ಮಡಿಕೇರಿ(Madikeri): ಭಾಗಮಂಡಲದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆಲವೆಡೆ ಮಣ್ಣು ಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆಗೆ ಗುಡ್ಡದಿಂದ ಕೆಳಗಿಳಿಯುತ್ತಿರುವ ಕೆಸರು ಅಡ್ಡಿಯುಂಟುಮಾಡಿದೆ.
ಭಾಗಮಂಡಲ, ಕರಿಕೆ, ತಣ್ಣಿಮಾಣಿ ರಸ್ತೆಗಳಲ್ಲಿ ಬಿದ್ದ ಮಣ್ಣು, ಕಲ್ಲು ಹಾಗೂ ಮರದ ದಿಮ್ಮಿಗಳ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಬೆಟ್ಟದಿಂದ ಧಾರಾಕಾರವಾಗಿ ಕೆಳಗಿಳಿಯುತ್ತಿರುವ ಕೆಸರು ಮಿಶ್ರಿತ ನೀರು ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಇಂದೂ ರೆಡ್ ಅಲರ್ಟ್ ಘೋಷಿಸಿದೆ.
ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ 19 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ.’ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಗೆ ಕೆಲವು ಮನೆಗಳ ಸಮೀಪ ಮಣ್ಣು ಕುಸಿದಿದ್ದು ಅವರೆಲ್ಲರೂ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮಳೆ ಇನ್ನೂ ಮುಂದುವರಿದಿದೆ.
ಭಾಗಮಂಡಲದಲ್ಲಿ 9, ಎಮ್ಮೆಮಾಡುವಿನಲ್ಲಿ 8, ಸೋಮವಾರಪೇಟೆಯ ಶಿರಂಗಾಲದಲ್ಲಿ 6 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.