂತಿ ಸಭೆ

0

ನವದೆಹಲಿ: ಇಲ್ಲಿನ ಜಹಾಂಗಿರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಮುಖ್ಯ ಸಂಚುಕೋರ ಸೇರಿದಂತೆ 20 ಜನರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿ, ಶಾಂತಿ ಸಭೆಗಳನ್ನು ಭಾನುವಾರ ನಡೆಸಿದರು.

ಘಟನೆ ಸಂಬಂಧ ಇಬ್ಬರು ಬಾಲಕರನ್ನೂ ವಶಕ್ಕೆ ಪಡೆಯಲಾಗಿದೆ. ಜಹಾಂಗಿರ್‌ಪುರದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದೆ. ಶನಿವಾರ ಸಂಜೆ ಹಿಂಸಾಚಾರಕ್ಕೆ ಕಾರಣವಾಗಿದ್ದ ಸ್ಥಳದಲ್ಲಿ ಜನರ ಚಲನವಲನಗಳ ಮೇಲೆ ನಿಗಾ ಇರಿಸಲು ಪೊಲೀಸರು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ಗುರುತು ಪತ್ತೆಹಚ್ಚಲು ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಮೊಬೈಲ್ ಫೋನ್‌ಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಚಹರೆ ಪತ್ತೆ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ.

ವಾಯವ್ಯ ದೆಹಲಿಯ ಜೊತೆಗೆ ಆಗ್ನೇಯ ದೆಹಲಿಯಲ್ಲೂ ಪೊಲೀಸರು ನಿಗಾ ವಹಿಸಿದ್ದಾರೆ. ಗುಂಡು ಹಾರಿಸಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಗಾಯಗೊಳ್ಳುವಂತೆ ಮಾಡಿದ 21 ವರ್ಷದ ಮೊಹಮ್ಮದ್ ಅಸ್ಲಾಂ ಎಂಬಾತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈತನ ವಿರುದ್ಧ ಈ ಹಿಂದೆ ಅಪರಾಧ ಪ್ರಕರಣ ದಾಖಲಾಗಿದ್ದವು. ಜಹಾಂಗಿರ್‌ಪುರಿ ಠಾಣೆಯಲ್ಲಿ ಅಸ್ಲಾಂ ವಿರುದ್ಧ 2020ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿ ವಿರುದ್ಧ 307, 12ಬಿ ಹಾಗೂ 147ನೇ ಕಲಂ ಅಡಿಯಲ್ಲಿ ಶನಿವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾಯವ್ಯ ದೆಹಲಿ ಪೊಲೀಸ್‌ ಆಯುಕ್ತೆ ಉಷಾ ರಂಗಾನಿ ಹೇಳಿದ್ದಾರೆ.

ಶನಿವಾರ ಸಂಜೆ ಜಹಾಂಗಿರ್‌ಪುರಿಯ ಸಿ–ಬ್ಲಾಕ್ ಸಮೀಪಕ್ಕೆ ಹನುಮಾನ್ ಜಯಂತಿ ಮೆರವಣಿಗೆ ತಲುಪಿದಾಗ, ಗುಂಪಿನಲ್ಲಿದ್ದ ಜನರ ಜೊತೆ ಹೊರಗಿನಿಂದ ಬಂದ ನಾಲ್ಕೈದು ಜನರು ವಾಗ್ದಾದ ನಡೆಸಲು ಮುಂದಾದರು. ನಂತರ ಅದು ಕಲ್ಲುತೂರಾಟಕ್ಕೆ ತಿರುಗಿತು.

ಘಟನೆಯಲ್ಲಿ ಎಂಟು ಪೊಲೀಸರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿ ಗಾಯಗೊಂಡರು. ಹಲವು ವಾಹನಗಳು ಜಖಂಗೊಂಡವು. ಘಟನಾ ನಂತರ ಸ್ಥಳದಲ್ಲಿ ಕ್ಷಿಪ್ರಕಾರ್ಯಪಡೆಯ ಸಿಬ್ಬಂದಿ ಸೇರಿದಂತೆ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿಸಮಿತಿ ಸಭೆಗಳನ್ನು ನಡೆಸಿದ ಪೊಲೀಸರು, ಸ್ಥಳದಲ್ಲಿ ಶಾಂತಿ, ಸೌಹಾರ್ದ ಕಾಪಾಡುವಂತೆ ಮನವಿ ಮಾಡಿದರು.

ವೃತ್ತಿಪರ ಹಾಗೂ ಮುಕ್ತ ತನಿಖೆಯ ಭರವಸೆ ನೀಡಿದರು. ಬಾಂಗ್ಲಾದೇಶದ ಅಕ್ರಮ ವಲಸಿಗರಿಂದ ಹಿಂಸಾಚಾರ ನಡೆದಿದೆ ಎಂದು ಆದರ್ಶ ನಗರ ಬಿಜೆಪಿ ಕೌನ್ಸಿಲರ್ ಗರಿಮಾ ಗುಪ್ತಾ ಅವರು ಆರೋಪಿಸಿದರು. ಗಲಭೆ ಸೃಷ್ಟಿಸಲು ಯತ್ನಿಸಿದವರು ಹೊರಗಿನವರು ಎಂದು ಅಂಗಡಿ ಮಾಲೀಕ ಮುಕೇಶ್ ಎಂಬುವರು ಅಭಿಪ್ರಾಯಪಟ್ಟರು.

ಹಿಂದಿನ ಲೇಖನಪಾರ್ಟಿಯಲ್ಲಿ ಗುಂಡಿನ ದಾಳಿ: ಇಬ್ಬರು ಅಪ್ರಾಪ್ತರ ಸಾವು
ಮುಂದಿನ ಲೇಖನಅಪ್ರಾಪ್ತೆ ಮೇಲೆ ಅತ್ಯಾಚಾರ, ಗರ್ಭಪಾತ: ಆರೋಪಿ ವೈದ್ಯನಿಗೆ ಪರಿಹಾರ ನಿರಾಕರಿಸಿದ ಬಾಂಬೆ ಹೈಕೋರ್ಟ್