ಮೈಸೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಸರಗಳ್ಳನನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 40 ಗ್ರಾಂ ತೂಕದ ಎರಡು ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಆಕ್ಟಿವಾ ವಶಪಡಿಸಿಕೊಂಡಿದ್ದಾರೆ.ಚಾಮರಾಜನಗರ ನಿವಾಸಿ ವಿನಯ್ ಕುಮಾರ್ (27) ಬಂಧಿತ ಆರೋಪಿ.
ಅ.18 ರಂದು ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುವನ ಬಡಾವಣೆ ಬಳಿ ಮಹಿಳೆ ಕಮಲ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ಹೋಂಡಾ ಆಕ್ಟಿವಾದಲ್ಲಿ ಬಂದ ವಿನಯ್ ಕುಮಾರ್ 30 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ.
ಈ ಕುರಿತಂತೆ ಕಮಲ ರವರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನ ಪರಿಶೀಲನೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿಯ ಬಂಧನಕ್ಕೆ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೃಷ್ಟರಾಜ ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಅರುಣ್ ಎಲ್ ಹಾಗೂ ಪಿಎಸ್ಸೈ ಗೋಪಾಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್, ಮಂಜುನಾಥ್, ಮಹೇಶ್ವರ್, ಮಂಜು, ನಾಗೇಶ್, ಯಶವಂತ್, ಹಜರತ್ ಹಾಗೂ ಸುರೇಶ್ ರವರನ್ನೊಳಗೊಂಡ ತಂಡ ರಚಿಸಿದ್ದು, ಘಟನೆ ನಡೆದ ಎರಡು ದಿನಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ 70 ಸಾವಿರ ಮೌಲ್ಯದ ಹೋಂಡಾ ಆಕ್ಟಿವಾ ಹಾಗೂ 2.80 ಲಕ್ಷ ಮೌಲ್ಯದ ಎರಡು ಚಿನ್ನದ ಸರಗಳನ್ನ ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯವನ್ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರು ಪ್ರಶಂಸಿಸಿರುತ್ತಾರೆ.