ಮನೆ ಸ್ಥಳೀಯ ಮಹರ್ಷಿ ವಾಲ್ಮೀಕಿ ಎಲ್ಲರಿಗೂ ಆಧರಣೀಯ ಪುರುಷರು: ಡಾ.ಹೆಚ್.ಸಿ.ಮಹದೇವಪ್ಪ

ಮಹರ್ಷಿ ವಾಲ್ಮೀಕಿ ಎಲ್ಲರಿಗೂ ಆಧರಣೀಯ ಪುರುಷರು: ಡಾ.ಹೆಚ್.ಸಿ.ಮಹದೇವಪ್ಪ

0

ಮೈಸೂರು: ಜನಜೀವನದಲ್ಲಿ ಸಾಮರಸ್ಯ, ಪ್ರೀತಿ, ಅಭಿವೃದ್ಧಿ ಪರವಾದ ಆಡಳಿತ, ತ್ಯಾಗ ಮತ್ತು ಗುಣಾತ್ಮಕವಾದ ನಡವಳಿಕೆಯನ್ನು ತಮ್ಮ ಕಾವ್ಯದ ಮೂಲಕ ಈಡೀ ಪ್ರಪಂಚಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ಅವರು ಎಲ್ಲರಿಗೂ ಆಧರಣೀಯ ಪುರುಷರು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

Join Our Whatsapp Group

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಾಮಂದಿರದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಸಚಿವರು ಮಾತನಾಡಿದರು.

ಮಹರ್ಷಿ ರಾಮಾಯಣವು ಪ್ರಪಂಚದಲ್ಲೇ ಒಂದು ಮಹಾಕಾವ್ಯ. ಈ ಕಾವ್ಯಕ್ಕೆ ಪರ್ಯಾಯವಾಗಿ ಮತ್ತೊಂದು ಕಾವ್ಯ ಬರಲಿಲ್ಲ. ಬೆಟ್ಟ, ಗುಡ್ಡ, ಕಾಡು, ಮೇಡುಗಳಲ್ಲಿ ಅಲೆದಾಡಿ ಅಂತಹ ಕಾವ್ಯ ರಚಿಸಿದ ಅವರನ್ನು ಪಡೆದದ್ದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ. ಮಹರ್ಷಿ ಅವರ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳು, ಮುಂದಾಲೋಚನೆಯು ಶೋಷಿತ ವರ್ಗಗಳು, ತುಳಿತಕ್ಕೊಳಗಾದ ಸಮುದಾಯಗಳಿಗೆ ಮಾರ್ಗದರ್ಶನವಾಗಲಿ ಎಂದು ಆಶಿಸಿದರು.

ರಾಮನ ವ್ಯಕ್ತಿತ್ವವನ್ನು ಚಿತ್ರಿಸಿದವರು ಮಹರ್ಷಿ ವಾಲ್ಮಿಕಿ. ರಾಮಾಯಣದಲ್ಲಿನ ಸೀತೆ, ಲಕ್ಷ್ಮಣ, ರಾವಣ, ಆಂಜನೇಯ ಸೇರಿದಂತೆ ವಿಭಿನ್ನವಾದ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ಮನುಷ್ಯನ ಜೀವನಕ್ಕೆ ಹತ್ತಿರ, ಪೂರಕವಾಗುವಂತಿವೆ. ಆಡಳಿತ, ಪ್ರೀತಿ, ತ್ಯಾಗ, ನಾಯಕತ್ವ, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ, ಪಿತೃ ಪರಿಪಾಲನೆ, ಕೊಟ್ಟ ಮಾತಿಗೆ ನಡೆಯುವ ಎಲ್ಲಾ ಗುಣಗಳು ಮನುಷ್ಯನ ಜೀವನಕ್ಕೆ ಅತ್ಯಂತ ಆದರ್ಶವಾಗಿದೆ ಎಂದರು.

