ಬೆಂಗಳೂರು: ಲಡ್ಡು ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್ ತೆರೆಯುವಂತೆ ಶ್ರೀರಾಮ ಸೇನೆ ಬೆಂಗಳೂರಿನ ಟಿಟಿಡಿ ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿದೆ.
ದೇವಸ್ಥಾನದ ವ್ಯವಸ್ಥಾಪಕಿ ಜಯಂತಿ ಬಾಸ್ಕರನ್ ಮನವಿ ಪತ್ರ ಸ್ವೀಕರಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಶ್ರೀರಾಮ ಸೇನೆಯ ಬೆಂಗಳೂರು ಅಧ್ಯಕ್ಷ ಭಾಸ್ಕರ್ ಮಾತನಾಡಿ, ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇದೆ ಅಂತ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಹೇಳಿದರು.
ಗುಜರಾತ್ನ ಲ್ಯಾಬ್ನಲ್ಲೂ ಪ್ರಾಣಿಗಳ ಕೊಬ್ಬು ಇರೋದು ಧೃಢವಾಗಿದೆ. ಇದರಿಂದ, ವೆಂಕಟೇಶ್ವರ ಗುಡಿಯಲ್ಲಿ ಭಕ್ತರಿಗೆ ಭಾವನೆ ಧಕ್ಕೆ ಉಂಟಾಗಿದೆ. ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕ್ರೈಸ್ಥ ಧರ್ಮಕ್ಕೆ ಮತಾಂತರವಾಗಿರುವ ವಂಶಸ್ಥರು. ಮೀನಿನ ಎಣ್ಣೆಯನ್ನು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದಾರೆ. ಈ ಬಗ್ಗೆ ದೊಡ್ಡ ತನಿಖೆಯಾಗಬೇಕು ಅಂತ ಬೆಂಗಳೂರು ಟಿಟಿಡಿ ದೇವಸ್ಥಾನದ ವ್ಯವಸ್ಥಾಪಕರಿಗೆ ಮನವಿ ನೀಡಿದ್ದೇವೆ ಎಂದರು.
ಟಿಟಿಡಿ ಶಾಖೆಗಳು ಯಾವುದೇ ರಾಜ್ಯದಲ್ಲಿದ್ದರೂ, ಅಲ್ಲಿ ಪರೀಕ್ಷಾ ಲ್ಯಾಬ್ ತೆರೆಯಬೇಕು. ಭಕ್ತರಿಗೆ ಅನುಮಾನವಿದ್ದರೆ ಕೂಡಲೇ ಪರೀಕ್ಷೆ ಮಾಡುವಂತಾಗಬೇಕು. ಈ ಬಗ್ಗೆಯೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಪ್ರತಿದಿನ 1 ಸಾವಿರ ಲಡ್ಡು ಬರುತ್ತೆ: ಟಿಟಿಡಿ
ಟಿಟಿಡಿ ದೇವಸ್ಥಾನದ ವ್ಯವಸ್ಥಾಪಕಿ ಜಯಂತಿ ಮಾತನಾಡಿ, ತಿರುಪತಿಯಿಂದ ಲಡ್ಡು ಪ್ರಸಾದ ಈ ದೇವಸ್ಥಾನಕ್ಕೆ ಬರುತ್ತಿದೆ. ಮೊದರಲು ಶನಿವಾರ ಮಾರಾಟ ಮಾಡುತ್ತಿದ್ವಿ. ಈಗ ಪ್ರತಿದಿನ ಮಾರಾಟ ಮಾಡಲಾಗುತ್ತಿದೆ. ತಿರುಪತಿಯಿಂದ ಲಡ್ಡು ಕಳುಹಿಸುತ್ತಾರೆ. ನಾವು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಪ್ರತಿ ಶನಿವಾರ 8 ಸಾವಿರ ಲಡ್ಡು ಕಳುಹಿಸುತ್ತಿದ್ದರು. ಈಗ ಪ್ರತಿದಿನ 1 ಸಾವಿರ ಲಡ್ಡು ಕಳುಹಿಸುತ್ತಾರೆ. ಲಡ್ಡು ವಿಚಾರವಾಗಿ ಇನ್ನೂವರೆಗೂ ಭಕ್ತರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು.