ಬೆಂಗಳೂರು “ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಅಧಿಕಾರ” ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಬಿಟ್ಟು ಕೊಡುವವರೆಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಹಿಂದೆ ಭವಿಷ್ಯನುಡಿದಿದ್ದರು. ಈಗ ಕೋಡಿಶ್ರೀಗಳ ಭವಿಷ್ಯ ಅಕ್ಷರಶಃ ನಿಜವಾಗಿದೆ. ಹೈಕಮಾಂಡ್ ಸೂಚಿಸಿದಂತೆ ಸಿದ್ದರಾಮಯ್ಯ, ಯಾವುದೇ ತಂಟೆ ತಗಾದೇ ತೆಗೆಯದೇ ನೇರವಾಗಿ ಬಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರೇ ಸಿಎಂ ಸ್ಥಾನವನ್ನ ನಯವಾಗಿ ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಕೋಡಿ ಶ್ರೀ ನುಡಿದಿದ್ದ ರಾಜಕೀಯ ಭವಿಷ್ಯ ನಿಜವಾಗಿದೆ. ಅಂದು ಮುಖ್ಯಮಂತ್ರಿಗಳ ಅಧಿಕಾರಾವಧಿ ಕುರಿತು ಮಾತನಾಡಿದ್ದ ಶ್ರೀಗಳು, ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಅಧಿಕಾರದಿಂದ ಮುಕ್ತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. “ವಿರೋಧ ಪಕ್ಷಗಳಾಗಲಿ ಅಥವಾ ಸ್ವತಃ ಹೈಕಮಾಂಡ್ ಆಗಲಿ ಅವರನ್ನು ಒತ್ತಾಯಪೂರ್ವಕವಾಗಿ ಕುರ್ಚಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ತಾವಾಗಿಯೇ ಮನಸ್ಸು ಮಾಡಿ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಧ್ಯ” ಎಂದು ಹೇಳಿದ್ದರು ಎನ್ನಲಾಗಿದೆ.
ಹಾಗೆ ಅಂದರೆ ಈ ಬದಲಾವಣೆಯ ಹಿಂದೆ ಸಿದ್ದರಾಮಯ್ಯ ಅವರ ಸ್ವಯಂ ನಿರ್ಧಾರವೇ ಪ್ರಮುಖವಾಗಿರುತ್ತದೆ ಎಂದು ಶ್ರೀಗಳು ಅಂದೇ ಸೂಚಿಸಿದ್ದರು. ಕೋಡಿಶ್ರೀಗಳು ಅಂದು ನುಡಿದಿದ್ದ ಭವಿಷ್ಯದಂತೆಯೇ ಇಂದು ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ, ಹೈಕಮಾಂಡ್ ಮೇಲಿನ ನಿಷ್ಠೆಯಿಂದಾಗಿ ತಾವಾಗಿಯೇ ಸ್ವಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ಗೌರವಯುತ ನಿರ್ಗಮನದೊಂದಿಗೆ ಕೋಡಿಮಠದ ಶ್ರೀಗಳ ಮಾತುಗಳು ಸತ್ಯವಾಗಿದೆ. ಕಳೆದ 2023ರಲ್ಲಿ ಸರ್ಕಾರ ರಚನೆ ವೇಳೆ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಬಗ್ಗೆ ಆಗಿತ್ತೆನ್ನಲಾದ ಅಲಿಖಿತ ಒಪ್ಪಂದ ಹಲವು ಸಮಯದ ಗೊಂದಲಗಳ ಬಳಿಕ ಅಂತಿಮವಾಗಿ ಸುಖಾಂತ್ಯ ಕಂಡಿದೆ. ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ ಜೊತೆಗೆ ಕರೆದುಕೊಂಡು ಲೋಕಭವನಕ್ಕೆ ತೆರಳಿ ಪಕ್ಕದಲ್ಲೇ ಡಿಕೆ ಶಿವಕುಮಾರ್ ಅವರನ್ನು ಇರಿಸಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ. ಮೊದಲಿನಿಂದಲೂ ನಾಯಕತ್ವ ಬದಲಾವಣೆ ಮುಸುಕಿನ ಗುದ್ದಾಟ ಶುರುವಾದಗೆಲ್ಲ ಸಿದ್ದರಾಮಯ್ಯನವರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆಂದು ಹೇಳಿಕೊಂಡೇ ಬಂದಿದ್ದರು.
ಆದ್ರೆ, ಅಂತಿಮವಾಗಿ ರಾಹುಲ್ ಗಾಂಧಿ, ರಾಜೀನಾಮೆ ನೀಡಿ ಎಂದು ಹೇಳುತ್ತಾರೆಂಬ ನಂಬಿಕೆ ಸಿದ್ದರಾಮಯ್ಯನವರಿಗೆ ಇರಲಿಲ್ಲ. ಇವರು ಅಷ್ಟು ಸುಲಭಕ್ಕೆ ಬಿಟ್ಟು ಕೊಡುತ್ತಾರೆ ಎಂಬ ನಂಬಿಕೆಯೂ ಹೈಕಮಾಂಡ್ ನಾಯಕರಿಗಿರಲಿಲ್ಲ. ಅಲ್ಲದೇ ಈ ನಾಯಕತ್ವ ಬದಲಾವಣೆ ಗೊಂದಲ ಇಷ್ಟು ಸುಲಭಕ್ಕೆ ಈ ಪ್ರಕ್ರಿಯೆ ಮುಗಿಯುತ್ತದೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲ. ಹೀಗೆ ಸಿದ್ದರಾಮಯ್ಯನವರು ಶಿರಸಾವಹಿಸಿ ಪಾಲಿಸಿರುವುದರಿಂದಲೇ ಇದೀಗ ಡಿಕೆ ಶಿವಕುಮಾರ್ಗೆ ಸಿಎಂ ಆಗುವ ಯೋಗ ಕೂಡಿಬಂದಿದೆ. ಒಂದು ವೇಳೆ ಸಿದ್ದರಾಮಯ್ಯನವರು ತಗಾದೆ ತೆಗೆದು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಿರಲಿಲ್ಲ. ಒಂದು ವೇಳೆ ಸಿದ್ದರಾಮಯ್ಯನವರಿಂದ ಬಲವಂತವಾಗಿ ಸಿಎಂ ಕುರ್ಚಿ ಕಿತ್ತುಕೊಂಡಿದ್ದರೆ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನವಾಗಿತ್ತು ಎನ್ನಲಾಗುತ್ತಿದೆ.

