ಮಹರ್ಷಿ ವಾಲ್ಮೀಕಿ ಅವರ ಇತಿಹಾಸ ತಿಳಿಯದೆ ಇನ್ನೊಂದು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ರಾಮಾಯಣ ಎಂಬ ಶ್ರೇಷ್ಠ ಕಾವ್ಯದಲ್ಲಿ ವಿಭಿನ್ನವಾದ ಪಾತ್ರಗಳ ಮೂಲಕ ಮನುಷ್ಯನ ಬದುಕನ್ನು ವಿಶ್ಲೇಷಣೆ ಮಾಡಿದ್ದಾರೆ. ಜೀವನಕ್ಕೆ ಹಾಗೂ ನೈಜತೆಗೆ ಹತ್ತಿರವಾದ ವಿಷಗಳನ್ನು ತಿಳಿಸಿದ್ದಾರೆ. ಈ ಆಧಾರದಲ್ಲಿ ನಾವು ಬದುಕು, ಪ್ರೀತಿ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಟ್ಟಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು‌.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಘೋಷಣೆ ಮಾಡಿತು. ಎಸ್.ಸಿ ಮತ್ತು ಎಸ್.ಟಿ ಜನರಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿಗೆ ಮಾಡಲಾಯಿತು. ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದೇವೆ. 1994 ರಲ್ಲಿ ನಾಯಕ ಸಮುದಾಯವನ್ನು ಎಸ್.ಟಿ ಗೆ ಸೇರಿಸಬೇಕೆಂದು ನಮ್ಮ ಸಚಿವ ಸಂಪುಟವು ಬೆಂಬಲ ನೀಡಿತ್ತು ಎಂದು ಸ್ಮರಿಸಿದರು.

ವಾಲ್ಮೀಕಿ, ನಾಯಕ, ಪರಿವಾರ ಎಲ್ಲವೂ ಪರ್ಯಾಯ ಪದಗಳು. ಈ ಗೊಂದಲ ಕುರಿತು ಹೋರಾಟಗಾರರ ಮನವಿ ಮೇರೆಗೆ ನಮ್ಮ ಸಚಿವ ಸಂಪುಟದಲ್ಲಿ ಚರ್ಚಿಸಿ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲಾಗುವುದು. ವಾಲ್ಮೀಕಿ ಮಹರ್ಷಿ ಪ್ರತಿಮೆಯನ್ನು ಉದ್ಯಾನದಲ್ಲಿ ಕಾನೂನಾತ್ಮವಾಗಿ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಸರ್ಕಾರವು ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಭಾಗದ ಎಲ್ಲಾ ವರ್ಗದವರಿಗೆ ಅನುಕೂಲವಾಗಿದೆ. ಎಸ್‌.ಸಿ.ಎಸ್.ಪಿ ಮತ್ತು ಟಿ.ಎಸ್‌.ಪಿ ಕಾಯ್ದೆಯ ಆಶಯಗಳನ್ನು ಯೋಜನಾತ್ಮಕವಾಗಿ ಸಮುದಾಯದ ಜನರಿಗೆ ಉಪಯೋಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭಾಕಾರ್ಯಕ್ರಮಕ್ಕೂ ಮುನ್ನ ಅರಮನೆ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆಕರ್ಷಕ ಸ್ತಬ್ದಚಿತ್ರಗಳು ಹಾಗೂ ಕಲಾತಂಡಗಳ ಮೆರವಣಿಗೆಯು ಕಲಾಮಂದಿರದವರೆಗೆ ಸಾಗಿತು. ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯಕ್, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ರಂಗೇಗೌಡ, ಯೋಜನಾ ಸಮನ್ವಯಾಧಿಕಾರಿ ಎನ್.ಮುನಿರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು‌.

ಹಿಂದಿನ ಲೇಖನನಿಗಮ, ಮಂಡಳಿಗಳ ನೇಮಕಕ್ಕೆ ಪಟ್ಟಿ ಸಿದ್ಧ: ಮಹತ್ವದ ಸಭೆ ನಡೆಸಿದ ಸಿದ್ದು ಡಿಕೆಶಿ
ಮುಂದಿನ ಲೇಖನಭವ್ಯರೂಪ